ಆರ್ಥಿಕ ಸಬಲೀಕರಣಕ್ಕೆ ಎಂಎಸ್‌ಎಂಇ ಪಾತ್ರ: ವಿವೇಕ್‌

KannadaprabhaNewsNetwork |  
Published : Jul 01, 2025, 12:47 AM IST
ಐಸಿಎಐ ಎಂಎಸ್‌ಎಂಇ ಮಹೋತ್ಸವ ಕಾರ್ಯಕ್ರಮ  | Kannada Prabha

ಸಾರಾಂಶ

ಅಂತಾರಾಷ್ಟ್ರೀಯ ಎಂಎಸ್‌ಎಂಇ ದಿನಾಚರಣೆ ಪ್ರಯುಕ್ತ ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆ (ಐಸಿಎಐ) ಮಂಗಳೂರು ಶಾಖೆಯ ವತಿಯಿಂದ ಕರಂಗಲ್ಪಾಡಿಯ ಮಹೇಂದ್ರ ಆರ್ಕೆಡ್‌ನಲ್ಲಿರುವ ಐಸಿಎಐ ಭವನದಲ್ಲಿ ಶುಕ್ರವಾರ ‘ಐಸಿಎಐ ಎಂಎಸ್‌ಎಂಇ ಮಹೋತ್ಸವ’ ಕಾರ್ಯಕ್ರಮ ನೆರವೇರಿತು.

ಕನ್ನಡಪ್ರಭ ವಾರ್ತೆ ಮಂಗಳೂರುದೇಶದ ಆರ್ಥಿಕ ಸಬಲೀಕರಣದಲ್ಲಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳನ್ನು ಒಳಗೊಂಡ ಎಂಎಸ್‌ಎಂಇ ಜವಾಬ್ದಾರಿಯುತ ಕಾರ್ಯ ನಿರ್ವಹಿಸುತ್ತಿದೆ. ಗ್ರಾಮೀಣ ಬದುಕಿಗೆ ಹೊಸ ಭರವಸೆ ಹುಡುಕುವಲ್ಲಿಯೂ ಎಂಎಸ್‌ಎಂಇ ಪಾತ್ರ ಮಹತ್ವವಾದ್ದು ಎಂದು ದ.ಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಲಿ.ನ ವ್ಯವಸ್ಥಾಪಕ ನಿರ್ದೇಶಕ ವಿವೇಕ್‌ ಡಿ. ಹೇಳಿದರು.

