ರೂಪಾಳ ಸಾಧನೆಯಿಂದ ಜಿಲ್ಲೆಗೆ ಶೋಭೆ

KannadaprabhaNewsNetwork | Published : May 4, 2025 1:36 AM

ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿನಿ ರೂಪಾ ಪಾಟೀಲ ಮಾಡಿದ ಸಾಧನೆಯಿಂದ ಜಿಲ್ಲೆಯ ಕೀರ್ತಿ ಹೆಚ್ಚಿಸಿದ್ದು, ನಮ್ಮ ಜಿಲ್ಲೆಗೆ ರೂಪಾಳಿಂದ ಶೋಭೆ ಬಂದಿದೆ ಎಂದು ಶಿಕ್ಷಣ ಇಲಾಖೆಯ ಅಪರ ಆಯುಕ್ತೆ ಜಯಶ್ರೀ ಶಿಂತ್ರಿ ಹೇಳಿದರು.

ಕನ್ನಡಪ್ರಭ ವಾರ್ತೆ ದೇವಲಾಪೂರ (ತಾ.ಬೈಲಹೊಂಗಲ)

ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿನಿ ರೂಪಾ ಪಾಟೀಲ ಮಾಡಿದ ಸಾಧನೆಯಿಂದ ಜಿಲ್ಲೆಯ ಕೀರ್ತಿ ಹೆಚ್ಚಿಸಿದ್ದು, ನಮ್ಮ ಜಿಲ್ಲೆಗೆ ರೂಪಾಳಿಂದ ಶೋಭೆ ಬಂದಿದೆ ಎಂದು ಶಿಕ್ಷಣ ಇಲಾಖೆಯ ಅಪರ ಆಯುಕ್ತೆ ಜಯಶ್ರೀ ಶಿಂತ್ರಿ ಹೇಳಿದರು.

ಬೈಲಹೊಂಗಲ ತಾಲೂಕಿನ ದೇವಲಾಪೂರ ಗ್ರಾಮದಲ್ಲಿ ಶನಿವಾರ ನಡೆದ ಸತ್ಕಾರ ಸಮಾರಂಭದಲ್ಲಿ ಮಾತನಾಡಿದರು.ಕ್ಷೇತ್ರ ಶಿಕ್ಷಣಾಧಿಕಾರಿ ಎ.ಎನ್.ಪ್ಯಾಟಿ ಮಾತನಾಡಿ, ದೇವಲಾಪೂರ ಸರ್ಕಾರಿ ಪ್ರೌಢಶಾಲೆ ನಾನು ದತ್ತು ಪಡೆದ ಶಾಲೆಯಾಗಿದೆ. ರೂಪಾ ಒಂದನೇ ತರಗತಿಯಿಂದ ಶಿಕ್ಷಣವನ್ನು ನಾನು ನೋಡಿದಾಗ ಪ್ರತಿ ವರ್ಷ ಉತ್ತಮವಾದ ಫಲಿತಾಂಶ ನೀಡುತ್ತ ಬಂದಿದ್ದಾಳೆ. ಅವಳು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿಯೂ ಉತ್ತಮ ಅಂಕ ಪಡೆದು ಶಾಲೆಯ ಕೀರ್ತಿ ಹೆಚ್ಚಿಸಿದ್ದಾಳೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಶಾಸಕ ಮಹಾಂತೇಶ ಕೌಜಲಗಿ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ಭಾಗದ ಹಳೆಯ ಶಾಲೆಗಳಲ್ಲಿ ಒಂದಾದ ನಮ್ಮ ಶಾಲೆಯನ್ನು ಪ್ರಾರಂಭ ಮಾಡಿದ ಹಿರಿಯರ ಪರಿಶ್ರಮ ಇವತ್ತು ಫಲಿಸಿದೆ. ರೂಪಾಳ ಸಾಧನೆ ನನ್ನ ಕ್ಷೇತ್ರದ ಸಾಧನೆಯಾಗಿದೆ. ಈ ಸಾಧನೆ ಹಿಂದೆ ಎಲ್ಲ ಶಿಕ್ಷಕರ ಶ್ರಮವಿದ್ದು, ಶಿಕ್ಷಕರಿಗೆ ಅಭಿನಂದನೆಗಳು. ಮುಂದೆ ಇದೇ ತರಹ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಿ ಪ್ರತಿ ವರ್ಷ ಉತ್ತಮವಾದ ಫಲಿತಾಂಶ ಬರುವಂತೆ ಪ್ರಯತ್ನಿಸಬೇಕು ಎಂದು ಸಲಹೆ ನೀಡಿದರು.ಡಾಕ್ಟರ್‌ ಆಗುವ ಆಸೆ ಹೊಂದಿರುವ ರೂಪಾಳ ಆಸೆ ಈಡೇರಲಿ ಎಂದು ಶುಭ ಕೋರಿ ರೂಪಾ ಪಾಟೀಲ ಮತ್ತು ಪ್ರಭಾವತಿ ಚಿಕ್ಕಮಠ ಇವರಿಬ್ಬರಿಗೂ ಶುಭ ಕೋರಿ ಸತ್ಕರಿಸಲಾಯಿತು. ಹಾಗೆಯೇ ಶಾಲೆಯ ಎಲ್ಲ ಶಿಕ್ಷಕರಿಗೂ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ಯುವಕ ಮಿತ್ರರು, ಶಿಕ್ಷಕ ಸೇರಿದಂತೆ ನಿವೃತ್ತ ಶಿಕ್ಷಕರು ಉಪಸ್ಥಿತರಿದ್ದರು.ದೇವಲಾಪೂರ ಗ್ರಾಪಂನಿಂದ ಸನ್ಮಾನ

