ಬೈಲಹೊಂಗಲ: ಸಾಧನೆಗೆ ವಯಸ್ಸಿನ ಮಿತಿ ಇಲ್ಲ ಎಂಬುವುದನ್ನು ತೋರಿಸಿರುವ ಪಟ್ಟಣದ ಅವರಾದಿ ಗಲ್ಲಿಯ 3 ವರ್ಷ ವಯಸ್ಸಿನ ಸನ್ವಿತಾ ಸಾಗರ ಕರಿಬಾಳೆ ತನ್ನ ಅಮೋಘ ಜ್ಞಾಪಕ ಶಕ್ತಿಯಿಂದಾಗಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್-2023 ಸೇರುವ ಮೂಲಕ ಬೈಲಹೊಂಗಲ ನಾಡಿಗೆ ಕೀರ್ತಿ ತಂದಿದ್ದಾಳೆ. ಖಾಸಗಿ ನೌಕರ ಸಾಗರ ಕರಿಬಾಳೆ, ಶೀವಲೀಲಾ ಕರಿಬಾಳೆ ದಂಪತಿಯ ಪುತ್ರಿ ಸನ್ವಿತಾ ಸೇವಾ ಭಾರತಿ ಶಿಕ್ಷಣ ಸಂಸ್ಥೆಯಲ್ಲಿ ನರ್ಸರಿ ಓದುತ್ತಿದ್ದಾಳೆ. ಸನ್ವಿತಾ ಶ್ಲೋಕಗಳ ಪಠಣ, ವಚನಗಳು ಮತ್ತು ರೈಮ್ಸ್ ಹೇಳುವುದು, ಸ್ವಾತಂತ್ರ್ಯ ಸೇನಾನಿಗಳ ಡೈಲಾಗ್ ಅನುಕರಣೆ ಮಾಡುವುದು, ಗಾದೆ ಮಾತುಗಳು, ದೇಶದ ಎಲ್ಲ ರಾಜ್ಯಗಳ ಹೆಸರು, ಮನುಷ್ಯನ ದೇಹದ ಅಂಗಗಳ ಹೆಸರುಗಳನ್ನು ಪಟಪಟನೆ ಹೇಳುವ ಮೂಲಕ ಬೆಸ್ಟ್ ಮೆಮೋರಿ ಪವರ ಎಂದು ಪ್ರಶಸ್ತಿ ಪಡೆದು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್-2023 ಸೇರಿದ್ದಾಳೆ. ಚಿಕ್ಕ ವಯಸ್ಸಿನ ಮಕ್ಕಳ ಬುದ್ಧಿಶಕ್ತಿ ಗಮನಿಸಿ ಈ ಸಂಸ್ಥೆ ಪ್ರಶಸ್ತಿ ನೀಡಿ ಬಂಗಾರದ ಪದಕ, ಐಡಿ ಕಾರ್ಡ್, ಪ್ರಮಾಣ ಪತ್ರ, ಪೆನ್, ಬ್ಯಾಚ್ ನೀಡಿ ಗೌರವಿಸಿದ್ದಾರೆ.