ಮೌಲ್ಯಾಧಾರಿತ ಶಿಕ್ಷಣ ಸೇವೆಯಲ್ಲಿ ಸತ್ಯಸಾಯಿ ಲೋಕಸೇವಾ ಗುರುಕುಲಂ

KannadaprabhaNewsNetwork |  
Published : Aug 25, 2026, 02:15 AM IST
೨೨ಬಿಹೆಚ್‌ಆರ್ ೩: ಬಾಳೆಹೊನ್ನೂರು ಸಮೀಪದ ಜಯಪುರದಲ್ಲಿರುವ ಶ್ರೀ ಸತ್ಯಸಾಯಿ ಲೋಕಸೇವಾ ಗುರುಕುಲಂ ಸಮೂಹ ಸಂಸ್ಥೆಯ ಕಟ್ಟಡ. | Kannada Prabha

ಸಾರಾಂಶ

ಬಾಳೆಹೊನ್ನೂರುಮಲೆನಾಡಿನ ಗ್ರಾಮೀಣ ಭಾಗದಲ್ಲಿ ರಾಜ್ಯದ ವಿವಿಧೆಡೆಯ ಬಾಲಕ, ಬಾಲಕಿಯರಿಗೆ ಮೌಲ್ಯಾಧಾರಿತ, ಸೇವೆ, ಸಂಸ್ಕಾರ ಮತ್ತು ಸಮಗ್ರ ಶಿಕ್ಷಣ ನೀಡುತ್ತ ಸಮಾಜದಲ್ಲಿ ಮಹತ್ತರ ಬದಲಾವಣೆಯನ್ನು ಶ್ರೀ ಸತ್ಯಸಾಯಿ ಲೋಕಸೇವಾ ಗುರುಕುಲಂ ಸಮೂಹ ಸಂಸ್ಥೆ ಸದ್ದಿಲ್ಲದೆ ನಡೆಸುತ್ತಿದೆ.

ಗ್ರಾಮೀಣ ಭಾಗದಲ್ಲಿ ರಾಜ್ಯದ ವಿವಿಧೆಡೆ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ

ಸಚಿನ್ ಕುಮಾರ್. ಬಿ.ಎಸ್, ಬಾಳೆಹೊನ್ನೂರು

ಮಲೆನಾಡಿನ ಗ್ರಾಮೀಣ ಭಾಗದಲ್ಲಿ ರಾಜ್ಯದ ವಿವಿಧೆಡೆಯ ಬಾಲಕ, ಬಾಲಕಿಯರಿಗೆ ಮೌಲ್ಯಾಧಾರಿತ, ಸೇವೆ, ಸಂಸ್ಕಾರ ಮತ್ತು ಸಮಗ್ರ ಶಿಕ್ಷಣ ನೀಡುತ್ತ ಸಮಾಜದಲ್ಲಿ ಮಹತ್ತರ ಬದಲಾವಣೆಯನ್ನು ಶ್ರೀ ಸತ್ಯಸಾಯಿ ಲೋಕಸೇವಾ ಗುರುಕುಲಂ ಸಮೂಹ ಸಂಸ್ಥೆ ಸದ್ದಿಲ್ಲದೆ ನಡೆಸುತ್ತಿದೆ.

ಕೊಪ್ಪ ತಾಲೂಕಿನ ಜಯಪುರದಲ್ಲಿ ಶ್ರೀ ಸತ್ಯಸಾಯಿ ಶ್ರೀ ನಿಕೇತನಂ ಹಾಗೂ ಶ್ರೀ ಸತ್ಯಸಾಯಿ ದಿವ್ಯ ನಿಕೇತನಂ ಎಂಬ ಎರಡು ಪ್ರತ್ಯೇಕ ಶಿಕ್ಷಣ ಸಂಸ್ಥೆಗಳ ಮೂಲಕ ರಾಜ್ಯ ಹಾಗೂ ಹೊರರಾಜ್ಯದ ವಿದ್ಯಾರ್ಥಿಗಳಿಗೆ ಸಂಪೂರ್ಣ ಉಚಿತ ಶಿಕ್ಷಣವನ್ನು ಸತ್ಯಸಾಯಿ ಲೋಕಸೇವಾ ಗುರುಕುಲಂ ನೀಡುತ್ತಿದೆ.

