ಹಾವೇರಿ: ಜಿಲ್ಲೆಯಲ್ಲಿ ಉತ್ತಮ ಹದ ಮಳೆಯಾಗುತ್ತಿದ್ದರಿಂದ ಬಿತ್ತನೆ ಬೀಜ ಮತ್ತು ರಸಗೊಬ್ಬರಕ್ಕೆ ಹೆಚ್ಚಿನ ಬೇಡಿಕೆ ಬಂದಿದ್ದು, ಸೋಮವಾರ ಬಹುತೇಕ ರೈತ ಸಂಪರ್ಕಗಳ ಎದುರು ರೈತರು ಬಿತ್ತನೆ ಬೀಜ ಖರೀದಿಗೆ ಮುಗಿಬಿದ್ದಿದ್ದರಿಂದ ನೂಕುನುಗ್ಗಲು ಉಂಟಾಯಿತು.ಪ್ರಸಕ್ತ ವರ್ಷ ಮುಂಗಾರು ಪೂರ್ವದಲ್ಲಿಯೇ ಉತ್ತಮ ಮಳೆಯಾಗುತ್ತಿದೆ. ಹೀಗಾಗಿ ರೈತರು ಬಿತ್ತನೆಗೆ ಸಜ್ಜಾಗುತ್ತಿದ್ದು, ಅಗತ್ಯವಿರುವ ಬೀಜ, ಗೊಬ್ಬರ ಖರೀದಿಗೆ ಮುಂದಾಗುತ್ತಿದ್ದಾರೆ. ಒಮ್ಮೆಲೇ ರೈತರು ಬಂದಿದ್ದರಿಂದ ಕೆಲಭಾಗದಲ್ಲಿ ಗೊಂದಲ ಎದುರಾಗಿತ್ತು. ನಗರದ ಕೃಷಿ ಇಲಾಖೆಯ ಆವರಣದಲ್ಲಿ ಎರಡು ಕಡೆ ಬೀಜ ವಿತರಣೆ ವ್ಯವಸ್ಥೆ ಮಾಡಲಾಗಿದ್ದು, ಸೋಮವಾರ ಬೀಜ ವಿತರಣಾ ಕೇಂದ್ರದ ಎದುರು ಬೆಳಗ್ಗೆಯಿಂದಲೇ ನೂರಾರು ರೈತರು ಸರದಿ ಸಾಲಿನಲ್ಲಿ ನಿಂತು ಬಿತ್ತನೆ ಬೀಜ ಖರೀದಿಗೆ ಮುಂದಾಗಿದ್ದರು. ಟ್ರ್ಯಾಕ್ಟರ್, ಟಂಟಂಗಳೊಂದಿಗೆ ಬಂದಿದ್ದ ರೈತರಲ್ಲಿ ಬಿತ್ತನೆ ಬೀಜ ಸಿಗುತ್ತದೆಯೋ ಇಲ್ಲವೋ ಎಂಬ ಆತಂಕ ಸೃಷ್ಟಿಯಾದ ಕಾರಣ ಕೆಲಕಾಲ ನೂಕುನುಗ್ಗಲು ಉಂಟಾಗಿ ಗೊಂದಲ ಉಂಟಾಯಿತು. ಈ ವೇಳೆ ರೈತರನ್ನು ನಿಯಂತ್ರಿಸುವಲ್ಲಿ ರೈತ ಸಂಪರ್ಕ ಕೇಂದ್ರ ಸಿಬ್ಬಂದಿ ಹಾಗೂ ಪೊಲೀಸರು ಹರಸಾಹಸಪಟ್ಟರು. ಸಂಜೆ ವೇಳೆ ಪರಿಸ್ಥಿತಿ ತಿಳಿ ಆಯಿತು.