-ಸ್ವಂತ ಹಣದಲ್ಲಿ ತಾತ್ಕಾಲಿಕ ಶೆಡ್ ನಿರ್ಮಾಣ । ಕನ್ನಡಪ್ರಭ ದ ವರದಿಗೆ ಸ್ಪಂದಿಸಿದ ಅಧಿಕಾರಿಗಳು ಮತ್ತು ನಗರ ಆಶ್ರಯ ಸಮಿತಿ ಅಧ್ಯಕ್ಷರು
ಕನ್ನಡಪ್ರಭ ವಾರ್ತೆ ಶಹಾಪುರ
ವಸತಿರಹಿತ ಅಂಗವಿಕಲೆ ಸಾದಿಯಾ ಪರ್ವೀನ್ ಕುಟುಂಬಕ್ಕೆ ಶೀಘ್ರ ನಿವೇಶನ ನೀಡಲಾಗುವುದು. ಮನೆ ಕಟ್ಟಿಕೊಳ್ಳಲು ಲೋನ್ ವ್ಯವಸ್ಥೆ ಮಾಡಲಾಗುವುದಲ್ಲದೆ ಮನೆ ನಿರ್ಮಾಣ ಆಗುವವರೆಗೂ ಸ್ವಂತ ಹಣದಲ್ಲಿ ತಾತ್ಕಾಲಿಕ ಶೆಡ್ ನಿರ್ಮಾಣ ಮಾಡಿಕೊಡುವುದಾಗಿ ನಗರ ಆಶ್ರಯ ಸಮಿತಿ ಅಧ್ಯಕ್ಷ ವಸಂತ ಕುಮಾರ್ ಸುರಪುರ ಅವರು ಅಂಗವಿಕಲೆ ಕುಟುಂಬಕ್ಕೆ ಭರವಸೆ ನೀಡಿದರು.ಈ ಕುಟುಂಬಕ್ಕೆ ಇಲ್ಲ ಆಧಾರ, ತುತ್ತು ಅನ್ನಕ್ಕೂ ತತ್ವಾರ ಎಂಬ ಶೀರ್ಷಿಕೆಯಡಿ "ಕನ್ನಡಪ್ರಭ " ದಲ್ಲಿ ಮೇ 25 ರಂದು ವರದಿ ಪ್ರಕಟಿಸಿತ್ತು. ಈ ವರದಿಗೆ ಸ್ಪಂದಿಸಿದ ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ತಾಲೂಕು ಆಡಳಿತ, ಮೇ 26ರಂದು ಅಂಗವಿಕಲೆ ಸಾದಿಯಾ ಪರ್ವೀನ್ ಮನೆಗೆ ಭೇಟಿ ನೀಡಿ, ನ್ಯಾಯದ ಭರವಸೆ ನೀಡಿ ಕಾನೂನು ಸೇವಾ ಸಮಿತಿಯ ತಾಲೂಕಾಧ್ಯಕ್ಷ ನ್ಯಾಯಮೂರ್ತಿ ಸಿದ್ದರಾಮ ಟಿ.ಪಿ. ಅವರು ನಗರ ಸಭೆ, ಕಂದಾಯ ಇಲಾಖೆ ಮತ್ತು ಹಿರಿಯ ನಾಗರಿಕ ಸಬಲೀಕರಣ ಇಲಾಖೆಗೆ ಪತ್ರ ಬರೆದು ಈ ಕುಟುಂಬಕ್ಕೆ ಸರ್ಕಾರದ ಸೌಲಭ್ಯ ಒದಗಿಸಿ ಕೊಡುವಂತೆ ತಿಳಿಸಿದ್ದರು.