2007ರಲ್ಲಿ ಸ್ಥಳೀಯ ಸಾಯಿ ಭಕ್ತರ ಯತ್ನದಿಂದ ಬಾಲಕರಿಗೆ ಶ್ರೀ ಸತ್ಯಸಾಯಿ ಜ್ಯೋತಿ ಶಿಕ್ಷಣ ಸಂಸ್ಥೆ ಆರಂಭ ಗೊಂಡಿದ್ದು, 2008 ಹಾಗು 2014 ರಲ್ಲಿ ಮರು ನಾಮಕರಣಗೊಂಡು 6ನೇ ತರಗತಿಯಿಂದ ವಸತಿ ವ್ಯವಸ್ಥೆಯೊಂದಿಗೆ ವಿದ್ಯಾರ್ಥಿಗಳಿಗೆ ಶಿಕ್ಷಣ, ವಸತಿ, ಆಹಾರ ಹಾಗೂ ಆರೋಗ್ಯ ಸೇವೆ ಸಂಪೂರ್ಣ ಉಚಿತವಾಗಿ ನೀಡಲಾಗುತ್ತಿದೆ. 2018ರಲ್ಲಿ ಬಾಲಕಿಯರಿಗೂ ಇದೇ ಮಾದರಿ ಶಿಕ್ಷಣಕ್ಕಾಗಿ ಶ್ರೀ ಸತ್ಯ ಸಾಯಿ ಶ್ರೀ ನಿಕೇತನಂ ಆರಂಭಗೊಳಿಸಿದೆ. 6- 12ನೇ ತರಗತಿ ವರೆಗೆ ಸಂಪೂರ್ಣ ಉಚಿತ ಶಿಕ್ಷಣ ನೀಡುತ್ತಿದೆ.

ಮೆಡಿಕಲ್ - ಎಂಜಿನಿಯರಿಂಗ್ ಶಿಕ್ಷಣದ ಬಗ್ಗೆ ಒತ್ತು ನೀಡಿ ಪ್ರೋತ್ಸಾಹ ನೀಡುತ್ತಿದೆ. 6- 12ನೇ ತರಗತಿವರೆಗೆ ಮಾತ್ರವಲ್ಲದೇ ಪದವಿ, ಉನ್ನತ ಶಿಕ್ಷಣ, ಎಂಬಿಬಿಎಸ್ ಶಿಕ್ಷಣ ಸಹ ಸಂಸ್ಥೆ ವಿವಿಧೆಡೆ ಶಿಕ್ಷಣ ಸಂಸ್ಥೆ ಗಳಲ್ಲಿಯೂ ಸಂಪೂರ್ಣ ಉಚಿತವಾಗಿ ನೀಡುತ್ತಿದೆ. ಇಲ್ಲಿ ಶಿಕ್ಷಣ ಪಡೆದ ಮಕ್ಕಳಿಗೆ ಇಲ್ಲಿಯೇ ಉದ್ಯೋಗವಕಾಶ ಕಲ್ಪಿಸುವುದು ವೈಶಿಷ್ಟ್ಯವೇ ಸರಿ. ಶಿಕ್ಷಣದೊಂದಿಗೆ ಸಂಗೀತ, ಚಿತ್ರಕಲೆ, ನೃತ್ಯ, ವೇದಾ ಧ್ಯಯನ, ಕ್ರೀಡೆಗಳಲ್ಲಿನ ಆಸಕ್ತ ವಿದ್ಯಾರ್ಥಿಗಳಿಗೆ ತರಬೇತಿ ನೀಡಿ ಸಮರ್ಪಕವಾಗಿ ರೂಪುಗೊಳಿಸಲಾಗುತ್ತಿದೆ.

ಒಟ್ಟಾರೆ ಗ್ರಾಮೀಣ ಭಾಗದಲ್ಲಿ ಯಾವುದೇ ಪ್ರಚಾರದ ಅಬ್ಬರ, ಸ್ವಾರ್ಥವಿಲ್ಲದೆ ಶ್ರೀ ಸತ್ಯಸಾಯಿ ಲೋಕಸೇವಾ ಗುರು ಕುಲಂ ಸಮೂಹ ಸಂಸ್ಥೆ ಎರಡು ಕೇಂದ್ರಗಳು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿವೆ. ಗ್ರಾಮೀಣ ಭಾಗದ ಪ್ರತಿಭೆ ಗುರುತಿಸಿ ಆರೋಗ್ಯ, ಶಿಕ್ಷಣ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆಗೆ ಮುನ್ನುಡಿ ಬರೆದಿದೆ.(ಬಾಕ್ಸ್)