ಪ್ರಸಕ್ತ ಮುಂಗಾರು ಹಂಗಾಮಿಗೆ ಜಿಲ್ಲೆಯಲ್ಲಿ ಮೆಕ್ಕೆಜೋಳ 6300 ಕ್ವಿಂಟಲ್, ಶೇಂಗಾ 1400 ಕ್ವಿಂಟಲ್, ಭತ್ತ 3578 ಕ್ವಿಂಟಲ್, ಸೋಯಾಬಿನ್ 9450 ಕ್ವಿಂಟಲ್, ಜೋಳ 10 ಕ್ವಿಂಟಲ್, ತೊಗರಿ 675 ಕ್ವಿಂಟಲ್, ಹೆಸರು 332 ಸೇರಿದಂತೆ 21,745 ಕ್ವಿಂಟಲ್ ಬಿತ್ತನೆ ಬೀಜ ಪೂರೈಕೆಗೆ ಕೃಷಿ ಇಲಾಖೆ ಬೇಡಿಕೆ ಸಲ್ಲಿಸಿದ್ದು, ಜಿಲ್ಲೆಯಲ್ಲಿ ಒಟ್ಟಾರೆ 27,730 ಕ್ವಿಂಟಲ್ ಬಿತ್ತನೆ ಬೀಜ ದಾಸ್ತಾನು ಇದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ ರೈತರಿಗೆ ಸಮರ್ಪಕವಾಗಿ ಬಿತ್ತನೆ ಬೀಜ ವಿತರಣೆಗೆ ವ್ಯವಸ್ಥೆ ಮಾಡಿಲ್ಲ. ಬೆಳಗ್ಗೆಯಿಂದ ಸರದಿ ಸಾಲಿನಲ್ಲಿ ನಿಂತರೂ ಬಿತ್ತನೆ ಬೀಜ ಸಿಗುತ್ತಿಲ್ಲ ಎಂದು ರೈತರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. 50 ಸಾವಿರ ಮೆ.ಟನ್ ಗೊಬ್ಬರ: ಜಿಲ್ಲೆಯಲ್ಲಿ ಪ್ರಸಕ್ತ ಮುಂಗಾರು ಹಂಗಾವಿನಲ್ಲಿ 3.27 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ ಹಾಕಿಕೊಳ್ಳಲಾಗಿದೆ. ಇದಕ್ಕಾಗಿ ಅಗತ್ಯ ಗೊಬ್ಬರ ದಾಸ್ತಾನು ಮಾಡಿಕೊಳ್ಳಲಾಗುತ್ತಿದೆ. ಸದ್ಯಕ್ಕೆ 28325 ಟನ್ ಯೂರಿಯಾ, 6769 ಟನ್ ಡಿಎಪಿ, 2029 ಟನ್ ಎಂಒಪಿ, 19169 ಟನ್ ಕಾಂಪ್ಲೆಕ್ಸ್, 449 ಟನ್ ಎಸ್ಎಸ್ಪಿ ಸೇರಿದಂತೆ ಒಟ್ಟು 50,740 ಮೆ.ಟನ್ ರಸಗೊಬ್ಬರ ದಾಸ್ತಾನು ಮಾಡಲಾಗಿದ್ದು, ಇದರಲ್ಲಿ ಈಗಾಗಲೇ 11,478 ಮೆ.ಟನ್ ರಸಗೊಬ್ಬರವನ್ನು ರೈತರಿಗೆ ಪೂರೈಸಲಾಗಿದೆ. ಬೇಡಿಕೆಗೆ ತಕ್ಕಂತೆ ಗೊಬ್ಬರ ಪೂರೈಕೆಗೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಡಿಎಪಿ, ಯೂರಿಯಾಗೆ ಹೆಚ್ಚಿನ ಬೇಡಿಕೆಜಿಲ್ಲೆಯಲ್ಲಿ ಬಿತ್ತನೆ ಬೀಜದ ಜತೆಗೆ ರಸಗೊಬ್ಬರಕ್ಕೆ ಬೇಡಿಕೆ ಹೆಚ್ಚಾಗಿದೆ. ನಿರೀಕ್ಷಿಸಿದಷ್ಟು ರಸಗೊಬ್ಬರ ರೈತರಿಗೆ ಸಿಗದ ಹಿನ್ನೆಲೆಯಲ್ಲಿ ರೈತರು ಗೊಬ್ಬರದ ಅಂಗಡಿಗಳಿಗೆ ಅಲೆದಾಡುವಂತಾಗಿದೆ. ಈಗಾಗಲೇ ಡಿಎಪಿ ಮತ್ತು ಯೂರಿಯಾದ ಕೊರತೆಯಿಂದಾಗಿ ರೈತರಿಗೆ ಪರ್ಯಾಯವಾಗಿ ಕಾಂಪ್ಲೆಕ್ಸ್ ಗೊಬ್ಬರ ಬಳಕೆಗೆ ಕೃಷಿ ಇಲಾಖೆ ಮನವೊಲಿಕೆಗೆ ಮುಂದಾಗಿದೆ. ಆದಾಗ್ಯೂ ಈ ಸಲಹೆಗೆ ಅನ್ನದಾತರು ನಿರೀಕ್ಷಿತ ಸ್ಪಂದನೆ ನೀಡುತ್ತಿಲ್ಲ.ಡಿಎಪಿ ಮತ್ತು ಯೂರಿಯಾ ರಸಗೊಬ್ಬರಕ್ಕೆ ದುಂಬಾಲು ಬಿದ್ದಿದ್ದು, ಈಗ ರಸಗೊಬ್ಬರಕ್ಕಾಗಿ ನೂಕುನುಗ್ಗಲು, ತಳ್ಳಾಟದ ಘಟನೆಗಳು ವರದಿಯಾಗುತ್ತಿವೆ. ಕೆಲ ವರ್ಷಗಳ ಹಿಂದೆ ರಸಗೊಬ್ಬರಕ್ಕಾಗಿ ಗೋಲಿಬಾರ್ ನಡೆದಿದ್ದ ಹಾವೇರಿಯಲ್ಲಿ ಮತ್ತೆ ರಸಗೊಬ್ಬರಕ್ಕಾಗಿ ಹಾಹಾಕಾರ ಎದ್ದಿರುವುದು ರೈತರಲ್ಲಿ ಆತಂಕ ಸೃಷ್ಟಿಸಿದೆ. ರಸಗೊಬ್ಬರಕ್ಕೆ ಕೊರತೆ ಆಗದಂತೆ ಜಿಲ್ಲಾಡಳಿತ ಹಾಗೂ ಕೃಷಿ ಇಲಾಖೆ ಕ್ರಮ ಕೈಗೊಳ್ಳಬೇಕು ಎಂಬುದು ರೈತರ ಆಗ್ರಹವಾಗಿದೆ.
ಬೇಡಿಕೆ ಹೆಚ್ಚಳ: ಜಿಲ್ಲೆಯಲ್ಲಿ ಉತ್ತಮ ಮಳೆ ಆಗುತ್ತಿರುವುದರಿಂದ ಬೀಜ, ಗೊಬ್ಬರಕ್ಕೆ ಬೇಡಿಕೆ ಹೆಚ್ಚಾಗಿದೆ. ಹೀಗಾಗಿ ಒಮ್ಮೆಲೆ ರೈತರು ಬಂದಿದ್ದರಿಂದ ಸೋಮವಾರ ಬೆಳಗ್ಗೆ ಸ್ವಲ್ಪ ಜನದಟ್ಟಣೆ ಉಂಟಾಯಿತು. ಎಲ್ಲರಿಗೂ ಬೀಜ ವಿತರಿಸಲಾಗಿದೆ. ಸಾಕಷ್ಟು ಗೊಬ್ಬರ ದಾಸ್ತಾನಿದೆ. ಹೀಗಾಗಿ ರೈತರು ಒಂದೇ ಬಗೆಯ ರಸಗೊಬ್ಬರಕ್ಕೆ ಅವಲಂಬಿತರಾಗದೇ ಬೇರೆ- ಬೇರೆ ಕಾಂಪ್ಲೆಕ್ಸ್ ಗೊಬ್ಬರ ಬಳಕೆ ಮಾಡಬೇಕು ಎಂದು ಸಹಾಯಕ ಕೃಷಿ ನಿರ್ದೇಶಕ ವೀರಭದ್ರಪ್ಪ ಬಿ.ಎಚ್. ತಿಳಿಸಿದರು.