ಬಳ್ಳಾರಿ: ಸಂಗಂ ಟ್ರಸ್ಟ್ ವತಿಯಿಂದ ನಗರ ಹೊರವಲಯದ ಜ್ಞಾನಾಮೃತ ಕಾಲೇಜಿನಲ್ಲಿ ಮೇ 9, 10ರಂದು ಎರಡು ದಿನಗಳ ಸಂಗಂ ಸಾಹಿತ್ಯ ಪುರಸ್ಕಾರ-2025 ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ.
ಎರಡು ದಿನಗಳ ಕಾರ್ಯಕ್ರಮದಲ್ಲಿ ಮೊದಲ ದಿನ "ಕನ್ನಡ ತೆಲುಗು ನುಡಿ ಸಾಂಗತ್ಯ " ಕುರಿತು ವಿಚಾರ ಸಂಕಿರಣ ಜರುಗಲಿದೆ. ಕಾವ್ಯ ಸಂವಾದದಲ್ಲಿ ಲೇಖಕ ಚಿದಾನಂದ ಸಾಲಿ, ರವಿಕುಮಾರ್ ಟೆಲೆಕ್ಸ್, ಭುವನಾ ಹಿರೇಮಠ, ನಾಗಣ್ಣ ಕಿಲಾರಿ, ತೆಲುಗು ಲೇಖಕರಾದ ತಗುಳ್ಲ ಗೋಪಾಲ, ಕಲ್ಯಾಣಿ ಕುಂಜು, ಬಾಲಸುಧಾಕರ ಮೌಳಿ ಭಾಗವಹಿಸುವರು. ಬಳಿಕ ನಡೆಯುವ ಕವಿಗೋಷ್ಠಿಯನ್ನು ಹೈದ್ರಾಬಾದ್ನ ಮೋಹನಕೃಷ್ಣ ಚಾಲನೆ ನೀಡಲಿದ್ದಾರೆ. ಮೇದೂರು ತೇಜ ಸಮನ್ವಯಗೊಳಿಸುವರು. ಕವಿಗೋಷ್ಠಿಯಲ್ಲಿ ಕನ್ನಡ, ತೆಲುಗಿನ ಕವಿಗಳು ಭಾಗವಹಿಸುವರು. ಸಂಜೆ ಸಂಗಂ ಸಾಹಿತ್ಯ ಪುರಸ್ಕಾರದ ಅಂತಿಮ 5 ಮಂದಿ ಕವಿಗಳೊಂದಿಗೆ ಸಂವಾದ ನಡೆಯಲಿದೆ. ಬಳಿಕ "ಸಂಗಂ ಸಾಹಿತ್ಯ ಪುರಸ್ಕಾರ " ಪ್ರದಾನ ಸಮಾರಂಭ ನಡೆಯಲಿದೆ. ಹಿರಿಯ ಲೇಖಕ ಡಾ.ಅಮರೇಶ ನುಗಡೋಣಿ ಪ್ರಶಸ್ತಿ ಪ್ರದಾನಿಸುವರು. ಡಾ.ವೈ.ಸಿ. ಯೋಗಾನಂದ ರೆಡ್ಡಿ ಅಧ್ಯಕ್ಷತೆ ವಹಿಸುವರು. ಜೆ.ಪಿ. ಬಸವರಾಜ, ಸಚಿತಾ ಬನ್ನಾಡಿ, ರಾಜೇಂದ್ರ ಪ್ರಸಾದ್ ತೀರ್ಪುಗಾರರಾಗಿ ಭಾಗವಹಿಸುವರು ಎಂದು ತಿಳಿಸಿದರು.
ಎರಡನೇ ದಿನ ಕಥಾ ಸಮಯ, ಯುವ ಪ್ರಕಾಶಕರ ತವಕ ತಲ್ಲಣ ಕುರಿತು ಚರ್ಚೆಗಳು ನಡೆಯಲಿವೆ. ಕನ್ನಡ, ತೆಲುಗಿನ ಪ್ರಕಾಶಕರು ಭಾಗವಹಿಸುವರು. ನಂತರ ನಡೆಯುವ ಕವಿ ಸಮಯ ಕಾರ್ಯಕ್ರಮದಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಡಾ.ಅಮರೇಶ ನುಗಡೋಣಿ ಅವರೊಂದಿಗೆ ಸಂವಾದ, ವಿಶೇಷ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಕೊನೆಯಲ್ಲಿ ಕವಿಗೋಷ್ಠಿ ಜರುಗಲಿದೆ. ರಾಜ್ಯದ ವಿವಿಧ ಜಿಲ್ಲೆಗಳ ಕವಿಗಳು ಪಾಲ್ಗೊಳ್ಳುವರು. ಸಮಾರಂಭದಲ್ಲಿ ನಾಗಣ್ಣ ಕಿಲಾರಿ ಅವರ ಕಾಯಗುಡ್ಡ ಕಾದಂಬರಿ, ಪಿ.ಆರ್. ವೆಂಕಟೇಶ್ ಅವರ ಕಾಯುವ ಕಣ್ಣು ಕವನ ಸಂಕಲನ ಹಾಗೂ ಡಾ.ದಸ್ತಗೀರಸಾಬ್ ದಿನ್ನಿ ಅವರ ಕರುಳ ಬೆಂಕಿಯ ಪತಂಗ ಮಿರ್ಜಾ ಗಾಲಿಬ್ ಕೃತಿಗಳು ಜನಾರ್ಪಣೆಗೊಳ್ಳಲಿವೆ.ಕಾರ್ಯಕ್ರಮ ಜರುಗುವ ಬಳ್ಳಾರಿ ಹೊರವಲಯದ ಜ್ಞಾನಾಮೃತ ಕಾಲೇಜಿಗೆ ಬರುವ ಸಾಹಿತ್ಯಾಸಕ್ತರಿಗೆ ಸಾರಿಗೆ ವ್ಯವಸ್ಥೆ ಮಾಡಲಾಗಿದೆ ಎಂದರು.