ಇಂತಹ ಎಸ್.ಆರ್.ಕಾಶಪ್ಪನವರ ಇರಬೇಕಿತ್ತು: ಶ್ರೀಶೈಲ ಶ್ರೀ

KannadaprabhaNewsNetwork | Published : Jun 25, 2025 1:18 AM

ವೀರಶೈವ ಲಿಂಗಾಯತ ಸಮುದಾಯ ಕವಲು ದಾರಿಯಲ್ಲಿ ಸಾಗುತ್ತಿದೆ. ಜಾತಿ ಗಣತಿಯಲ್ಲಿ ಸಮುದಾಯದ ಒಳಪಂಗಡಗಳು ವಿವಿಧ ಸಮಸ್ಯೆಗಳನ್ನು ಎದುರಿಸುತ್ತಿವೆ. ಇಂತಹ ಸಮಯದಲ್ಲಿ ಎಸ್.ಆರ್.ಕಾಶಪ್ಪನವರ ಇರಬೇಕಿತ್ತು. ಸಮಾಜವನ್ನು ಒಗ್ಗೂಡಿಸಿಕೊಂಡು ಹೋಗುವುದು ಇಂದಿನ ಅವಶ್ಯಕತೆಯಾಗಿದೆ ಎಂದು ಶ್ರೀಶೈಲ ಪೀಠದ ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಕನ್ನಡಪ್ರಭ ವಾರ್ತೆ ಹುನಗುಂದ

ವೀರಶೈವ ಲಿಂಗಾಯತ ಸಮುದಾಯ ಕವಲು ದಾರಿಯಲ್ಲಿ ಸಾಗುತ್ತಿದೆ. ಜಾತಿ ಗಣತಿಯಲ್ಲಿ ಸಮುದಾಯದ ಒಳಪಂಗಡಗಳು ವಿವಿಧ ಸಮಸ್ಯೆಗಳನ್ನು ಎದುರಿಸುತ್ತಿವೆ. ಇಂತಹ ಸಮಯದಲ್ಲಿ ಎಸ್.ಆರ್.ಕಾಶಪ್ಪನವರ ಇರಬೇಕಿತ್ತು. ಸಮಾಜವನ್ನು ಒಗ್ಗೂಡಿಸಿಕೊಂಡು ಹೋಗುವುದು ಇಂದಿನ ಅವಶ್ಯಕತೆಯಾಗಿದೆ ಎಂದು ಶ್ರೀಶೈಲ ಪೀಠದ ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ತಾಲೂಕಿನ ಹಾವರಗಿ ಗ್ರಾಮದಲ್ಲಿ ಸೋಮವಾರ ನಡೆದ ಎಸ್.ಆರ್. ಕಾಶಪ್ಪನವರ 23ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಮೀಸಲಾತಿಯಲ್ಲಿ ಬಹಳ ತಾರತಮ್ಯ ಆಗುತ್ತಿದೆ. ಹಿಂದೂ ಮೂಲಕ್ಕೆ ಒಂದು ಮೀಸಲಾತಿ, ವೀರಶೈವ ಮೂಲಕ್ಕೆ ಇನ್ನೊಂದು ಮೀಸಲಾತಿ ಇದೆ. ಅನೇಕ ವೃತ್ತಿಗಳಿಗೆ ಅನುಗುಣವಾಗಿ ಮೀಸಲಾತಿ ನೀಡಲಾಗುತ್ತಿದೆ. ಹಿಂದೂ ವೃತ್ತಿ ಆಧಾರಿತ ಜಾತಿಗಳಿಗೆ ನೀಡುವ ಮೀಸಲಾತಿಯನ್ನು ವೀರಶೈವ ಸಮುದಾಯದಲ್ಲಿನ ಒಳಪಂಗಡಗಳಿಗೂ ಮೀಸಲಾತಿ ನೀಡುವ ಕೆಲಸವನ್ನು ಸರ್ಕಾರ ಮಾಡಬೇಕು. ರಾಜ್ಯ ಸರ್ಕಾರ ಮರು ಜಾತಿ ಗಣತಿ ಮಾಡಲು ಮುಂದಾಗಿರುವುದು ಸ್ವಾಗತಾರ್ಹ. ಈ ನಿಟ್ಟಿನಲ್ಲಿ ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ ಸರ್ಕಾರದ ಗಮನಕ್ಕೆ ತಂದು ಮೀಸಲಾತಿ ತಾರತಮ್ಯವನ್ನು ಹೋಗಲಾಡಿಸಬೇಕು ಎಂದು ಹೇಳಿದರು.

ಕಾಶಿ ಪೀಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ವೀರಶೈವ ಲಿಂಗಾಯತರು ಮತ್ತು ಹಿಂದೂಗಳು ಒಂದೇ ಆಗಿರುವಾಗ ಒಂದೇ ಕಸುಬಿನ ವ್ಯಕ್ತಿಗಳಿಗೆ ಮೀಸಲಾತಿಯಲ್ಲಿ ತಾರತಮ್ಯ ಮಾಡುವ ಸರ್ಕಾರದ ನೀತಿ ಸರಿಯಲ್ಲ. ವೀರಶೈವ ಲಿಂಗಾಯತರು ಹಿಂದೂಗಳೇ ಆಗಿರುವುದರಿಂದ ಎಲ್ಲ ಹಿಂದೂಗಳ ಒಳಜಾತಿ ಮತ್ತು ಕಸಬುದಾರರಿಗೆ ಸಿಗುವ ಎಲ್ಲ ಮೀಸಲು ವೀರಶೈವ ಎಂದು ಬರೆಸಿದವರಿಗೂ ಸಿಗಬೇಕು ಎಂದು ಮುಖ್ಯಮಂತ್ರಿಗಳಿಗೆ ಆಗ್ರಹಿಸಿದರು.

ಮುಂಬರುವ ದಿನಗಳಲ್ಲಿ ವಿಜಯಾನಂದ ಕಾಶಪ್ಪನವರ ಅವರನ್ನು ಸಚಿವರನ್ನಾಗಿ ಮಾಡಿ ಸಮಾಜ ಮತ್ತು ರಾಜಕೀಯ ಸೇವೆ ಮಾಡಲು ಮುಖ್ಯಮಂತ್ರಿ ಅವರು ಅವಕಾಶ ಮಾಡಿಕೊಡಲಿ ಎಂದು ಕಾಶಿ, ಶ್ರೀಶೈಲ, ಹಾಗೂ ಉಜ್ಜಯಿನಿ ಪೀಠದ ಜಗದ್ಗುರುಗಳು ಹೇಳಿದರು.