ಶಿವಾನಂದ.ಪಿ. ಮಹಾಬಲಶೆಟ್ಟಿ
ಅದೊಂದು ಬಡಕುಟುಂಬ, ಆತ ಖಾಸಗಿಯವರಲ್ಲಿ ದುಡಿಯುತ್ತ ಬಿಪಿಎಡ್ ಶಿಕ್ಷಣ ಕಲಿಯುತ್ತಿರುವ ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಮರೆಗುದ್ದಿ ಗ್ರಾಮದ ಸಂಗಮೇಶ ಅರ್ಜುನ ಹಳ್ಳಿ ಬನಹಟ್ಟಿಯಲ್ಲಿ ಜರುಗಿದ ಬಾಗಲಕೋಟೆ ವಿಶ್ವವಿದ್ಯಾಲಯದ ಅಂತರ ಕಾಲೇಜು ಮಟ್ಟದ ಪ್ರಥಮ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಮಹತ್ಸಾಧನೆ ಮಾಡುವ ಮೂಲಕ ವಿ.ವಿ. ಮಟ್ಟ, ರಾಷ್ಟ್ರೀಯ ಮಟ್ಟದಲ್ಲೂ ಗಮನ ಸೆಳೆಯುತ್ತಿದ್ದಾನೆ.
೨೪ ವರ್ಷದ ಸಂಗಮೇಶ ಪದವಿ ನಂತರ ಇದೀಗ ಬಾಗಲಕೋಟೆ ಶ್ರೀ ಬಸವೇಶ್ವರ ವಿದ್ಯಾವರ್ಧಕ ಸಂಸ್ಥೆಯಲ್ಲಿ ಬಿಪಿಎಡ್ ಕಲಿಯುತ್ತಿದ್ದು, ಓಟದಲ್ಲಿ ನೂರಾರು ಪದಕ ಪಡೆದು ಓಟದಲ್ಲಿ ರನ್ನಿಂಗ್ ಹಾರ್ಸ್ ಎಂಬ ಖ್ಯಾತಿಗೆ ಭಾಜನನಾಗಿದ್ದಾನೆ. ೩೨ ನಿಮಿಷ ೩೧ ಸೆಕೆಂಡ್ ನಲ್ಲಿ ೧೦ ಕಿಮೀ ದೂರ ಕ್ರಮಿಸಿ ಸ್ಪರ್ಧೆಯಲ್ಲಿ ದಾಖಲೆ ನಿರ್ಮಿಸಿದ್ದು,೨೦೨೩ರ ಅಥ್ಲೆಟಿಕ್ನಲ್ಲಿ ವಿಶ್ವದಾಖಲೆ ಬರೆದಿರುವ ಬೆರೆಹು ಅರೆಗ್ವಿ ಅವರ ೨೬ ನಿಮಿಷ ೩೩ ಸೆಕೆಂಡ್ಗಳ ಓಟದ ದಾಖಲೆ ಮುರಿಯುವ ಕನಸು ಕಾಣುತ್ತಿದ್ದಾನೆ.ಬೆಳಗ್ಗೆ ಕಾಲೇಜು, ರಾತ್ರಿ ಪಾಳಿ ಕೆಲಸ : ಬಿಎ ಪದವಿ ನಂತರ ಇದೀಗ ಬಿಪಿಎಡ್ ಮಾಡುತ್ತಿರುವ ಸಂಗಮೇಶ, ಸೆಕ್ಯುರಿಟಿ ಗಾರ್ಡ್ ಆಗಿ ಸೇವೆ ಸಲ್ಲಿಸುತ್ತಿದ್ದು, ಓದಿನೊಂದಿಗೆ ಓಟಕ್ಕೂ ಆದ್ಯತೆ ನೀಡಿ ಏನಾದರೂ ಸಾಧನೆ ಮಾಡಬೇಕೆಂಬ ತುಡಿತ ಹೊಂದಿದ್ದಾನೆ.
ಸಾಧನೆ: ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ೫ ಕಿ.ಮೀ. ಹಾಗೂ ೧೦ ಕಿ.ಮೀ. ಓಟದ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದುಕೊಂಡಿದ್ದಾರೆ. ಈ ಬಾರಿಯ ದಸರಾ ಕ್ರೀಡಾಕೂಟದಲ್ಲಿ 3ನೇ ಸ್ಥಾನ ಪಡೆದಿರುವ ಸಂಗಮೇಶ. ನಾಗಾಲ್ಯಾಂಡ್ನಲ್ಲಿ ನಡೆಯಲಿರುವ ೧೦ ಕಿಮೀ. ಓಟದ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ.
ಬೇಕಿದೆ ಆರ್ಥಿಕ ನೆರವು:ಸಾಧನೆಯತ್ತ ಸಂಪೂರ್ಣ ತೊಡಗಲು ಸಂಗಮೇಶಗೆ ಸರ್ಕಾರದ ನೆರವು ಅನಿವಾರ್ಯವಿದೆ. ದುಡಿಮೆಯೊಡನೆ ಶಿಕ್ಷಣ ಹಾಗೂ ಪೌಷ್ಟಿಕಾಂಶಯಿಕ್ತ ಆಹಾರಕ್ಕೆಂದೇ ಮಾಸಿಕ ₹7-8 ಸಾವಿರ ಅವಶ್ಯಕತೆ ಇದೆ. ಆದರೆ ಈಗಿರುವ ಆದಾಯದಲ್ಲಿ ಅದನ್ನು ಸರಿದೂಗಿಸಲು ಸಾಧ್ಯವಾಗುತ್ತಿಲ್ಲ. ರಾಷ್ಟ್ರಮಟ್ಟದಲ್ಲಿ ಮಿಂಚುತ್ತಿರುವ ಕ್ರೀಡಾಪಟು ಸಂಗಮೇಶ ಹಳ್ಳಿಗೆ ಸರ್ಕಾರ ಹಾಗೂ ಸಂಘ ಸಂಸ್ಥೆಗಳು ಸಹಾಯ ಹಸ್ತ ಚಾಚುವ ಮೂಲಕ ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಓಟದ ಸ್ಪರ್ಧೆಯಲ್ಲಿ ಭಾಗವಹಿಸುವ ಆತನ ಬಯಕೆಗೆ ಒತ್ತಾಸೆಯಾಗಿ ನಿಲ್ಲಬೇಕಿದೆ. ಕ್ರೀಡಾಳುವಿಗೆ ಸಹಾಯ ಮಾಡಲಿಚ್ಛಿಸುವ ಕ್ರೀಡಾಪ್ರೇಮಿಗಳು, ನಾಗರಿಕರು ಸಂಗಮೇಶನ ೬೩೬೪೮-೩೯೬೯೦ ನಂಬರ್ಗೆ ಸಂಪರ್ಕಿಸಬಹುದು.