ಗದಗ: ಪಾರಮಾರ್ತಿಕ ಮತ್ತು ಪ್ರಾಪಂಚಿಕ ಜೀವನಕ್ಕೆ ಶ್ರೀಸಾಯಿ ಸಚ್ಛರಿತ್ರೆ ಸನ್ಮಾರ್ಗ ನೀಡಿ ದಾರಿ ದೀಪವಾಗಬಲ್ಲದು ಎಂದು ವೈದ್ಯ, ಧಾರ್ಮಿಕ ಚಿಂತಕ ಡಾ. ಎಸ್.ಬಿ. ಶೆಟ್ಟರ ಹೇಳಿದರು.
ಶ್ರೀಸಾಯಿ ಸಚ್ಚರಿತ್ರೆ ಪಠಣದಿಂದ, ಆಲಿಕೆಯಿಂದ ಪಾಪಗಳು ನಾಶವಾಗುತ್ತವೆ. ಯೋಗಿಗಳ ಜೀವನ ಆಧ್ಯಾತ್ಮಿಕ ಮತ್ತು ಸಾಧನೆಗೆ ರಾಜ ಮಾರ್ಗವಾಗಿವೆ ಎಂದರು.
ಸಂಸಾರವನ್ನು ಸಾಗರಕ್ಕೆ ಹೊಲಿಕೆ ಮಾಡಲಾಗುತ್ತಿದೆ. ಈ ಮೊದಲು ಸಮುದ್ರದಲ್ಲಿ ದಿಕ್ಸೂಚಿಯಾಗಿ ಲೈಟೌಸ್ (ದೀಪ ಮನೆ)ಗಳು ಇರುತ್ತಿದ್ದವು ದೀಪಮನೆಗಳ ದಿಕ್ಸೂಚಿ ಅನುಸರಿಸಿ ನಾವಿಕರು ತಮ್ಮ ಹಡಗು ಚಲಿಸಬೇಕಾದ ಮಾರ್ಗ ನಿರ್ಧರಿಸುವ ಹಾಗೇ ಯೋಗಿಗಳ ಜೀವನ ಕಥೆಯು ಸಂಸಾರದ ಸಾಗರದಲ್ಲಿರುವವರಿಗೆ ದಾರಿದೀಪ ಇದ್ದ ಹಾಗೆ. ಯಾವಾಗ ನಾವು ನಮ್ಮ ಧಾರ್ಮಿಕ ಕರ್ತವ್ಯ ಮರೆಯುತ್ತೇವೆಯೂ ಮತೀಯ ಕಲಹಗಳು ಪ್ರಾರಂಭವಾಗುವವೋ ಆವಾಗ ಯೋಗಿಗಳು ಹುಟ್ಟಿ ಬರುವರು. ಯೋಗಿಗಳ ಮಾರ್ಗದರ್ಶನದಲ್ಲಿ ಸಮಾಜ ಸನ್ಮಾರ್ಗದೆಡೆಗೆ ಮುನ್ನಡೆಯಲು ಸಹಕಾರಿ ಎಂದರು.ಶಿರಡಿಯಲ್ಲಿರುವ ಧುನಿ ಮಾದರಿಯನ್ನು ಗದುಗಿನ ಶಿರಡಿ ಬಾಬಾ ಮಂದಿರ ಬಳಿ ನಿರ್ಮಿಸಲು ಸಂಕಲ್ಪಿಸಲಾಗಿದ್ದು, ಈಗಾಗಲೇ ಭೂಮಿ ಪೂಜಾ ಕಾರ್ಯವೂ ಆಗಿದೆ. ಈ ಕಾರ್ಯಕ್ಕೆ ದಿ. ಗಂಗಣ್ಣ ಕೋಟಿ ₹50 ಸಾವಿರ ದೇಣಿಗೆಯಾಗಿ ನೀಡುವ ಮೂಲಕ ದೇಣಿಗೆ ಸಂಗ್ರಹಕ್ಕೆ ಮುನ್ನುಡಿ ಬರೆದಿದ್ದಾರೆ. ಇಂತಹ ಮಹತ್ವದ ಕಾರ್ಯಕ್ಕೆ ಭಕ್ತಾದಿಗಳು ಕೈಜೋಡಿಸಬೇಕೆಂದು ವಿನಂತಿಸಿದರು.
ಕಾರ್ಯಕ್ರಮದಲ್ಲಿ ಸಮಿತಿಯ ಪದಾಧಿಕಾರಿಗಳು, ಸದಸ್ಯರು, ಭಕ್ತಾದಿಗಳು ಇದ್ದರು. ಸಮಿತಿಯ ಅಧ್ಯಕ್ಷ ಮಹೇಶ ತಲೇಗೌಡ್ರ ಸ್ವಾಗತಿಸಿದರು. ಕಾರ್ಯದರ್ಶಿ ರವಿ ಚಿಂಚಲಿ ನಿರೂಪಿಸಿ ವಂದಿಸಿದರು.