ಸಮಾಜದ ಏಳಿಗೆಗೆ ಶ್ರಮಿಸಿದ ಸಂತ ಸೇವಾಲಾಲ್‌: ಅಭಿಷೇಕ್‌

KannadaprabhaNewsNetwork |  
Published : Feb 16, 2026, 03:45 AM IST
ಪೋಟೋ: 15ಎಸ್‌ಎಂಜಿಕೆಪಿ01ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಾನಗರಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾ ಬಂಜಾರ ಸಂಘದ ಸಹಯೋಗದಲ್ಲಿ ಭಾನುವಾರ ಏರ್ಪಡಿಸಿದ್ದ ಸಂತ ಶ್ರೀ ಸೇವಾಲಾಲ್ ಜಯಂತಿ ಕಾರ್ಯಕ್ರಮವನ್ನು ಅಪರ ಜಿಲ್ಲಾಧಿಕಾರಿ ವಿ.ಅಭಿಷೇಕ್ ಉದ್ಘಾಟಿಸಿದರು. | Kannada Prabha

ಸಾರಾಂಶ

ಸಂತ ಶ್ರೀ ಸೇವಾಲಾಲರು ಸಮಾಜದ ಏಳಿಗೆಗಾಗಿ ಶ್ರಮಿಸಿದ್ದು, ಶಾಂತಿಯ ಮಾರ್ಗದಲ್ಲಿ ಸಾಗಬೇಕು ಎಂದು ಸಾರಿದ್ದಾರೆ ಎಂದು ಅಪರ ಜಿಲ್ಲಾಧಿಕಾರಿ ವಿ.ಅಭಿಷೇಕ್ ತಿಳಿಸಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಸಂತ ಶ್ರೀ ಸೇವಾಲಾಲರು ಸಮಾಜದ ಏಳಿಗೆಗಾಗಿ ಶ್ರಮಿಸಿದ್ದು, ಶಾಂತಿಯ ಮಾರ್ಗದಲ್ಲಿ ಸಾಗಬೇಕು ಎಂದು ಸಾರಿದ್ದಾರೆ ಎಂದು ಅಪರ ಜಿಲ್ಲಾಧಿಕಾರಿ ವಿ.ಅಭಿಷೇಕ್ ತಿಳಿಸಿದರು.

ಇಲ್ಲಿನ ಕುವೆಂಪು ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾ ಬಂಜಾರ ಸಂಘದ ಸಹಯೋಗದಲ್ಲಿ ಭಾನುವಾರ ಏರ್ಪಡಿಸಿದ್ದ ಸಂತ ಶ್ರೀ ಸೇವಾಲಾಲ್ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಸಮಾಜದಲ್ಲಿ ಯಾರೂ ಕೂಡ ಕುಡಿತ, ಮತ್ತಿತರೆ ದುಶ್ಚಟಗಳಿಗೆ ಬಲಿಯಾಗಬಾರದು ಎಂದು ಸೇವಾಲಾಲರು ತಿಳಿಸಿದ್ದು, ಅವರು ತೋರಿದ ಮಾರ್ಗದಲ್ಲಿ ನಡೆದು, ಅವರ ತತ್ವಗಳನ್ನು ಅಳವಡಿಸಿಕೊಂಡರೆ ಜೀವನ‌ ಉತ್ತಮಗೊಳ್ಳುತ್ತದೆ ಎಂದರು.

ಅಯ್ಯಪ್ಪ ಸ್ವಾಮಿಗೆ ಮಾಲೆ ಹಾಕುವ ರೀತಿಯಲ್ಲಿ‌ ಸೇವಾಲಾಲರ ಜಯಂತಿಗೆ ಸಹ ವಿವಿಧ ತಾಂಡಾಗಳಿಂದ ಭಕ್ತಾದಿಗಳು ಮಾಲೆ ಧರಿಸಿ ಎಲ್ಲ ದುಶ್ಚಟಗಳಿಂದ ದೂರವಾಗಿ ಶ್ರದ್ದೆ-ಭಕ್ತಿಯಿಂದ ನಡೆದುಕೊಳ್ಳುತ್ತಾರೆ ಎಂದ ಅವರು ಮುಂದಿನ ದಿನಗಳಲ್ಲಿ ಸಮಾಜದ ಅತಿ ಹೆಚ್ಚು ಅಂಕ‌ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ‌‌ ಅಭಿನಂದಿಸಲಾಗುವುದು ಎಂದು ತಿಳಿಸಿದರು.

