ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ದೇಶದಲ್ಲಿ ಬ್ರಿಟಿಷರ ಆಡಳಿತದ ನಂತರ ಹರಿದು ಹಂಚಿ ಹೋಗಿದ್ದ 562 ವಿವಿಧ ಸಂಸ್ಥಾನಗಳನ್ನು ಒಗ್ಗೂಡಿಸಿ ಏಕತೆಗೆ ಮುನ್ನುಡಿ ಬರೆದ ಕೀರ್ತಿ ಉಕ್ಕಿನ ಮನುಷ್ಯ ಎಂದೇ ಖ್ಯಾತರಾದ ದೇಶದ ಪ್ರಥಮ ಗೃಹಮಂತ್ರಿ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರಿಗೆ ಸಲ್ಲುತ್ತದೆ. ಅವರ ದೇಶಪ್ರೇಮ, ದೇಶಭಕ್ತಿ ಮತ್ತು ದೇಶದ ಬಗೆಗಿನ ಕಾಳಜಿಗಳು ಇಂದಿನ ಪೀಳಿಗೆ ಮಾತ್ರವಲ್ಲದೆ ಭವಿಷ್ಯದ ಪೀಳಿಗೆಗೂ ಪ್ರೇರಣಾದಾಯಕವಾಗಿವೆ ಎಂದು ಸಂಸದ ಡಾ.ಕೆ.ಸುಧಾಕರ್ ತಿಳಿಸಿದರು. ದೇಶವನ್ನು ಒಗ್ಗೂಡಿಸಿದ ಸರ್ದಾರ್ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮೈ ಭಾರತ್ ಕೇಂದ್ರ ಹಾಗೂ ರಾಷ್ಟೀಯ ಸೇವಾ ಯೋಜನೆ ಸಹಯೋಗದಲ್ಲಿ ಸರ್ದಾರ್ ಪಟೇಲ್ ಅವರ 150 ನೇ ಜನ್ಮದಿನಾಚರಣೆ ಪ್ರಯುಕ್ತ ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ‘ಏಕತಾ ಪಾದಯಾತ್ರೆ’ಗೆ ಚಾಲನೆ ನೀಡಿ ಮಾತನಾಡಿ, ಹರಿದು ಹಂಚಿ ಹೋಗಿದ್ದ ಭಾರತದ ವಿವಿಧ ಪ್ರದೇಶಗಳನ್ನು ಒಗ್ಗೂಡಿಸುವ ದಿಟ್ಟತನದ ನಿರ್ಧಾರಕ್ಕೆ ಅಂದಿನ ಗೃಹಮಂತ್ರಿಯಾಗಿದ್ದ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ಮುಂದಾಗಿ ಯಶಸ್ವಿಯಾದರು ಎಂದರು.
ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ನಗರದ ಪ್ರಥಮ ದರ್ಜೆ ಕಾಲೇಜಿನ ಮುಂಭಾಗ ಸಂಸದರು ಚಾಲನೆ ನೀಡಿದರು. ಏಕತಾ ನಡಿಗೆಯು ನಗರದ ಎಂಜಿ ರಸ್ತೆಯ ಜೈ ಭೀಮ್ ಹಾಸ್ಟೆಲ್ ನಿಂದ ಆರಂಭವಾಗಿ, ಅಬೆಡ್ಕರ್ ವೃತ್ತ, ಬಿಬಿ ರಸ್ತೆ ಮಾರ್ಗವಾಗಿ, ಸರ್.ಎಂವಿ ಕ್ರೀಡಾಂಗಣ ತಲುಪಿ ಸಮಾರೋಪಗೊಂಡಿತು.ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಪಿಎನ್.ರವೀಂದ್ರ, ಜಿಲ್ಲಾಪಂಚಾಯತಿ ಸಿಇಓ ಡಾ.ವೈನವೀನ್ ಭಟ್, ಪೋಲಿಸ್ ವರಿಷ್ಟಾಧಿಕಾರಿ ಕುಶಲ್ ಚೌಕ್ಸೆ,ಬಿಜೆಪಿ ಜಿಲ್ಲಾಧ್ಯಕ್ಷ ಸೀಕಲ್ ರಾಮಚಂದ್ರಗೌಡ, ಖಾದಿ ಮಂಡಳಿ ಮಾಜಿ ಅಧ್ಯಕ್ಷ ಕೆ.ವಿ.ನಾಗರಾಜ್, ಮಾಜಿ ಶಾಸಕ ಎಂ.ರಾಜಣ್ಣ, ನಗರಸಭೆ ಮಾಜಿ ಅಧ್ಯಕ್ಷ ಎ.ಗಜೇಂದ್ರ ಮತ್ತಿತರರು ಇದ್ದರು.