ಅಂತಾರಾಷ್ಟ್ರೀಯ ಎಂಎಸ್‌ಎಂಇ ದಿನಾಚರಣೆ ಪ್ರಯುಕ್ತ ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆ (ಐಸಿಎಐ) ಮಂಗಳೂರು ಶಾಖೆಯ ವತಿಯಿಂದ ಕರಂಗಲ್ಪಾಡಿಯ ಮಹೇಂದ್ರ ಆರ್ಕೆಡ್‌ನಲ್ಲಿರುವ ಐಸಿಎಐ ಭವನದಲ್ಲಿ ಶುಕ್ರವಾರ ‘ಐಸಿಎಐ ಎಂಎಸ್‌ಎಂಇ ಮಹೋತ್ಸವ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಚೀನಾವು ಎಂಎಸ್‌ಎಂಇ ಮೂಲಕವೇ ಜಗತ್ತಿನಲ್ಲಿ ಅತೀ ದೊಡ್ಡ ರಾಷ್ಟ್ರವಾಗಿ ಬೆಳೆದು ನಿಂತಿದೆ. ಸಣ್ಣ ಮಟ್ಟಿನ ಉದ್ಯಮ ಆರಂಭಿಸಿದವರು ಸಣ್ಣ ಸ್ವರೂಪದಲ್ಲಿ ಆರ್ಥಿಕ ಶಕ್ತಿಯನ್ನು ದೇಶಕ್ಕೆ ನೀಡುತ್ತ ಮುಂದೆ ಅವರೇ ದೊಡ್ಡ ಗಾತ್ರದ ಉದ್ಯಮ ಸ್ಥಾಪಿಸಲು ಅವಕಾಶವಿದೆ ಎಂದರು.ಎಂಎಸ್‌ಎಂಇಗಳು ಗ್ರಾಮೀಣ ಭಾಗದಲ್ಲಿ ಬೆಳೆಯಲು ಅವಕಾಶವಿದೆ. ಯುವ ಸಮೂಹ ತೊಡಗಿಸಿಕೊಳ್ಳಲು ಅನುಕೂಲವಿದೆ. ಸಮಾಜಕ್ಕೂ ಇದರಿಂದ ಅನುಕೂಲವಿದೆ ಎಂದು ಹೇಳಿದ ಅವರು ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆ ಈ ಕಾರ್ಯಕ್ಕೆ ಬೆಂಬಲ ನೀಡುತ್ತಿರುವುದು ಶ್ಲಾಘನೀಯ ಎಂದರು.ಐಸಿಎಐ ಎಸ್‌ಐಆರ್‌ಸಿಯ ಮಂಗಳೂರು ಶಾಖೆಯ ಅಧ್ಯಕ್ಷ ಸಿಎ ಪ್ರಶಾಂತ್‌ ಪೈ ಕೆ. ಮಾತನಾಡಿ, ಎಂಎಸ್‌ಎಂಇ ದಿನದ ನೆನಪಿಗಾಗಿ ದೇಶದಾದ್ಯಂತ ಐಸಿಎಐ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಎಂಎಸ್‌ಎಂಇಯ ಹೆಸರಿನಲ್ಲಿ ಒಂದು ದಿನ ಲೆಕ್ಕಪರಿಶೋಧಕರು ಎಂಎಸ್‌ಎಂಇಯ ಸೇವೆಗಾಗಿ ಎಂಬ ಶೀರ್ಷಿಕೆಯಡಿ ಕಾರ್ಯಕ್ರಮ ಆಯೋಜಿಸಲಾಗಿದೆ. ಎಂಎಸ್‌ಎಂಇಗಳು (ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳು) ಹಾಗೂ ನವೋದ್ಯಮಗಳಿಗೆ ಅಗತ್ಯವಾದ ಜ್ಞಾನ, ಸಂಪನ್ಮೂಲಗಳು ಮತ್ತು ನೆಟ್‌ವರ್ಕಿಂಗ್‌ ಅವಕಾಶಗಳನ್ನು ಒದಗಿಸುವ ಮೂಲಕ ಅವುಗಳನ್ನು ಸಬಲೀಕರಣಗೊಳಿಸುವುದು ಆಶಯ ಎಂದರು.ಭಾರತೀಯ ಕೈಗಾರಿಕಾ ಒಕ್ಕೂಟದ ಅಧ್ಯಕ್ಷ ನಟರಾಜ್‌ ಹೆಗ್ಡೆ, ಎಂಎಸ್‌ಎಂಇ ಸಚಿವಾಲಯದ ಎಂಎಸ್‌ಎಂಇ ಅಭಿವೃದ್ಧಿ ಮತ್ತು ಸೌಲಭ್ಯ ಕಚೇರಿಯ ನಿವೃತ್ತ ಜಂಟಿ ನಿರ್ದೇಶಕ ಡಾ. ಕೆ.ಸಾಕ್ರೆಟಿಸ್‌ ಶುಭಹಾರೈಸಿದರು.ತಜ್ಞರ ಅಧಿವೇಶನದಲ್ಲಿ ಸಿಎ ಸಂಕೇತ್‌ ಎಸ್‌.ನಾಯಕ್‌ ಅವರು ‘ಎಂಎಸ್‌ಎಂಇಗಳು ಮತ್ತು ಸ್ಟಾರ್ಟ್‌ಅಪ್‌ಗಳ ಪ್ರಯೋಜನಗಳು, ಹಣಕಾಸು ಮತ್ತು ತೆರಿಗೆಯನ್ನು ಅರ್ಥಮಾಡಿಕೊಳ್ಳುವುದು’ ಎಂಬ ವಿಚಾರವಾಗಿ ವಿಶೇಷ ಉಪನ್ಯಾಸ ನೀಡಿದರು.ಐಸಿಎಐ ಎಸ್‌ಐಆರ್‌ಸಿ ಮಂಗಳೂರು ಶಾಖೆಯ ಕಾರ್ಯದರ್ಶಿ ಸಿಎ ಮಮತಾ ರಾವ್‌ ಮತ್ತಿತರರಿದ್ದರು.

PREV

Recommended Stories

79 ವರ್ಷಗಳ ನಂತ್ರ ಅಥಣಿಗೆ ಸರ್ಕಾರಿ ಪ್ರೌಢಶಾಲೆ!
ಪ್ರಜಾಪ್ರಭುತ್ವ ಉಳಿವಿಗೆ ಹೋರಾಟ ಅನಿವಾರ್ಯ