ನಾರಾಯಣ ಹೆಗಡೆ
ಸಮೀಪದ ಗಣಜೂರು ಗ್ರಾಮದ ವ್ಯಾಪ್ತಿಯಲ್ಲಿ ಚಿನ್ನದ ನಿಕ್ಷೇಪ ಪತ್ತೆ ಹಚ್ಚಿದ್ದ ಡೆಕ್ಕನ್ ಗೋಲ್ಡ್ ಮೈನ್ಸ್ ಕಂಪನಿಗೆ ಗಣಿಗಾರಿಕೆ ನಡೆಸಲು ಅಗತ್ಯ ಅನುಮತಿ ಸಿಗದೇ ನನೆಗುದಿಗೆ ಬಿದ್ದಿದ್ದ ಯೋಜನೆ ಮತ್ತೆ ಮುನ್ನೆಲೆಗೆ ಬಂದಿದೆ. ತಾಂತ್ರಿಕ ಹಾಗೂ ಕಾನೂನು ತೊಡಕು ನಿವಾರಣೆಯತ್ತ ಕಂಪನಿ ಸಾಗಿದ್ದು, ಚಿನ್ನದ ಗಣಿಗಾರಿಕೆ ಆರಂಭದ ಕುರಿತು ಮತ್ತೆ ಜಿಲ್ಲೆಯಲ್ಲಿ ಚರ್ಚೆ ಶುರುವಾಗಿದೆ.
ಸುಪ್ರೀಂ ಕೋರ್ಟ್ ಇತ್ತೀಚಿನ ನೀಡಿದ ಮಹತ್ವದ ಆದೇಶವೊಂದು ಗಣಜೂರು ಚಿನ್ನದ ಗಣಿಗಾರಿಕೆ ನಡೆಸಲು ಕಂಪನಿಗೆ ಮರುಜೀವ ಸಿಕ್ಕಂತಾಗಿದೆ.ಡೆಕ್ಕನ್ ಗೋಲ್ಡ್ ಮೈನ್ಸ್ ಹಲವು ವರ್ಷಗಳ ಹಿಂದೆಯೇ ಗಣಜೂರು ಗ್ರಾಮದ ಸುತ್ತಮುತ್ತಲ ಜಮೀನುಗಳಲ್ಲಿ ಚಿನ್ನದ ನಿಕ್ಷೇಪದ ಕುರಿತು ವ್ಯಾಪಕ ಸಂಶೋಧನೆ ನಡೆಸಿತ್ತು. ಸುಮಾರು 72 ಎಕರೆ ಪ್ರದೇಶದಲ್ಲಿ ಚಿನ್ನದ ನಿಕ್ಷೇಪ ಇರುವುದು ದೃಢಪಟ್ಟಿತ್ತು. ಇದರ ಸಂಸ್ಕರಣೆ ಹಾಗೂ ಪ್ಲಾಂಟ್ ಸ್ಥಾಪನೆ ಸೇರಿದಂತೆ ಒಟ್ಟಾರೆ ಯೋಜನೆಗೆ ಸುಮಾರು 400 ಎಕರೆಗೂ ಹೆಚ್ಚು ಭೂಮಿಯ ಅಗತ್ಯವಿದೆ ಎಂದು ಅಂದಾಜಿಸಲಾಗಿದೆ.
ರೈತರಲ್ಲಿ ಆತಂಕ: ಕೋಳೂರು, ಗಣಜೂರು ಸುತ್ತಮುತ್ತಲಿನ ಕೃಷಿ ಭೂಮಿ ಫಲವತ್ತಾಗಿದೆ. ಈಗಾಗಲೇ ಕೈಗಾರಿಕಾ ಕಾರಿಡಾರ್ಗಾಗಿ ಭೂಮಿ ನೀಡಿ ಹಲವು ರೈತರು ಕಂಗಾಲಾಗಿದ್ದಾರೆ. ಈಗ ಚಿನ್ನದ ಗಣಿಗಾರಿಕೆ ಹೆಸರಿನಲ್ಲಿ ಜಮೀನು ಪಡೆದರೆ ನಮ್ಮ ಬದುಕು ಬೀದಿಗೆ ಬೀಳುತ್ತದೆ. ಗಣಿಗಾರಿಕೆಯಿಂದ ಇಡೀ ಗ್ರಾಮದ ಪರಿಸರ ನಾಶವಾಗುವ ಭೀತಿಯಿದೆ ಎಂದು ರೈತರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಓಪನ್ ಪಿಟ್ ಮಾದರಿಯ ಗಣಿಗಾರಿಕೆಯಿಂದಾಗಿ ಸುತ್ತಮುತ್ತಲಿನ ವಾತಾವರಣ, ಅಂತರ್ಜಲ ಕಲುಷಿತಗೊಂಡು ಊರೇ ಅವನತಿಯ ಹಾದಿ ಹಿಡಿಯಬಹುದು ಎಂಬುದು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ.
ಹಾವೇರಿ ಜಿಲ್ಲೆಯು ಏಲಕ್ಕಿ ನಾಡು ಎಂಬ ಹೆಗ್ಗಳಿಕೆಯಿಂದ ಈಗ ಚಿನ್ನದ ನಾಡು ಎಂಬ ಹೊಸ ಮುದ್ರೆ ಪಡೆಯುವತ್ತ ಸಾಗುತ್ತಿದೆಯಾದರೂ, ಅನ್ನ ನೀಡುವ ಭೂಮಿಯನ್ನು ಕಳೆದುಕೊಳ್ಳುವ ಭೀತಿಯಲ್ಲಿರುವ ರೈತರ ಹಿತರಕ್ಷಣೆಯನ್ನು ಸರ್ಕಾರ ಹೇಗೆ ಕಾಯುತ್ತದೆ ಎಂಬುದನ್ನು ಕಾದು ನೋಡಬೇಕಿದೆ.ಎರಡು ದಶಕದಿಂದ ನನೆಗುದಿಗೆ: ಹಾವೇರಿ ಸಮೀಪದ ಗಣಜೂರು ಸುತ್ತಮುತ್ತಲಿನ ಪ್ರದೇಶದಲ್ಲಿ ಡೆಕ್ಕನ್ ಗೋಲ್ಡ್ ಮೈನಿಂಗ್ ಕಂಪನಿ 2003ರಲ್ಲಿಯೇ ಚಿನ್ನದ ನಿಕ್ಷೇಪ ಇರುವುದನ್ನು ಪತ್ತೆ ಹಚ್ಚಿತ್ತು. ಗಣಿಗಾರಿಕೆಗೆ ಅನುಮತಿ ಕೋರಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. 2014ರ ಜು.24ರಂದೇ ಚಿನ್ನದ ಗಣಿಗಾರಿಕೆಗೆ ಕೇಂದ್ರ ಹಸಿರು ನಿಶಾನೆ ತೋರಿತ್ತು.