ಕನ್ನಡಪ್ರಭ ವಾರ್ತೆ ಯಮಕನಮರಡಿ
ಶಿಕ್ಷಣದ ಗುಣಮಟ್ಟ ಸುಧಾರಿಸಲು ಸರ್ಕಾರವು ಹಲವಾರು ಶೈಕ್ಷಣಿಕ ಸೌಲಭ್ಯಗಳು ನೀಡುತ್ತಿದ್ದರೂ ಪಾಲಕರು ಖಾಸಗಿ ಶಾಲೆಗಳತ್ತ ಮುಖ ಮಾಡುತ್ತಿರುವುದು ವಿಷಾದನೀಯ ಸಂಗತಿಯಾಗಿದೆ ಎಂದು ಶಿಕ್ಷಣ ಪ್ರೇಮಿ, ಯುವ ಧುರೀಣ ರವೀಂದ್ರ ಜಿಂಡ್ರಾಳಿ ಕಳವಳ ವ್ಯಕ್ತಪಡಿಸಿದರು.ಸಮೀಪದ ಹಳೆಗುಡಗನಟ್ಟಿ ಆರ್.ಸಿ.ಗ್ರಾಮದ ಸರ್ಕಾರಿ ಹಿರಿಯ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ನಮ್ಮ ಶಾಲೆ ನಮ್ಮ ಜವಾಬ್ದಾರಿ ಎಂಬ ಶೈಕ್ಷಣಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡ ಶಾಲೆಗಳಲ್ಲಿ ಕಲಿತ ಹಲವಾರು ಮಹನೀಯರು ನುರಿತ ರಾಜಕಾರಣಿಗಳು, ಉನ್ನತ ಅಧಿಕಾರಿಗಳಾಗಿದ್ದಾರೆ. ಆದರೂ ರಾಜಕಾರಣಿಗಳು ಶಿಕ್ಷಕರು ತಮ್ಮ ಮಕ್ಕಳಿಗೆ ಖಾಸಗಿ ಶಾಲೆಗಳಲ್ಲಿ ಶಿಕ್ಷಣ ಕಲಿಸುತ್ತಿರುವುದು ಖೇದನೀಯ. ಶಿಕ್ಷಕರು ಪಾಲಕರು ಶಿಕ್ಷಣ ಪ್ರೇಮಿಗಳು ಕನ್ನಡ ಶಾಲೆಗಳನ್ನು ಉಳಿಸಲು ಮಕ್ಕಳಿಗೆ ಕನ್ನಡ ಶಾಲೆಗಳಲ್ಲಿ ಸೇರಿಸಬೇಕು ಎಂದು ಕೋರಿದರು.ಹುಕ್ಕೇರಿ ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಭಾವತಿ ಪಾಟೀಲ ಮಾತನಾಡಿ, ಕನ್ನಡ ಶಾಲೆಗಳು ಉಳಿಯಬೇಕಾದರೇ ಮಕ್ಕಳಿಗೆ ಕನ್ನಡ ಶಾಲೆಗಳಲ್ಲಿ ಸೇರಿಸಿ ಶಾಲಾ ದಾಖಲಾತಿ ಹೆಚ್ಚಾಗಬೇಕು. ಶೈಕ್ಷಣಿಕ ದೂರದೃಷ್ಟಿವುಳ್ಳ ಸಚಿವರಾದ ಸತೀಶ ಜಾರಕಿಹೊಳಿಯವರು ಶಾಲೆಗಳಲ್ಲಿ ಶೈಕ್ಷಣಿಕ ಗುಣಮಟ್ಟ ಸುಧಾರಿಸಲು ಶಾಲಾ ಕಟ್ಟಡಗಳನ್ನು ನಿರ್ಮಿಸಿದ್ದು, ಅಲ್ಲದೇ ಶಾಲಾ ಮಕ್ಕಳಿಗೆ ಶೈಕ್ಷಣಿಕ ಸೌಲಭ್ಯಗಳನ್ನು ಒದಗಿಸಿ ಶೈಕ್ಷಣಿಕ ಚಿತ್ರಣವನ್ನೇ ಬದಲಾವಣೆ ಮಾಡಿದ್ದಾರೆ ಎಂದರು.ಯಮಕನಮರಡಿ ಸಿಪಿಐ ಜಾವೇದ್ ಮುಶಾಪುರ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕಿ ಸವಿತಾ ಹಲಕಿ, ಸಮನ್ವಯ ಅಧಿಕಾರಿ ಎ.ಎಸ್.ಪದ್ಮನ್ನವರ ಮಾತನಾಡಿದರು. ಗ್ರಾಮ ಪಂಚಾಯತಿ ಅಧ್ಯಕ್ಷ ಸಮೀರ ಬೇಪಾರಿ, ಯಮುಕನಮರಡಿ ಗ್ರಾಮ ಪಂಚಾಯತಿ ಅಧ್ಯಕ್ಷ ಆಸ್ಮಾ ಫನಿಬಂದ, ಹುಕ್ಕೇರಿ ತಾಲೂಕು ಪಂಚಾಯತಿ ಮಾಜಿ ಅಧ್ಯಕ್ಷ ದಸ್ತಗಿರ ಬಸ್ಸಾಪುರಿ, ಎಸ್.ಡಿ.ಎಂ.ಸಿ ಅಧ್ಯಕ್ಷ ಸಂತೊಷ ನವಕುಡಿ, ಮುಖ್ಯ ಶಿಕ್ಷಕಿ ಸುನಿತಾ ಹೆದ್ದೂರಶೆಟ್ಟಿ, ಆನಂದ ಮಗದುವ, ಬಸವರಾಜ ಕೋಟೆವಾಲೆ, ಅಲ್ತಾಫ್ ಪಟೇಲ, ಎಕ್ಸಸ್ ಕಂಪನಿಯ ಮಂಜುನಾಥ ಹಾಗೂ ಎಸ್.ಡಿ.ಎಂ.ಸಿ ಸದಸ್ಯರು ಪಾಲಕರು ಶಿಕ್ಷಕರು ವಿದ್ಯಾರ್ಥಿಗಳು ಇದ್ದರು. ಮುಖ್ಯ ಶಿಕ್ಷಕ ಎಂ.ಸಿ.ನಗಾರಿ ಸ್ವಾಗತಿಸಿದರು. ಸಿ.ಆರ್.ಪಿ ರವಿ ಜಿರಲಿ ವಂದಿಸಿದರು. ಡಿ.ಜೆ.ಕುಂಬಾರ ಕಾರ್ಯಕ್ರಮ ನಿರೂಪಿಸಿದರು.