ಶಿಗ್ಗಾಂವಿ: ಮನುಷ್ಯ ಜೀವನದ ಜಂಜಾಟಗಳಿಂದ ಹೊರಬರಬೇಕಾದರೆ ಸತ್ಸಂಗ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು, ಒಳ್ಳೆಯ ವಿಚಾರಗಳನ್ನು ಆಲಿಸಿ ಅಳವಡಿಸಿಕೊಂಡರೆ ಬದುಕಿನಲ್ಲಿ ನೆಮ್ಮದಿ ಕಾಣಲು ಸಾಧ್ಯ ಎಂದು ವಿರಕ್ತಮಠದ ಸಂಗನಬಸವ ಮಹಾಸ್ವಾಮಿಗಳು ತಿಳಿಸಿದರು.ಪಟ್ಟಣದ ವಿರಕ್ತಮಠದ ಆವಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಶಿಗ್ಗಾಂವಿ ಘಟಕದಿಂದ ಆಯೋಜಿಸಿದ್ದ ಬೆಳದಿಂಗಳ ನೋಟ ಸತ್ಸಂಗದ ಕೂಟ ೦೧ ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದ ಅವರು, ಮನುಷ್ಯ ಗಳಿಸಿ ಕೂಡಿಡುವ ಬದಲು ದಾನ ಧರ್ಮದ ಕಾರ್ಯಗಳಿಗೆ ಮುಂದಾಗಬೇಕು, ಒತ್ತಡದ ಬದುಕಿನಿಂದ ಹೊರಬರಲು ಸಾಮಾಜಿಕ, ಧಾರ್ಮಿಕ, ಆಧ್ಯಾತ್ಮಿಕ ಕಾರ್ಯಗಳಲ್ಲಿ ಭಾಗಿಯಾಗಬೇಕು, ಬೆಳದಿಂಗಳೂಟಕ್ಕೆ ತನ್ನದೆ ಆದ ಇತಿಹಾಸವಿದೆ. ಇದು ಭಾವೈಕ್ಯತೆಯ ಸಂಕೇತವಾಗಿದ್ದು, ಒಡೆದ ಮನಸ್ಸುಗಳನ್ನು ಒಟ್ಟುಗೂಡಿಸಿ ಗಟ್ಟಿಗೊಳಿಸುವ ವೇದಿಕೆಯಾಗಿ, ಹಂಚಿ ತಿನ್ನುವ, ಪ್ರೀತಿ, ವಿಶ್ವಾಸ ನಂಬಿಕೆಗಳನ್ನು ಬೆಸೆಯುವ ಕಾರ್ಯಕ್ರಮವಾಗಿದೆ. ಇಲ್ಲಿ ಸಕಾರಾತ್ಮಕವಾಗಿ ಆಹಾರನ್ನು ಸವಿಯುವುದರಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ವೃದ್ಧಿಯಾಗುತ್ತದೆ, ಇಂತಹ ಕಾರ್ಯಕ್ರಮವನ್ನು ಪ್ರಥಮವಾಗಿ ಆಯೋಜನೆ ಮಾಡಿದ ಕನ್ನಡ ಸಾಹಿತ್ಯ ಪರಿಷತ್ನ ಸರ್ವ ಪದಾಧಿಕಾರಿಗಳಿಗೆ ಅಭಿನಂದನೆಗಳು ಹಾಗೂ ಇಂತಹ ಕಾರ್ಯಕ್ರಮಗಳಿಗೆ ವಿರಕ್ತಮಠವು ಸದಾ ಬಾಗಿಲನ್ನು ತೆರೆದಿರುತ್ತದೆ. ಇಂತಹ ಕಾರ್ಯಕ್ರಮಗಳು ಇನ್ನೂ ಹೆಚ್ಚು ಹೆಚ್ಚು ನಡೆಯಬೇಕು, ಮನುಷ್ಯನ ವಿಕಾಸಕ್ಕೆ ದಾರಿದೀಪವಾಗಬೇಕು ಎಂದರು. ಶಿಕ್ಷಕಿ ಪ್ರತಿಭಾ ಗಾಂಜಿ ಮಾತನಾಡಿದರು. ಡಾ. ಲತಾ ನಿಡಗುಂದಿ ಮಾತನಾಡಿ, ಬೆಳದಿಂಗಳೂಟದ ವೈಜ್ಞಾನಿಕ ಮಹತ್ವ ಹಾಗೂ ಪ್ರಯೋಜನೆಗಳ ಕುರಿತು ಮಾಹಿತಿ ನೀಡಿದರು.