ಬ್ಯಾಡಗಿ: ಬರುವ ನ. 24ರ ಒಳಗೆ ಗೋವಿನ ಜೊಳ ಖರೀದಿ ಕೇಂದ್ರ ಆರಂಭಿಸದಿದ್ದಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ಮಾಡುವುದಾಗಿ ರಾಜ್ಯ ರೈತ ಸಂಘದ ಮುಖಂಡ ಬೃಹತ್ ಪ್ರತಿಭಟನೆ ನಡೆಸುವುದಾಗಿ ರೈತ ಮುಖಂಡ ಗಂಗಣ್ಣ ಎಲಿ ಎಚ್ಚರಿಸಿದರು.ಈ ಕುರಿತು ಸೋಮವಾರ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಖರೀದಿ ಕೇಂದ್ರ ತೆರೆಯುವಂತೆ ಆಗ್ರಹಿಸಿ ಪಟ್ಟಣದ ತಹಸೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿ ತಹಸೀಲ್ದಾರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿ ಅವರು ಮಾತನಾಡಿದರು. ಗೋವಿನಜೋಳಕ್ಕೆ ಬೆಲೆ ನಿಗದಿ ಮಾಡುವ ಕುರಿತು ಸರ್ಕಾರ ಕೃಷಿ ಮಂತ್ರಿಗಳು ಹಾಗೂ ವಿರೋಧ ಪಕ್ಷದ ನಾಯಕರು ರಾಜಕೀಯ ಕೆಸರೆರಚಾಟ ನಡೆಸುತ್ತಾ, ಬೆಂಬಲ ಬೆಲೆ ನೀಡದೇ, ಖರೀದಿ ಕೇಂದ್ರ ತೆರೆಯದೇ ರೈತರಿಗೆ ಸಮಾಧಿ ಕಟ್ಟುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಪ್ರತಿ ಕ್ವಿಂಟಲ್ಗೆ 3 ಸಾವಿರ ಕೊಡಿ: ತಾಲೂಕಾಧ್ಯಕ್ಷ ರುದ್ರನಗೌಡ ಕಾಡನಗೌಡ್ರ ಮಾತನಾಡಿ, ಕಳೆದ ವರ್ಷ ಪ್ರತಿ ಕ್ವಿಂಟಲ್ ಮೆಕ್ಕೆಜೋಳಕ್ಕೆ ರು. 2400 ರಿಂದ 2800 ಬೆಲೆ ಸಿಕ್ಕಿತ್ತು. ಆದರೇ ಪ್ರಸಕ್ತ ವರ್ಷ ವ್ಯಯಿಸಿದ ಹಣವೂ ಬರದಂತಾಗಿದೆ, ಬರೀ ಸಾಲ ಹೊದ್ದು ರೈತ ಮಲಗುವಂತಾಗಿದೆ, ಇಂತಹ ಸಮಯದಲ್ಲಿ ಕೇಂದ್ರ ಸರ್ಕಾರ ಎಂ.ಎಸ್.ಪಿ.ದರ 2400 ರೂಪಾಯಿ ನಿಗದಿಪಡಿಸಿದ್ದು ಇದಕ್ಕೆ ರಾಜ್ಯ ಸರ್ಕಾರದ ರು. 600 ಪ್ರೋತ್ಸಾಹ ಧನ ಸೇರಿಸಿ ಒಟ್ಟು ರು. 3 ಸಾವಿರ ನೀಡಿ ರೈತರ ನೆರವಿಗೆ ಬರುವಂತೆ ಒತ್ತಾಯಿಸಿದರು.ಈ ವೇಳೆ ರೈತ ಮುಖಂಡರಾದ ಕೆ.ವಿ.ದೊಡ್ಡಗೌಡ್ರ, ಚಿಕ್ಕಪ್ಪ ಛತ್ರದ, ಶೇಖಪ್ಪ ಕಾಶಿ, ಪರಮೇಶಯ್ಯ ಹಿರೇಮಠ, ಪರುಶರಾಮ ಚನ್ನಗಿರಿ, ಮಲ್ಲೇಶಪ್ಪ ಡಂಬಳ, ಮಂಜು ತೋಟದ, ಶಂಕರ ಮರಗಲ್, ಶಿವರುದ್ರಪ್ಪ ಮೂಡೇರ, ಫಕ್ಕೀರೇಶ ಅಜಗೊಂಡರ, ಜಾನ್ ಪುನಿತ್, ಪ್ರಕಾಶ ಸಿದ್ಧಪ್ಪನವರ, ಆನಂದ ಸಂಕಣ್ಣನವರ, ಸೇರಿದಂತೆ ಹಲವರು ಉಪಸ್ಥಿತರಿದ್ದರು.ತಹಸೀಲ್ದಾರ ಹುಡುಕಿ ಕೊಡಿ: ಪ್ರತಿಭಟನೆ ಹಾಗೂ ಮನವಿ ಕೊಡುವ ಮಾಹಿತಿ ಮೊದಲೇ ಸ್ಥಳೀಯ ತಹಸೀಲ್ದಾರ್ ಚಂದ್ರಶೇಖರ ನಾಯ್ಕ ಅವರಿಗೆ ರೈತ ಸಂಘ ತಿಳಿಸಿದೆ, ಕನಿಷ್ಠ ಸೌಜನ್ಯಕ್ಕೂ ಪ್ರತಿಭಟನೆ ವೇಳೆ ತಹಸೀಲ್ದಾರ್ ನಮ್ಮ ಮನವಿ ಸ್ವೀಕರಿಸದೇ ಉದ್ಧಟತನ ತೋರಿದ್ದಾರೆ, ಬ್ಯಾಡಗಿಗೆ ಬಂದು ಹಲವು ತಿಂಗಳೇ ಕಳೆದರೂ ತಾಲೂಕಿನಲ್ಲಿನ ರೈತರ ಸಮಸ್ಯೆಗಳ ಬಗ್ಗೆ ಸಭೆ ನಡೆಸಿಲ್ಲ, ನಮ್ಮ ಗೋಳು ಕೇಳುವವರಿಲ್ಲ ಇಂತಹ ತಹಸೀಲ್ದಾರ ಅವರಿಂದ ರೈತರಿಗೆ ನ್ಯಾಯ ಸಿಗುವುದು ಕಷ್ಟ ಸಾಧ್ಯ ಎಂದು ಮೌನೇಶ ಕಮ್ಮಾರ ಹೇಳಿದರು.