ಸರ್ಕಾರಿ ಶಾಲಾ ಮಕ್ಕಳಿಗೆ ಸಾಯಿ ಶ್ಯೂರ್ ಪೌಷ್ಟಿಕ ಆಹಾರ

ಸತ್ಯಸಾಯಿ ಲೋಕಸೇವಾ ಗುರುಕುಲಂ ಶಿಕ್ಷಣದ ಜೊತೆಗೆ ಸಮಾಜಮುಖಿ ಕಾರ್ಯಗಳಲ್ಲೂ ಸಕ್ರಿಯವಾಗಿ ತೊಡಗಿಸಿ ಕೊಂಡಿದ್ದು, ಶ್ರೀ ಸತ್ಯ ಸಾಯಿ ಅನ್ನಪೂರ್ಣ ಟ್ರಸ್ಟ್ ಮೂಲಕ ಸರ್ಕಾರಿ ಶಾಲಾ ಮಕ್ಕಳಿಗೆ ಸಾಯಿ ಶ್ಯೂರ್ ಎಂಬ ಪೌಷ್ಟಿಕ ರಾಗಿ ಮಾಲ್ಟ್ ಅನ್ನು ಉಚಿತವಾಗಿ ವಿತರಿಸುತ್ತಿದೆ. ರಾಜ್ಯಾದ್ಯಂತ ಸುಮಾರು 1.2 ಕೋಟಿ ವಿದ್ಯಾರ್ಥಿಗಳಿಗೆ ಈ ಸಾಯಿ ಶ್ಯೂರ್ ಪೌಷ್ಟಿಕ ಆಹಾರ ದೊರೆಯುತ್ತಿದೆ. 2 ಕೋಟಿ ವಿದ್ಯಾರ್ಥಿಗಳಿಗೆ ಈ ಯೋಜನೆ ವಿಸ್ತರಿಸಬೇಕು ಎಂಬ ಆಶಯ ಸಂಸ್ಥೆ ಹೊಂದಿದೆ.

ಇದರೊಂದಿಗೆ ಎಂಎನ್‌ಬಿಎಸ್ ಯೋಜನೆಯಡಿ ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ಶಿಕ್ಷಣದ ನೆರವು, ಡೆಲ್ ಕಂಪೆನಿಯ ಸಹಯೋಗದಲ್ಲಿ ಆಯ್ದ ಸರ್ಕಾರಿ ಶಾಲೆಗಳಿಗೆ ಕಂಪ್ಯೂಟರ್ ಶಿಕ್ಷಣ, ಕಂಪ್ಯೂಟರ್, ಯುಪಿಎಸ್ ಉಚಿತ ವಿತರಣೆ ಸೇರಿದಂತೆ ಹಲವು ಯೋಜನೆ ಯಶಸ್ವಿಯಾಗಿ ಅನುಷ್ಠಾನಗೊಳಿಸಿದೆ. ಮಲೆನಾಡಿನ ಸರ್ಕಾರಿ ಶಾಲೆಗಳಿಗೆ ಸಂಚಾರಿ ಕಂಪ್ಯೂಟರ್ ಲ್ಯಾಬ್ ಯೋಜನೆ ಆರಂಭಿಸಿ ಮಕ್ಕಳಿಗೆ ಕಂಪ್ಯೂಟರ್ ಶಿಕ್ಷಣ ನೀಡಲು ಪ್ರೋತ್ಸಾಹಿಸುತ್ತಿದೆ. (ಬಾಕ್ಸ್)

