ಭಟ್ಕಳ: ಪಟ್ಟಣದ ನ್ಯೂ ಇಂಗ್ಲಿಷ್ ಸ್ಕೂಲ್ ಸನಿಹದ ಕಮಲಾವತಿ ಶಾನಭಾಗ ಸಭಾಭವನದಲ್ಲಿ ಉತ್ತರ ಕನ್ನಡ ಜಿಲ್ಲಾ ಸ್ಪೋರ್ಟ್ಸ್ ಕರಾಟೆ ಅಸೋಸಿಯೇಶನ್ ವತಿಯಿಂದ ಏರ್ಪಡಿಸಿದ್ದ ರೆಫ್ರಿ ತರಬೇತಿಯನ್ನು ರಾಜ್ಯ 7 ಡನ್ ಬ್ಲ್ಯಾಕ್ ಬೆಲ್ಟ್ ಡಬ್ಲ್ಯುಕೆಎಫ್ಸಿ ರೆಫ್ರಿ ಕೆ.ಪಿ. ಜೋಸ್ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಕರಾಟೆ ಸ್ಪರ್ಧೆಯಲ್ಲಿ ರೆಫ್ರಿಯಾದವರ ನಿರ್ಣಾಯಕ ಪಾತ್ರವಾಗಿರುತ್ತದೆ. ನಿರ್ಣಯ ನೀಡುವಾಗ ತನ್ನ ವಿದ್ಯಾರ್ಥಿ ಪರವಾಗಿ ತಪ್ಪು ನಿರ್ಣಯ ನೀಡಿದರೆ ಮುಂದಿನ ಹಂತದಲ್ಲಿ ಸ್ಪರ್ಧೆಯಲ್ಲಿ ಅವನ ಭವಿಷ್ಯ ಮಣ್ಣುಪಾಲಾಗುತ್ತದೆ. ರೆಫ್ರಿಯಾದವರು ಸ್ಪರ್ಧೆಯ ಸಂಪೂರ್ಣ ನಿಯಮ ಅರಿತು ಪಕ್ಷಪಾತ ಮಾಡದೇ ನಿರ್ಣಯ ಮಾಡಬೇಕು. ಕರಾಟೆ ತರಬೇತುದಾರು ಹಾಗೂ ರೆಫ್ರಿಗಳು ಕಾಲಕಾಲಕ್ಕೆ ಬದಲಾಗುವ ಕರಾಟೆ ಸ್ಪರ್ಧೆಯ ನಿಯಮದ ಬಗ್ಗೆ ತಿಳಿದುಕೊಂಡು ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ಮಾಡಬೇಕು ಎಂದರು.ಪತ್ರಕರ್ತ ಮೋಹನ ನಾಯ್ಕ ಮಾತನಾಡಿ, ಭಟ್ಕಳದಲ್ಲಿ ತರಬೇತಿ ಪಡೆದ ಕರಾಟೆ ಪಟುಗಳು ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿ ಗಳಿಸಿ ಬಂದಿದ್ದಾರೆ. ಇದಕ್ಕೆ ಕಾರಣ ಇಲ್ಲಿನ ವ್ಯವಸ್ಥಿತ ತರಬೇತಿ ಕಾರಣವಾಗಿದೆ. ಕಾಲಕಾಲಕ್ಕೆ ಬದಲಾಗುವ ಸ್ಪರ್ಧಾ ನಿಯಮಗಳನ್ನು ತರಬೇತುದಾರರು ಅರಿತು ವಿದ್ಯಾರ್ಥಿಗಳಿಗೆ ಉತ್ತಮ ತರಬೇತಿ ನೀಡಿದರೆ ವಿದ್ಯಾರ್ಥಿಗಳು ಯಶಸ್ಸು ಗಳಿಸಲು ಸಾಧ್ಯವಾಗುತ್ತದೆ ಎಂದರು.
ವಿದ್ಯಾಭಾರತಿ ಶಾಲೆಯ ಪ್ರಾಂಶುಪಾಲೆ ರೂಪಾ ಖಾರ್ವಿ ಮಾತನಾಡಿ, ಕರಾಟೆ ಕಲಿತ ನಂತರ ರೆಫ್ರಿ ಆಗಿ ನೇಮಕವಾಗಲು ಸ್ಪರ್ಧೆಯ ನಿಯಮಗಳ ಬಗ್ಗೆ ಸತತ ಅಧ್ಯಯನ ಮುಖ್ಯವಾಗಿರುತ್ತದೆ. ಏಕಾಗ್ರತೆ ಮತ್ತು ಕಲಿಕೆಯ ಮನಸ್ಸು ಇದ್ದರೆ ಯಶಸ್ಸು ಸಾಧ್ಯ ಎಂದರು.ಪ್ರಾಸ್ತಾವಿಕವಾಗಿ ಮಾತನಾಡಿದ ಉತ್ತರ ಕನ್ನಡ ಜಿಲ್ಲಾ ಸ್ಪೋರ್ಟ್ಸ್ ಕರಾಟೆ ಅಸೋಸಿಯೇಶನ್ ಅಧ್ಯಕ್ಷ ಅರವಿಂದ ನಾಯ್ಕ, ಬಹಳ ವರ್ಷದ ನಂತರ ಭಟ್ಕಳದಲ್ಲಿ ಈಶ್ವರ ನಾಯ್ಕ ಅವರು ಈ ತರಬೇತಿಯನ್ನು ಆಯೋಜಿಸಿದ್ದು, ಇದರ ಸದುಪಯೋಗವನ್ನು ಎಲ್ಲ ತರಬೇತುದಾರರು ಪಡೆದುಕೊಳ್ಳುವಂತೆ ತಿಳಿಸಿದರು.
ಉತ್ತರ ಕನ್ನಡ ಜಿಲ್ಲಾ ಸ್ಪೋರ್ಟ್ಸ್ ಕರಾಟೆ ಅಸೋಸಿಯೇಶನ್ ಕಾರ್ಯದರ್ಶಿ ಆನಂದ ನಾಯ್ಕ ಮಾತನಾಡಿದರು. ಉತ್ತರ ಕನ್ನಡ ಜಿಲ್ಲಾ ಸ್ಪೋರ್ಟ್ಸ್ ಕರಾಟೆ ಅಸೋಸಿಯೇಶನ್ ಉಪಾಧ್ಯಕ್ಷ ಈಶ್ವರ ನಾಯ್ಕ, ಕಾನೂನು ಸಲಹೆಗಾರ ಮನೋಜ ನಾಯ್ಕ ಇದ್ದರು. ನಾಗಶ್ರೀ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು.