ಶಿಗ್ಗಾಂವಿ: ದೇಶಾಭಿಮಾನ, ಸಂಯಮ, ಶಿಸ್ತುಬದ್ಧ ವ್ಯಕ್ತಿತ್ವ ಮತ್ತು ಸೇವಾ ಮನೋಭಾವನೆಯ ಜತೆಗೆ ತ್ಯಾಗ ಮನೋಭಾವನೆ ಇಂದಿನ ಸಾಮಾಜಿಕ ವ್ಯವಸ್ಥೆಯಲ್ಲಿಯ ಮಕ್ಕಳು ಮತ್ತು ಯುವಕರಲ್ಲಿ ಕಡಿಮೆಯಾಗುತ್ತಿದೆ ಇದು ದೇಶದ ಬೆಳವಣಿಗೆಯ ದೃಷ್ಟಿಯಿಂದ ಸರಿಯಲ್ಲ, ಎಚ್ಚೆತ್ತುಕೊಳ್ಳಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಹೇಳಿದರು. ತಾಲೂಕಿನ ಹಿರೇಬೆಂಡಿಗೇರಿ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಶಿಗ್ಗಾಂವಿ ತಾಲೂಕು ಮಟ್ಟದ ಭಾರತ ಸೇವಾದಳದ ಶತಮಾನೋತ್ಸವದ ಅಂಗವಾಗಿ ರಾಷ್ಟ್ರೀಯ ಭಾವೈಕ್ಯತಾ ಬೃಹತ್ ಮಕ್ಕಳ ಮೇಳ ೨೦೨೩-೨೪ ಉದ್ಘಾಟಿಸಿ ಅವರು ಮಾತನಾಡಿದರು. ಸೇವಾದಳದ ಮುಖ್ಯ ಉದ್ದೇಶ ಶಿಸ್ತು, ಸಂಯಮ, ಸೇವಾ ಮನೋಭಾವನೆ ಮೂಡಿಸುವುದಾಗಿದೆ. ಅದನ್ನ ಬಿತ್ತಲು ಮಕ್ಕಳಿದ್ದಾಗಲೇ ಇಂತಹ ಭಾರತ ಸೇವಾದಳ ಸಹಕಾರಿಯಾಗುತ್ತದೆ ಎಂದು ಹೇಳಿದರು.ಜಾತ್ಯತೀತ ಸಮಾಜ ಕಟ್ಟಲು ಡಾ. ಬಿ.ಆರ್. ಅಂಬೇಡ್ಕರ್ ಶ್ರಮಿಸಿದ್ದಾರೆ. ಇಂದು ಪ್ರತಿಯೊಬ್ಬ ವ್ಯಕ್ತಿಯಲ್ಲಿ ಸೇವಾ ಮನೋಭಾವ, ದೇಶಾಭಿಮಾನ ಬೆಳೆಯಬೇಕಿದೆ ಎಂದರು. ಭಾರತ ಸೇವಾದಳದ ತಾಲೂಕು ಉಪಾಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ ಮಾತನಾಡಿ, ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆ, ಸೇವಾ ಮನೋಭಾವನೆ ಬೆಳೆಯಲು ಸೇವಾದಳ ಮುಖ್ಯವಾಗಿದೆ ಎಂದರು. ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಬಿ. ಅಂಬಿಗೇರ ಮಾತನಾಡಿ, ಮಕ್ಕಳಿಗೆ ಭವಿಷ್ಯದ ಶಿಸ್ತಿನ ಜೀವನದಲ್ಲಿ ಭಾರತ ಸೇವಾದಳದ ಕಾರ್ಯ ಮುಖ್ಯವಾಗಿ ಬೇಕು ಎಂದರು. ಭಾರತ ಸೇವಾದಳದ ಅಧ್ಯಕ್ಷ ಶಿವಾನಂದ ಮ್ಯಾಗೇರಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಇದಕ್ಕೂ ಪೂರ್ವದಲ್ಲಿ ಗ್ರಾಪಂ ಅಧ್ಯಕ್ಷೆ ಮಂಜುಳಾ ಮರಿದ್ಯಾಮಣ್ಣವರ ಹಾಗೂ ಉಪಾಧ್ಯಕ್ಷ ಫಕೀರಯ್ಯ ಹಿರೇಮಠ ಧ್ವಜಾರೋಹಣ ನೆರವೇರಿಸಿದರು. ಸೇವಾದಳ ವಿದ್ಯಾರ್ಥಿಗಳಿಂದ ಆಕರ್ಷಕ ಪಥಸಂಚಲನ ನೆರವೇರಿತು. ಸಿಂಗಾಪುರ ಶಾಲೆಯ ಶಿಕ್ಷಕ ಕೆ.ಬಿ. ದೊಡ್ಡಮನಿ ಹರ್ಡೇಕರ ಅವರ ಕೈಯಿಂದ ಬಿಡಿಸಿದ ಭಾವಚಿತ್ರವನ್ನು ಭಾರತ ಸೇವಾದಳ ದಳದ ಅಧ್ಯಕ್ಷರಿಗೆ ಹಸ್ತಾಂತರಿಸಿದರು.