ದೇವಲಾಪೂರ(ತಾ.ಬೈಲಹೊಂಗಲ): ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದು ಬೈಲಹೊಂಗಲ ತಾಲೂಕಿನ ದೇವಲಾಪೂರ ಗ್ರಾಮದ ಕೀರ್ತಿಯನ್ನು ಬೆಳಗಿಸಿದ ರೂಪಾ ಚನಗೌಡ ಪಾಟೀಲ 625ಕ್ಕೆ 625 ಮತ್ತು ಪ್ರಭಾವತಿ ಚಿಕ್ಕಮಠ 625ಕ್ಕೆ 615 ಪಡೆದಿರುವ ನಿಮಿತ್ತ ದೇವಲಾಪೂರ ಗ್ರಾಮ ಪಂಚಾಯತಿ ವತಿಯಿಂದ ಅಧ್ಯಕ್ಷೆ ಜೈರಾಭೀ ನದಾಫ್, ಉಪಾಧ್ಯಕ್ಷ ವೀರಭದ್ರ ತಳವಾರ, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಈಶ್ವರ್ ಉಳ್ಳೇಗಡ್ಡಿ, ಗ್ರಾಮ ಪಂಚಾಯತಿ ಆಡಳಿತಾಧಿಕಾರಿ ರಾಯ ನಾಯ್ಕರ್, ತಾಲೂಕು ಪಂಚಾಯತಿ ಮಾಜಿ ಸದಸ್ಯರಾದ ರಾಮಲಿಂಗಪ್ಪ ದಳವಾಯಿ, ಗ್ರಾಮ ಪಂಚಾಯತಿ ಸದಸ್ಯ ಶಶಿಧರ್ ಬಂಡಕ್ಕನವರ, ಪಕ್ರುಸಾಭ್ ನದಾಫ್, ಬಾಳೇಶ್ ಉಪ್ಪಾರ, ಸುರೇಶ್ ನಾಯ್ಕರ್, ವಿನೋದ ಮರೆಪ್ಪನವರ, ವಿನಾಯಕ ಮರೆಪ್ಪನವರ, ಸುಲ್ತಾನ್ ಹಕ್ಕಿ ಹಾಗೂ ಊರಿನ ಗುರು ಹಿರಿಯರು, ಯುವಕ ಮಿತ್ರರು, ಮಹಿಳೆಯರು ಸೇರಿ ಸತ್ಕರಿಸಿದರು. ರೂಪಾ ಪಾಟೀಲರ ಸಾಧನೆಯಿಂದ ದೇವಲಾಪೂರ ಗ್ರಾಮದಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿದೆ. ನಮ್ಮ ಗ್ರಾಮ, ಶಾಲೆಯ ಹೆಸರು ರಾಜ್ಯದಲ್ಲಿ ಕೀರ್ತಿ ಪಡೆದುಕೊಂಡಿದೆ.

-ಈಶ್ವರ ಉಳ್ಳೇಗಡ್ಡಿ,

ಮುಖಂಡರು.

ದೇವಲಾಪೂರ ಪಿಕೆಪಿಎಸ್‌ನಿಂದ ಸನ್ಮಾನ

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ರೂಪಾ ಚನಗೌಡ ಪಾಟೀಲ ಹಾಗೂ ಪ್ರಭಾವತಿ ಚಿಕ್ಕಮಠ ಅವರನ್ನು ಬೈಲಹೊಂಗಲ ತಾಲೂಕಿನ ದೇವಲಾಪೂರ ಗ್ರಾಮದ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಮಲ್ಲಯ್ಯ ರುದ್ರಾಪೂರ, ಉಪಾಧ್ಯಕ್ಷ ಮಹದೇವ ಕೇರವಾಡ, ಎಪಿಎಂಸಿ ಸದಸ್ಯರು ಮತ್ತು ಪಿಕೆಪಿಸ್ ನಿರ್ದೇಶಕರಾದ ಶಂಭು ರುದ್ರಾಪುರ ಮಹಾಂತೇಶ್ ಯರಗಟ್ಟಿ ಎಸ್‌ಡಿಎಂಸಿ ಸದಸ್ಯರಾದ ಶೇಖನಗೌಡ ಪಾಟೀಲ್, ಬಸವರಾಜ ಸುಣ್ಣದಕುಪ್ಪಿ, ಕಾರ್ಯದರ್ಶಿ ರಾಜು ಸಂಗೊಳ್ಳಿ, ಗ್ರಾಮದ ಹಿರಿಯರು ಸನ್ಮಾನಿಸಿದರು.