ಪ್ರತೀ ಹೋಬಳಿಯಲ್ಲಿ ಸಾಯಿ ಸ್ವಾಸ್ಥ್ಯ ಟೆಲಿ ಮೆಡಿಸಿನ್ ಕೇಂದ್ರ

ಆರೋಗ್ಯ ಕ್ಷೇತ್ರದಲ್ಲಿಯೂ ಮಹತ್ತರ ಸೇವೆ ಸಲ್ಲಿಸುತ್ತಿರುವ ಸತ್ಯಸಾಯಿ ಸಂಸ್ಥೆ ಪ್ರತೀ ಹೋಬಳಿಯಲ್ಲೂ ಸಾಯಿ ಸ್ವಾಸ್ಥ್ಯ ಟೆಲಿ ಮೆಡಿಸಿನ್ ಕೇಂದ್ರವನ್ನು ಆರಂಭಿಸಿ ಆರೋಗ್ಯ ಸೇವೆ ಒದಗಿಸುತ್ತಿದೆ. ಜಯಪುರದಲ್ಲಿ ಒಬ್ಬ ಶುಶ್ರೂಷಕರು ಸೇವೆ ಸಲ್ಲಿಸುತ್ತಿದ್ದಾರೆ. ಶೀಘ್ರ ಇಲ್ಲಿ ಒಬ್ಬ ವೈದ್ಯರನ್ನು ಒಳಗೊಂಡ ಉಚಿತ ಕ್ಲಿನಿಕ್ ಆರಂಭಿಸುವ ಯೋಜನೆ ಕಾರ್ಯಗತ ಹಂತದಲ್ಲಿದೆ.

ಚಿಕ್ಕಬಳ್ಳಾಪುರದ ಮುದ್ದೇನಹಳ್ಳಿಯಲ್ಲಿ ಈಗಾಗಲೇ 600 ಬೆಡ್‌ನ ನೂತನ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣವಾಗಿದೆ. ಇಲ್ಲಿ ಸಂಪೂರ್ಣ ಉಚಿತ ಆರೋಗ್ಯ ಸೇವೆ ನೀಡಲಾಗುತ್ತಿದೆ. ಜಿಲ್ಲಾ ಕೇಂದ್ರಗಳಲ್ಲಿಯೂ 60 ಬೆಡ್‌ನ ಆಸ್ಪತ್ರೆ ಆರಂಭಿಸುವ ಯೋಜನೆ ಸಾಯಿ ಸಂಸ್ಥೆಯಲ್ಲಿದೆ. ಮುಂದಿನ 5 ವರ್ಷಗಳಲ್ಲಿ ಸತ್ಯಸಾಯಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಕಲಿತು ಹೊರ ಬರುವ ವೈದ್ಯರನ್ನು ಗ್ರಾಮೀಣ ಪ್ರದೇಶಗಳಲ್ಲಿ ಸೇವೆಗೆ ನಿಯೋಜಿಸುವ ಉದ್ದೇಶ ಹೊಂದಿದೆ.

-- ಕೋಟ್ --

ಸತ್ಯಸಾಯಿ ಶಿಕ್ಷಣ ಸಂಸ್ಥೆ ಗ್ರಾಮೀಣ ಪ್ರತಿಭೆಗಳಿಗೆ ಉತ್ತಮ ವೇದಿಕೆ ನೀಡಬೇಕು ಎಂಬ ಉದ್ದೇಶದಿಂದ ಕಾರ್ಯ ನಿರ್ವಹಿಸುತ್ತಿದೆ. ಸಮಾಜದಲ್ಲಿ ಉತ್ತಮ ನಾಗರಿಕರನ್ನು ರೂಪಿಸುವ ಮಹತ್ತರ ಉದ್ದೇಶ ಹೊಂದಿದೆ. ಮಲೆನಾಡು ಭಾಗದಲ್ಲಿ ಆರೋಗ್ಯ ಸೇವೆ ಉತ್ತಮವಾಗಿ ನೀಡಬೇಕು ಎಂಬ ಉದ್ದೇಶದಿಂದ ಶೃಂಗೇರಿ ಅಭಿನವ ವಿದ್ಯಾತೀರ್ಥ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಜೊತೆಗೆ ಒಪ್ಪಂದ ಮಾಡಿಕೊಂಡು ಆರೋಗ್ಯ ಶಿಬಿರ ಆಯೋಜಿಸುವ ಯೋಜನೆಯೂ ಸಂಸ್ಥೆ ಮುಂದಿದೆ. ಮುಂದಿನ ದಿನಗಳಲ್ಲಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಸೌಲಭ್ಯ ಈ ಭಾಗಕ್ಕೆ ಸಂಸ್ಥೆ ತರುವ ನಿರೀಕ್ಷೆಯಿದೆ. ಆ.30ರಂದು ಸದ್ಗುರು ಶ್ರೀ ಮಧು ಸೂದನ ಸಾಯಿ ಅವರ ನೇತೃತ್ವದಲ್ಲಿ ಚಿಕ್ಕಮಗಳೂರಿನ ವೀರಶೈವ ಸಮುದಾಯ ಭವನದಲ್ಲಿ ದಿವ್ಯ ಸಂಜೆ ಕಾರ್ಯಕ್ರಮ ಆಯೋಜಿಸಿದ್ದು, ಸಂಸ್ಥೆ ಕಾರ್ಯವೈಖರಿ ಜನರಿಗೆ ತಲುಪಿಸುವ ಉದ್ದೇಶ ಹೊಂದಲಾಗಿದೆ.