ಸಚಿವ ದರ್ಶನಾಪುರ ಅವರು ಈ ಕುಟುಂಬಕ್ಕೆ ನಿವೇಶನ ನೀಡುವ ಸೂಚನೆ ಮೇರೆಗೆ ಈ ಕುಟುಂಬದ ಮನೆಗೆ ಭೇಟಿ ನೀಡಿ ಭರವಸೆ ನೀಡುತ್ತಿದ್ದೇನೆ. ಮನೆ ಬಾಡಿಗೆ ಹಣ ಕಟ್ಟಲು ಆಗದ ಸ್ಥಿತಿಯಲ್ಲಿರುವ ಕುಟುಂಬದ ನೆರವಿಗೆ ಬರುವುದು ಮನುಷ್ಯ ಧರ್ಮ. ನಾನು, ನನ್ನ ಸ್ವಂತ ಹಣದಲ್ಲಿ ನಿವೇಶನದ ಅರ್ಧ ಜಾಗದಲ್ಲಿ ಶೆಡ್ ನಿರ್ಮಿಸಿ ಕೊಡುವುದಾಗಿ ವಸಂತಕುಮಾರ್ ತಿಳಿಸಿದರು.
----------
ನೊಂದವರ ಮತ್ತು ಸರ್ಕಾರಿ ಸೌಲಭ್ಯ ವಂಚಿತರಿಗೆ ನೆರವು ನೀಡಲು ಕಾನೂನು ಸೇವಾ ಪ್ರಾಧಿಕಾರ ಸದಾ ಸಿದ್ಧವಿದೆ. ಕುಟುಂಬಕ್ಕೆ ವಸತಿ ಹಾಗೂ ಸರ್ಕಾರಿ ಸೌಲಭ್ಯ ಒದಗಿಸಿಕೊಡುವಂತೆ ತಾಲೂಕು ಮಟ್ಟದ ಅಧಿಕಾರಿಗಳನ್ನು ಸಂಪರ್ಕಿಸಿ ನಿರ್ದೇಶನ ನೀಡಲಾಗಿತ್ತು. ಅಧಿಕಾರಿಗಳು ಸ್ಪಂದಿಸಿ ಆ ಕುಟುಂಬಕ್ಕೆ ಅಗತ್ಯ ನೆರವು ನೀಡುತ್ತಿದ್ದಾರೆ.:- ನ್ಯಾಯಾಧೀಶರಾದ ಸಿದ್ದರಾಮ ಟಿ.ಪಿ., ಅಧ್ಯಕ್ಷರು, ತಾಲೂಕು ಕಾನೂನು ಸೇವಾ ಸಮಿತಿ ಶಹಾಪುರ.
21ವೈಡಿಆರ್9: ಶಹಾಪುರ ನಗರದ ಹೃದಯ ಭಾಗದಲ್ಲಿರುವ ಖವಾಸಪುರ ಮಹ್ಮದಿಯ ಮಜೀದ್ ಹತ್ತಿರವಿರುವ ಅಂಗವಿಕಲೆ ಸಾಧೀಯ ಪರ್ವೀನ್ ಮನೆಗೆ ನಗರ ಆಶ್ರಯ ಸಮಿತಿ ಅಧ್ಯಕ್ಷ ವಸಂತ್ ಕುಮಾರ್ ಸುರಪುರ ಭೇಟಿ ನೀಡಿದರು.
21ವೈಡಿಆರ್10: ಮೇ 25 ರಂದು ಪ್ರಕಟಿಸಿದ್ದ ಕನ್ನಡಪ್ರಭ ವರದಿ.
20ವೈಡಿಆರ್ : ನ್ಯಾಯಾಧೀಶರಾದ ಸಿದ್ದರಾಮ ಟಿ.ಪಿ. ಅವರು ಅಂಗವಿಕಲೆ ಮನೆಗೆ ಭೇಟಿ ನೀಡಿ, ಸೌಲಭ್ಯ ಕಲ್ಪಿಸುವ ಭರವಸೆ ನೀಡಿದ್ದು, ಪ್ರಕಟಿಸಿದ್ದ ವರದಿ (ಮೇ. 26)