ಕನ್ನಡಪ್ರಭ ವಾರ್ತೆ ಅರಸೀಕೆರೆ
ಗ್ರಾಮದೇವತೆ ಶ್ರೀ ಕರಿಯಮ್ಮ ದೇವಾಲಯದಿಂದ ಆರಂಭವಾದ ಪಥಸಂಚಲನವು ಹೂವಿನಿಂದ ಅಲಂಕೃತಗೊಂಡ ವಿಶೇಷ ವಾಹನದ ಮೂಲಕ ಶ್ರೀ ಭಾರತಮಾತೆ, ಸಂಘದ ಸ್ಥಾಪಕ ಡಾ. ಹೆಡ್ಗೆವಾರ್ ಮತ್ತು ದ್ವಿತೀಯ ಸರ ಸಂಘಚಾಲಕ ಶ್ರೀ ಮಾಧವರಾವ್ ಸದಾಶಿವರಾವ್ ಗೋಳ್ವಲ್ಕರ್ ಅವರ ಭಾವಚಿತ್ರಗಳೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಪಥಸಂಚಲನವು ಕೊನೆಗೆ ಶ್ರೀ ಕೋಡಿಮಠ ಪಿಯುಸಿ ಕಾಲೇಜು ಆವರಣದಲ್ಲಿ ಭಾವಗಂಭೀರವಾಗಿ ಅಂತ್ಯಗೊಂಡಿತು.
ನಗರದ ಬೀದಿಗಳು ತಳಿರು ತೋರಣ, ರಂಗೋಲಿಗಳಿಂದ ಅಲಂಕರಿಸಲ್ಪಟ್ಟಿದ್ದವು. ಪಥಸಂಚಲನದ ಸಮಯದಲ್ಲಿ ನಾಗರಿಕರು “ಭಾರತ್ ಮಾತಾಕೀ ಜೈ” ಘೋಷಣೆಗಳಿಂದ ವಾತಾವರಣವನ್ನು ದೇಶಭಕ್ತಿಯಿಂದ ತುಂಬಿಸಿದರು. ಪಿ.ಪಿ. ವೃತ್ತದಲ್ಲಿ ನಿರ್ಮಿಸಲಾದ ವೇದಿಕೆಯಲ್ಲಿ ಮಕ್ಕಳು ವೀರರು, ವನಿತೆಯರು ಹಾಗೂ ಮಹನೀಯರ ವೇಷಭೂಷಣದಲ್ಲಿ ಪಾಲ್ಗೊಂಡು ನಾಗರಿಕರ ಮೆಚ್ಚುಗೆಗೆ ಪಾತ್ರರಾದರು. ಅಲಂಕೃತ ವಾಹನದಲ್ಲಿ ಭಗವಧ್ವಜದೊಂದಿಗೆ ಸಾಗಿದ ಭಾರತಮಾತೆಯ ವೇಷಧಾರಿಣಿಯ ತ್ರಿವರ್ಣ ಧ್ವಜ ಪ್ರದರ್ಶನ ವಿಶೇಷ ಆಕರ್ಷಣೆಯಾಗಿ ಪರಿಣಮಿಸಿತು. ಪಥಸಂಚಲನದ ವೇಳೆ ಪೊಲೀಸ್ ಇಲಾಖೆ ಬಿಗಿ ಬಂದೋಬಸ್ತ್ ಒದಗಿಸಿತ್ತು. ಭಾಗವಹಿಸಿದ ಸ್ವಯಂಸೇವಕರಿಗೆ ತಂಪುಪಾನೀಯ ಮತ್ತು ಹಣ್ಣುಗಳನ್ನು ವಿತರಿಸಲಾಯಿತು.ಈ ಸಂದರ್ಭದಲ್ಲಿ ವಿಭಾಗ ಕಾರ್ಯವಾಹ ವಿಜಯಕುಮಾರ್, ವಿಭಾಗ ವ್ಯವಸ್ಥಾ ಪ್ರಮುಖ ಗಿರೀಶ್, ಜಿಲ್ಲಾ ಕಾರ್ಯವಾಹ ಚಂದನ್, ನಗರ ಕಾರ್ಯವಾಹ ಹಿತೇಶ್, ಬೌದ್ಧಿಕ್ ಪ್ರಮುಖ ಕಾರ್ತಿಕ್ ಸೇರಿದಂತೆ ಟೋಳಿ ಹಾಗೂ ಕಸಬಾ ಹೋಬಳಿಯ ಅನೇಕ ಸ್ವಯಂಸೇವಕರು ಸಕ್ರಿಯವಾಗಿ ಪಾಲ್ಗೊಂಡಿದ್ದರು.