ಕನ್ನಡಪ್ರಭ ವಾರ್ತೆ ಕೋಲಾರಸಚಿವ ಪ್ರಿಯಾಂಕ್ ಖರ್ಗೆ ಆರ್ಎಸ್ಎಸ್ ಟೀಕಿಸಿಕೊಂಡು ಇಟಲಿ ಮೇಡಂ ಮತ್ತು ರಾಹುಲ್ ಗಾಂಧಿರನ್ನು ಮೆಚ್ಚಿಸಿ ಹೀರೋ ಆಗಿ ರಾಜ್ಯದ ಸಿಎಂ ಸ್ಥಾನ ಪಡೆಯುವ ದಿಸೆಯಲ್ಲಿ ಹಗಲು ಕನಸು ಕಾಣುತ್ತಿದ್ದಾರೆ ಬಿಜೆಪಿಯ ಮಾಜಿ ಸಂಸದ ಎಸ್. ಮುನಿಸ್ವಾಮಿ ವಾಗ್ದಾಳಿ ನಡೆಸಿದರು. ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಚಿವ ಪ್ರಿಯಾಂಕ ಅವರು ತಮಗೆ ವಹಿಸಿರುವ ಐ.ಟಿ. ಬಿ.ಟಿ. ಕಂಪನಿಗಳ ಅಭಿವೃದ್ಧಿ, ಉದ್ಯೋಗ ಸೃಷ್ಟಿ ಮುಂತಾದ ಜವಾಬ್ದಾರಿಯುತ ಕೆಲಸಗಳನ್ನು ಮಾಡದೆ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಚರ್ಚೆಯಲ್ಲಿ ತೊಡಗಿ ಪುಕ್ಕಟೆ ಪ್ರಚಾರ ಪ್ರಿಯರಾಗಿದ್ದಾರೆ ಎಂದು ವ್ಯಂಗವಾಡಿದರು.ಅಂಬೇಡ್ಕರ್ ತಂದ ಸಂವಿಧಾನದ ಮೀಸಲಾತಿ ಭಿಕ್ಷೆಯಲ್ಲಿ ಮಲ್ಲಿಕಾರ್ಜುನ ಖರ್ಗೆ, ಪ್ರಿಯಾಂಕ ಖರ್ಗೆ ಹಾಗೂ ರಾಧಾಕೃಷ್ಣ ಸಹ ಸಂಸದರಾಗಿ ಸ್ಥಾನಮಾನ ಪಡೆದಿದ್ದಾರೆ. ಅಂಬೇಡ್ಕರ್ಗೆ ರಾಜಕಾರಣದಲ್ಲಿ ಬೆಳೆಯಲು ಅವಕಾಶ ನೀಡದಂತೆ ಕುತಂತ್ರ ಮಾಡಿದಂತ ಕಾಂಗ್ರೆಸ್ನ ಖಳನಾಯಕರು ಎಂದು ದೂರಿದರು.ಆರ್.ಎಸ್.ಎಸ್ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುತ್ತಿರುವ ಪ್ರಿಯಾಂಕ ಖರ್ಗೆ ಡಿಎನ್ಎ ಪರೀಕ್ಷೆಯಾಗಬೇಕು. ಮಲ್ಲಿಕಾರ್ಜುನ ಖರ್ಗೆ ಇಟಾಲಿ ಮೇಡಂ ಮೆಚ್ಚಿಸಲು ತಮ್ಮ ಮಕ್ಕಳಿಗೆ ಪ್ರಿಯಾಂಕ್ ಹಾಗೂ ರಾಹುಲ್ ಎಂದು ಹೆಸರಿಟ್ಟು ಎ.ಐ.ಸಿ.ಸಿ. ಅಧ್ಯಕ್ಷ ಸ್ಥಾನ ಪಡೆದರು. ಅದೇ ರೀತಿ ಪ್ರಿಯಾಂಕ ಅವರು ಆರ್.ಎಸ್.ಎಸ್ ಹಾಗೂ ಬಿಜೆಪಿಯನ್ನು ಟೀಕಿಸುವ ಮೂಲಕ ರಾಜ್ಯದ ಸಿಎಂ ಕುರ್ಚಿ ಪಡೆಯಲು ಕುತಂತ್ರ ರೂಪಿಸಿದ್ದಾರೆ ಎಂದು ಆರೋಪಿಸಿದರು. ಆರ್.ಎಸ್.ಎಸ್. ನೋಂದಣಿಯಾಗಿಲ್ಲ ಎಂದು ದೂರುತ್ತಿದ್ದಾರೆ. ಆದರೆ ಆರ್.ಎಸ್.ಎಸ್. ಪಕ್ಷಕ್ಕೆ ನೂರಾರು ವರ್ಷದ ಇತಿಹಾಸವಿದೆ. ಸ್ವಾತಂತ್ರ್ಯಕ್ಕಾಗಿ 10 ಮಂದಿಯಲ್ಲ ಸಾವಿರಾರು ಮಂದಿ ಹೋರಾಟ ಮಾಡಿ ತಮ್ಮ ಪ್ರಾಣ ತ್ಯಾಗ ಬಲಿದಾನ ಮಾಡಿದ್ದಾರೆ. ದಲಿತ ಸಮುದಾಯದಲ್ಲಿ ಹುಟ್ಟಿರುವ ಇವರು ತಮ್ಮ ತಾತನ ಜನ್ಮ ದಿನಾಂಕದ ಪ್ರಮಾಣ ಪತ್ರ ತರಲಿ. ತಾತನೇ ಇಲ್ಲದೆ ತಂದೆ ಬರಲು ಹೇಗೆ ಸಾಧ್ಯವಾಗುತ್ತೆ, ಹಿಂದೂಗಳು, ಹಿಂದುತ್ವವನ್ನು ವಿರೋಧಿಸುವಂತ ಇಂತಹವರಿಗೆ ಆರ್.ಎಸ್.ಎಸ್ ದಾಖಲೆಗಳು ಕೊಡುವಂತ, ತೋರಿಸುವಂತ ಅವಶ್ಯಕತೆ ಇಲ್ಲ ಎಂದರು. ಪ್ರಿಯಾಂಕ ಖರ್ಗೆ ರಾಷ್ಟ್ರ ಪ್ರೇಮ, ರಾಷ್ಟ್ರ ಭಕ್ತಿ ಇರುವಂತ ಈ ನೆಲದ ಹಿಂದೂಗಳ ಸಂಘಟನೆ ಹೀಯ್ಯಾಳಿಸಿರುವುದಕ್ಕೆ ಕೂಡಲೇ ಕ್ಷಮೆಯಾಚಿಸಬೇಕು. ಐಟಿ, ಬಿಟಿಯ ಒಂದು ಕಂಪನಿ ತರಲು ಯೋಗ್ಯತೆ ಇಲ್ಲದವರಿಗೆ ಸಚಿವ ಸ್ಥಾನ ನೀಡಿರುವುದು ನಾಲಾಯಕ್ ಆಗಿದೆ. ದಲಿತರು, ಅಂಬೇಡ್ಕರ್, ಸಂವಿಧಾನ ಈ ಪದಗಳು ಬಳಸಿಕೊಂಡು ಇವರು ಸ್ವಾರ್ಥಕ್ಕೆ ಬಳಸಿಕೊಂಡು ಉದ್ದಾರ ಆಗುತ್ತಿದ್ದಾರೆ ಎಂದರು.