- ಗುರುಪ್ರಸನ್ನ, ಸಾಯಿ ಸ್ವಾಸ್ಥ್ಯ ಟೆಲಿ ಮೆಡಿಸಿನ್ ಕೇಂದ್ರದ ಉಸ್ತುವಾರಿ.

--

ಸತ್ಯಸಾಯಿ ಸಂಸ್ಥೆ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಕಾರ್ಯನಿರ್ವಹಿಸುತ್ತಿದ್ದು, ಯಾವುದೇ ವಿದ್ಯಾರ್ಥಿಗಳಿಂದಲೂ ಒಂದು ರೂಪಾಯಿ ಹಣನ್ನೂ ಕಟ್ಟಿಸಿಕೊಳ್ಳದೆ ಸಂಪೂರ್ಣ ಉಚಿತ ಶಿಕ್ಷಣ, ಉದ್ಯೋಗ ನೀಡುತ್ತಿದೆ. ಒಬ್ಬ ವಿದ್ಯಾರ್ಥಿಗೆ ವಾರ್ಷಿಕ ತಲಾ ₹2 ಲಕ್ಷಕ್ಕೂ ಅಧಿಕ ಹಣ ಶಿಕ್ಷಣಕ್ಕಾಗಿ ವಿನಿಯೋಗಿಸಲಾಗುತ್ತಿದೆ. ನುರಿತ ಶಿಕ್ಷಕರಿಂದ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ಪ್ರತಿಯೊಬ್ಬ ಮಗುವಿಗೆ ಪೌಷ್ಟಿಕತೆ, ಶಿಕ್ಷಣ ಮತ್ತು ಆರೋಗ್ಯ ಸೇವೆ ಪೂರೈಸುವುದು ಕೇವಲ ಹೆತ್ತವರ ಜವಾಬ್ದಾರಿಯಲ್ಲ. ಅದು ಇಡೀ ಸಮಾಜದ ಸಾಮೂಹಿಕ ಜವಾಬ್ದಾರಿಯೂ ಹೌದು ಎಂಬ ಉದ್ದೇಶದಿಂದ ಸಂಸ್ಥೆ ಕಾರ್ಯ ನಿರ್ವಹಿಸುತ್ತಿದೆ.

- ಋಷಾಂಕ್ ಮತ್ತು ಅಪೂರ್ವ, ಸತ್ಯಸಾಯಿ ಸಂಸ್ಥೆ ಉಸ್ತುವಾರಿ.--ಫೋಟೋ ವಿವರ

೨೨ಬಿಹೆಚ್‌ಆರ್ ೩:

ಬಾಳೆಹೊನ್ನೂರು ಸಮೀಪದ ಜಯಪುರದಲ್ಲಿರುವ ಶ್ರೀ ಸತ್ಯಸಾಯಿ ಲೋಕಸೇವಾ ಗುರುಕುಲಂ ಸಮೂಹ ಸಂಸ್ಥೆಯ ಕಟ್ಟಡ.೨೨ಬಿಹೆಚ್‌ಆರ್ ೪:

ಸತ್ಯಸಾಯಿ ಗುರುಕುಲಂನಲ್ಲಿ ವಿದ್ಯಾರ್ಥಿಗಳಿಗೆ ಪರ ಮತ್ತು ಅಪರ ವಿದ್ಯೆಗಳನ್ನು ಬೋಧಿಸುತ್ತಿರುವುದು.೨೨ಬಿಹೆಚ್‌ಆರ್ ೫:

ಸತ್ಯಸಾಯಿ ಗುರುಕುಲಂನ ಬಾಲಕಿಯರಿಗೆ ವಿವಿಧ ಕಲೆಗಳ ಕುರಿತು ತರಬೇತಿ ನೀಡುತ್ತಿರುವುದು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

46 ಭಾರತ ಜೋಡೋ ಯುವಕ ಸಂಘ ಸ್ಥಾಪನೆ
ಸಮಾಜದ ಉನ್ನತಿಗೆ ಶ್ರಮಿಸಿದ ತೋಂಟದಾರ್ಯ ಶ್ರೀ