ತೀರ್ಥಹಳ್ಳಿ ತಾಲೂಕಿನ ಮೇಳಿಗೆ ಸರ್ಕಾರಿ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ಟಿ.ಗಣೇಶ್ ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ಕ್ರಿ ಪೂ 5 ಸಾವಿರ ವರ್ಷಗಳ ಹಿಂದೆಯೇ ಸಿಂಧೂ ಬಯಲಿನ ನಾಗರಿಕತೆ ಯಿಂದ ಬಂಜಾರ ಸಮುದಾಯದ ಇತಿಹಾಸ ಇರುವುದು ಕಂಡು ಬಂದಿದ್ದು, ಈ ಸಮಾಜದ ಉದ್ದಾರಕರಾದ ಕ್ರಾಂತಿವೀರ, ಸಮಾಜ ಸುಧಾರಕ, ಸಮಾಜದ ಹರಿಕಾರರಾದ ಸಂತ ಸೇವಾಲಾಲರು 1739 ಫೆಬ್ರವರಿ 15 ರಂದು ಸೂರಗೊಂಡನಕೊಪ್ಪ ದಲ್ಲಿ ಜನ್ಮತಾಳಿದರು. ಕನಕದಾಸರು, ಪುರಂದರದಾಸರಂತಹ ದಾರ್ಶನಿಕರ ಸಾಲಿನಲ್ಲಿ ಸೇವಾಲಾಲರು ನಿಲ್ಲುತ್ತಾರೆ ಎಂದು ಹೇಳಿದರು.

ಪ್ರಾಣಿಗಳನ್ನು ಅತ್ಯಂತ ಪ್ರೀತಿಸುತ್ತಿದ್ದ, ಬಿಳಿ ಕುದುರೆಯನ್ನೇರಿ ಜಗತ್ತನ್ನು ಸುತ್ತುತ್ತಿದ್ದ ಸೇವಾಲಾಲರು ಉತ್ತಮ ಆರ್ಥಿಕ ತಜ್ಞರು, ಸಂಘಟನಾ ಚತುರರೂ ಆಗಿದ್ದರು. ಅನ್ಯರನ್ನೂ ತಮ್ಮವರೆಂದು ಭಾವಿಸಿ, ಸಮಾಜದ ಉದ್ದಾರಕ್ಕಾಗಿ ಸದಾ ಶ್ರಮಿಸಿದರು. ಸಮಾಜದ ಏಳಿಗೆಗಾಗಿ ಪಂಚ ತತ್ವಗಳಾದ ಕಳ್ಳತನ ಮಾಡಬಾರದು, ದಯೆ ಹೊಂದಿ, ಸತ್ಯದ ಮಾರ್ಗದಲ್ಲಿ ನಡೆಯಬೇಕು ಹಾಗೂ ದುಶ್ಚಟಗಳಿಂದ ದೂರವಿರಬೇಕು ಎಂದು ಸಾರಿದ್ದರು ಎಂದು ತಿಳಿಸಿದರು.

ಭೋಗ್, ಈತಿ ಮತ್ತು ಪ್ರಾರ್ಥನೆಯನ್ನು ಸಮಾಜದವರು ಅನುಸರಿಸಬೇಕು ಎಂದು ತಿಳಿಸಿದ್ದ ಸೇವಾಲಾಲರು‌ 18 ನೇ ಶತಮಾನದಲ್ಲಿ‌ ಅಂಧಕಾರದಲ್ಲಿದ್ದ ಸಮಾಜಕ್ಕೆ ದಾರಿ ದೀಪವಾಗಿದ್ದರು.‌ ಆವಾಗಲೇ ಅವರು ಮುಂದಿನ ದಿನಗಳಲ್ಲಿ ನೀರನ್ನು ಸಹ ಕೊಂಡುಕೊಳ್ಳುವ ಪರಿಸ್ಥಿತಿ ಬರುತ್ತೆ ಎಂದು ಎಚ್ಚರಿಕೆ ನೀಡಿದ್ದರು ಎಂದು ತಿಳಿಸಿದರು.

ಜಿಪಂ ಮುಖ್ಯ ಯೋಜನಾಧಿಕಾರಿ ಹನುಮಾನಾಯಕ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರ ಎಚ್‌.ಉಮೇಶ್ , ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರೇಖ್ಯಾನಾಯ್ಕ್,ಸಮಾಜದ ಮುಖಂಡರು, ಅಧಿಕಾರಿಗಳು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿವ ಸ್ಮರಣೆಯಿಂದ ಮನದ ಅಂಧಕಾರ ದೂರ: ಡಾ.ಕೇದಾರಲಿಂಗ ಶ್ರೀ
ಶಿವ ಆರಾಧಾನೆಯಲ್ಲಿ ಮಿಂದೆದ್ದ ಶಿವಮೊಗ್ಗ ಜಿಲ್ಲೆಯ ಜನ