- ಯುವ ಮುಖಂಡನಿಗೆ ಸಿಎಂ, ಮಠಾಧೀಶರ ಆಶೀರ್ವಾದ, ಸಮಾಜಮುಖಿ ಸೇವೆಯಲ್ಲಿ ಭಾಗಿ - - -
ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಅವರ ಹಿರಿಯ ಪುತ್ರ, ಯುವ ಉದ್ಯಮಿ ಸಮರ್ಥ್.ಎಂ.ಶಾಮನೂರು ತಮ್ಮ 27ನೇ ಜನ್ಮದಿನವನ್ನು ಅರ್ಥಪೂರ್ಣ ಆಚರಿಸಿಕೊಂಡರು.
ನಗರದ ವಿವಿಧ ಅನಾಥಾಲಯ, ವೃದ್ಧಾಶ್ರಮ, ತುರ್ಚಘಟ್ಟ ಗ್ರಾಮದ ನಿರಾಶ್ರಿತರ ಕೇಂದ್ರ, ಅಂಧ ಮಕ್ಕಳ ಶಾಲೆ, ಶಾಲಾ ಮಕ್ಕಳಿಗೆ, ಸಾರ್ವಜನಿಕರಿಗೆ, ಕೊಟ್ಟೂರು ಪಾದಯಾತ್ರೆಗಳಿಗೆ ಸಮರ್ಥ ಎಂ. ಶಾಮನೂರು ಅಭಿಮಾನಿಗಳು ಹಮ್ಮಿಕೊಂಡಿದ್ದ ಉಪಹಾರ, ಊಟ ಮತ್ತು ಪ್ರಸಾದ ವಿತರಣೆ ಕಾರ್ಯದಲ್ಲಿ ಸಮರ್ಥ ಪಾಲ್ಗೊಂಡಿದ್ದರು.ಆನೆಕೊಂಡ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಂತರ ತಮ್ಮ ಅಜ್ಜ ಲಿಂಗೈಕ್ಯ ಡಾ.ಶಾಮನೂರು ಶಿವಶಂಕರಪ್ಪ, ಅಜ್ಜಿ ದಿವಂಗತ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪನವರ ಸಮಾಧಿ ಬಳಿಗೆ ತೆರಳಿ, ಪೂಜೆ ಸಲ್ಲಿಸಿದರು. ಅನಂತರ ಆಶಾಕಿರಣ ಟ್ರಸ್ಟ್ ಮಕ್ಕಳು, ಸರ್ಕಾರಿ ಅಂಧ ಹೆಣ್ಣುಮಕ್ಕಳ ಶಾಲೆಯಲ್ಲಿ ಉಪಾಹಾರ ವ್ಯವಸ್ಥೆ ಮಾಡಿದ್ದ ಸ್ಥಳಕ್ಕೆ ತೆರಳಿದರು. ಅಲ್ಲಿಂದ ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಿಗೆ ಅಭಿಷೇಕ ಸಲ್ಲಿಸಿ, ದೇವಸ್ಥಾನ ಧರ್ಮದರ್ಶಿಗಳಿಂದ ಸನ್ಮಾನ ಸ್ವೀಕರಿಸಿದರು.
ಹರಿಹರ ತಾ. ರಾಜನಹಳ್ಳಿ ವಾಲ್ಮೀಕಿ ಜಾತ್ರೆಯಲ್ಲಿ ಪಾಲ್ಗೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯ, ಸಂಪುಟದ ಹಿರಿಯ ಸಚಿವರು ಹಾಗೂ ವಾಲ್ಮೀಕಿ ಗುರುಗಳಾದ ಶ್ರೀ ಪ್ರಸನ್ನಾನಂದಪುರಿ ಮಹಾಸ್ವಾಮಿಗಳ ಆಶೀರ್ವಾದ ಪಡೆದರು. ಬೆಳ್ಳೂಡಿಯ ಕಾಗಿನೆಲೆ ಶಾಖಾ ಮಠಕ್ಕೆ ತೆರಳಿ ಶ್ರೀ ನಿರಂಜನಾನಂದಪುರಿ ಮಹಾಸ್ವಾಮಿಗಳಿಂದ ಆಶೀರ್ವಾದ ಪಡೆದರು.
ದಾವಣಗೆರೆ ತಾ. ತುರ್ಚಘಟ್ಟ ಗ್ರಾಮದ ನಿರಾಶ್ರಿತರ ಕೇಂದ್ರದ ನಿವಾಸಿಗಳಿಗೆ ಸಿಹಿಯೂಟ ವಿತರಿಸಿ, ನಂತರ ಹಜರತ್ ಸೈಯದ್ ಸಾದತ್ ಷಾವಲಿ ದರ್ಗಾಕ್ಕೆ ಭೇಟಿ ನೀಡಿ, ಚಾದರ ಹೊದಿಸಿದರು. ಮಾಗಾನಹಳ್ಳಿ ರಸ್ತೆಯ ಎ.ಆರ್.ಶಾದಿಮಹಲ್ನಲ್ಲಿ ಏರ್ಪಡಿಸಿದ್ದ ಕವಾಲಿ ಕಾರ್ಯಕ್ರಮದಲ್ಲಿ ಸಮರ್ಥ ಶಾಮನೂರು ಭಾಗವಹಿಸಿದರು. - - -