ವಿದ್ಯುತ್ ವೀರರ ಸುರಕ್ಷತೆ ಬಹಳ ಮುಖ್ಯ

KannadaprabhaNewsNetwork |  
Published : Nov 13, 2025, 01:30 AM IST
ಕೊಪ್ಪಳ ಕಾರ್ಯ ಮತ್ತು ಪಾಲನಾ ವಿಭಾಗ ವ್ಯಾಪ್ತಿಯ ಮಾರ್ಗದಾಳುಗಳು ಮತ್ತು ನಿರ್ವಹಣಾ ಸಿಬ್ಬಂದಿಗೆ ವಿದ್ಯುತ್ ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸುವ ತರಬೇತಿ ಕಾರ್ಯಾಗಾರ ಆಯೋಜಿಸಲಾಗಿತ್ತು. | Kannada Prabha

ಸಾರಾಂಶ

ನಮ್ಮ ದೇಶದ ಅಭಿವೃದ್ಧಿಗೆ ವಿದ್ಯುತ್ ಬಹಳ ಮುಖ್ಯ. ವಿದ್ಯುತ್ ಇಲ್ಲದೆ ಯಾವುದೇ ಅಭಿವೃದ್ಧಿ ಊಹಿಸಿಕೊಳ್ಳಲು ಸಾಧ್ಯವಿಲ್ಲ.

ಕೊಪ್ಪಳ: ದೇಶದ ರಕ್ಷಣೆಯ ದೃಷ್ಟಿಯಿಂದ ನಮ್ಮ ಯೋಧರ ಸುರಕ್ಷತೆ ಎಷ್ಟು ಮುಖ್ಯವೋ ಅದೇ ರೀತಿ ನಮ್ಮ ದೇಶದ ಅಭಿವೃದ್ಧಿ ಹಾಗೂ ಜನರ ನೆಮ್ಮದಿ ಜೀವನಕ್ಕೆ ವಿದ್ಯುತ್ ವೀರರು ಅಷ್ಟೇ ಮುಖ್ಯ. ಹಾಗಾಗಿ ಅವರ ಸುರಕ್ಷತೆ ಬಹಳ ಮುಖ್ಯವಾಗಿದೆ ಎಂದು ಕೊಪ್ಪಳ ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ ಹೇಳಿದರು.

ಅವರು ಕೊಪ್ಪಳ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಜೆಸ್ಕಾಂ ಕೊಪ್ಪಳ ಕಾರ್ಯ ಮತ್ತು ಪಾಲನಾ ವಿಭಾಗ ವ್ಯಾಪ್ತಿಯ ಮಾರ್ಗದಾಳುಗಳು ಮತ್ತು ನಿರ್ವಹಣಾ ಸಿಬ್ಬಂದಿಗೆ ಆಯೋಜಿಸಲಾಗಿದ್ದ ವಿದ್ಯುತ್ ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸುವ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ನಮ್ಮ ದೇಶದ ಅಭಿವೃದ್ಧಿಗೆ ವಿದ್ಯುತ್ ಬಹಳ ಮುಖ್ಯ. ವಿದ್ಯುತ್ ಇಲ್ಲದೆ ಯಾವುದೇ ಅಭಿವೃದ್ಧಿ ಊಹಿಸಿಕೊಳ್ಳಲು ಸಾಧ್ಯವಿಲ್ಲ. ಆ ವಿದ್ಯುತ್ ಪೂರೈಕೆಯಲ್ಲಿ ಯಾವುದೇ ಕೊರತೆ ಬಾರದಂತೆ ನೋಡಿಕೊಂಡು ಅಭಿವೃದ್ಧಿಗೆ ಕಾರಣವಾಗಿರುವ ವಿದ್ಯುತ್ ಮಾರ್ಗದಾಳುಗಳು ಮತ್ತು ನಿರ್ವಹಣಾ ಸಿಬ್ಬಂದಿ ಸುರಕ್ಷತೆಯೂ ಮುಖ್ಯ. ನಮ್ಮ ಜಿಲ್ಲೆಯಲ್ಲಿ ಯಾವುದೇ ಭಾಗದಲ್ಲಿ ವಿದ್ಯುತ್ ವ್ಯತ್ಯಯವಾಗದಂತೆ ನೋಡಿಕೊಳ್ಳುತ್ತಿರುವ ವಿದ್ಯುತ್ ವೀರರು ನೀವು. ನಿಮ್ಮ ಸುರಕ್ಷತೆ ಬಹಳ ಮುಖ್ಯ. ಕೆಲಸದ ಸಮಯದಲ್ಲಿ ಸುರಕ್ಷಿತ ಉಪಕರಣ ಹಾಗೂ ಸುರಕ್ಷತೆ ಕ್ರಮ ಬಳಸಿ ಎಂದರು.

ಜೆಸ್ಕಾಂ ಕೊಪ್ಪಳ ಕಾರ್ಯ ಮತ್ತು ಪಾಲನಾ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರ ಮೊಟ್ಲಾ ನಾಯ್ಕ್ ಜಾಗೃತಿ ತರಬೇತಿ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೆಲಸ ಮಾಡುವಾಗ ಮೊದಲು ಕಡ್ಡಾಯವಾಗಿ ಸುರಕ್ಷಿತ ಕ್ರಮ ಅನುಸರಿಸುವುದು ಸೂಕ್ತ. ಜನರಿಗೆ ಬೆಳಕು ನೀಡಲು, ನಿಮ್ಮ ಇರುವಿಕೆ ಬಹಳ ಮುಖ್ಯ. ಹಾಗಾಗಿ ಜಾಗರೂಕತೆಯಿಂದ ಕೆಲಸ ಮಾಡಿ ಎಂದು ಹೇಳಿದರು.

ಹುತಾತ್ಮ ಪವರ್‌ಮ್ಯಾನ್‌ಗಳಿಗೆ ಗೌರವ ಸಮರ್ಪಣೆ:

ಇದೇ ವೇಳೆ ಒಂದು ನಿಮಿಷಗಳ ಕಾಲ ಮೌನ ಆಚರಿಸಿ ವಿದ್ಯುತ್ ಅಪಘಾತದಲ್ಲಿ ಹುತಾತ್ಮ ಪವರ್ ಮ್ಯಾನ್‌ಗಳಿಗೆ ಗೌರವ ಸಮರ್ಪಿಸಲಾಯಿತು.

ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಸೈಯದ್ ಯುನೂಸ್, ಎಂ.ನಾಗರಾಜ್, ಮಹಮ್ಮದ್ ಕಲಿಮುದ್ದೀನ್, ಸಂತೋಷ ಕುಮಾರ, ಬಿ.ಆರ್.ದೇಸಾಯಿ, ರಾಜೇಶ್ ಎ.ಎಂ., ಬಿ. ವೆಂಕಟೇಶ್ ಹಾಗೂ ಎಸ್.ಎನ್. ಕುರಿ, ವಿದ್ಯುತ್ ಪರಿವೀಕ್ಷಕ ಸಂತೋಷ ಕುಮಾರ್,ಲೆಕ್ಕಾಧಿಕಾರಿ ರಫೀಕ್ ಅಹ್ಮದ್, ಸಹಾಯಕ ಲೆಕ್ಕಾಧಿಕಾರಿ ಯುನೂಸ್ ಖಾನ್, ಕವಿಪ್ರನಿ ನೌಕರರ ಸಂಘದ ಪದಾಧಿಕಾರಿ ನಾಗರಾಜ ಗಾಯಕವಾಡ್, ಮನೋಹರ, ಹನುಮಂತಪ್ಪ ಹುನಗುಂದ, ಅನಾಳಪ್ಪ, ಕಲ್ಲಪ್ಪ ಸೂಡಿ ಉಪಸ್ಥಿತರಿದ್ದರು.

ಕಾರ್ಯಾಗಾರದಲ್ಲಿ ಡಾ.ಶಿವಪ್ಪ ಎಸ್., ಬಿ.ಆರ್. ದೇಸಾಯಿ, ವೆಂಕಟೇಶ್, ಮಹಮ್ಮದ್ ಕಲಿಮುದ್ದೀನ್, ಸಂತೋಷ ಕುಮಾರ್ ವಿದ್ಯುತ್ ಸುರಕ್ಷತಾ ಕ್ರಮಗಳ ಕುರಿತು ಮಾಹಿತಿ ನೀಡಿದರು. ಕಿರಿಯ ಅಭಿಯಂತರ ಗಿರೀಶ್ ಎಂ. ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಒಪಿಎಸ್‌ ಜಾರಿಗೆ ಸರ್ಕಾರಕ್ಕೆ ಒತ್ತಾಯಿಸುವೆ
ರೈತ ಭವನ ಶಿಥಿಲ, ವಾಸಿಸಲು ಜಟಿಲ!