ಮುಂದಿನ ಪೀಳಿಗೆಗಾಗಿ ಪರಿಸರ ಉಳಿಸಿ ಬೆಳೆಸಿ: ನ್ಯಾಯಾಧೀಶ ಬಸವರಾಜ

KannadaprabhaNewsNetwork |  
Published : Jun 06, 2026, 02:15 AM IST
5ಎಂಡಿಜಿ2, ಮುಂಡರಗಿ ಪಟ್ಟಣದ ಶಾಸಕರ ಮಾದರಿ ಶಾಲೆಯಲ್ಲಿ ಜರುಗಿದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಜೆ.ಎಂ.ಎಫ್.ಸಿ.ದಿವಾಣಿ ನ್ಯಾಯಾಧೀಶ ಬಸವರಾಜ ಉದ್ಘಾಟಿಸಿದರು. | Kannada Prabha

ಸಾರಾಂಶ

ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದ್ದು, ಮನೆಗಳ ಹಾಗೂ ಕಚೇರಿಗಳ ಸುತ್ತಮುತ್ತ ಸ್ವಚ್ಛವಾಗಿಟ್ಟುಕೊಳ್ಳುವುದರ ಜತೆಗೆ ಎಲ್ಲರೂ ಗಿಡಮರಗಳನ್ನು ನೆಟ್ಟು ಅವುಗಳನ್ನು ಉತ್ತಮವಾಗಿ ಬೆಳೆಸಲು ಪ್ರಯತ್ನಿಸಬೇಕು.

ಮುಂಡರಗಿ: 1973ರಲ್ಲಿ ವಿಶ್ವಸಂಸ್ಥೆಯು ಪರಿಸರ ದಿನಾಚರಣೆ ಮಾಡಲು ಪ್ರಾರಂಭಿಸಿದ್ದು, ಅಂದಿನಿಂದ ಇಂದಿನವರೆಗೂ ನಿರಂತರವಾಗಿ ಪರಿಸರ ದಿನವನ್ನು ಆಚರಿಸುತ್ತಾ ಬರಲಾಗುತ್ತಿದ್ದು, ಮುಂದಿನ ಪೀಳಿಗೆಗಾಗಿ ಉತ್ತಮ ಪರಿಸರ ಉಳಿಸಿಕೊಂಡು ಹೋಗುವುದು ಅವಶ್ಯವಾಗಿದೆ ಎಂದು ಮುಂಡರಗಿ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶ ಬಸವರಾಜ ತಿಳಿಸಿದರು.

ಪಟ್ಟಣದ ಶಾಸಕರ ಮಾದರಿ ಶಾಲೆಯಲ್ಲಿ ತಾಲೂಕು ಆಡಳಿತ, ಕಪ್ಪತ್ತಗುಡ್ಡ ಪರಿಸರ ಸಂರಕ್ಷಣಾ ವೇದಿಕೆ, ಪುರಸಭೆ, ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಜರುಗಿದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದ್ದು, ಮನೆಗಳ ಹಾಗೂ ಕಚೇರಿಗಳ ಸುತ್ತಮುತ್ತ ಸ್ವಚ್ಛವಾಗಿಟ್ಟುಕೊಳ್ಳುವುದರ ಜತೆಗೆ ಎಲ್ಲರೂ ಗಿಡಮರಗಳನ್ನು ನೆಟ್ಟು ಅವುಗಳನ್ನು ಉತ್ತಮವಾಗಿ ಬೆಳೆಸಲು ಪ್ರಯತ್ನಿಸಬೇಕು ಎಂದರು.

ಕಪ್ಪತ್ ಹಿಲ್ಸ್ ವಲಯ ಅರಣ್ಯಾಧಿಕಾರಿ ಮಂಜುನಾಥ ಮೇಗಳಮನಿ ಮಾತನಾಡಿ, ಜಿಲ್ಲೆಯು ಗಿಡಮರಗಳನ್ನು ಕಡಿಮೆ ಹೊಂದಿದ ಜಿಲ್ಲೆಯಾಗಿದೆ. ನಮ್ಮ ಜಿಲ್ಲೆ ಸುಮಾರು ಶೇ. 6- 7ರಷ್ಟು ಮಾತ್ರ ಗಿಡಮರಗಳನ್ನು ಹಾಗೂ ಅರಣ್ಯವನ್ನು ಹೊಂದಿದೆ. ಒಟ್ಟು ಭೌಗೋಳಿಕ ಕ್ಷೇತ್ರದ ಶೇ. 33ರಷ್ಟು ಅರಣ್ಯ ಇರಬೇಕು. ಹೀಗಾಗಿ ಸಾರ್ವಜನಿಕ ಸ್ಥಳ, ಸರ್ಕಾರಿ ಕಚೇರಿಗಳ ಆವರಣದಲ್ಲಿ ಗಿಡಮರಗಳನ್ನು ನೆಟ್ಟು ಬೆಳೆಸಲು ಮುಂದಾಗಬೇಕು ಎಂದರು.

ಸಾನ್ನಿಧ್ಯ ವಹಿಸಿದ್ದ ಡಾ. ಅನ್ನದಾನಶ್ವರ ಸ್ವಾಮೀಜಿ ಶುಕ್ರವಾರ ಮೌನ ಇರುವುದರಿಂದ ಸಿ.ಎಸ್. ಅರಸನಾಳ ಅವರು ಶ್ರೀಗಳ ಮಾತುಗಳನ್ನು ಓದಿ, ಪರಿಸರ ಸಮತೋಲನ ಕಾಯ್ದುಕೊಳ್ಳಬೇಕಾದರೆ 73,500 ಕೋಟಿ ಮರಗಳ ಕೊರತೆ ಇದೆ. ಹೀಗಾಗಿ ಪ್ರತಿಯೊಬ್ಬರೂ ಮರಗಳನ್ನು ಬೆಳೆಸಲು ಮುಂದಾಗಬೇಕು ಎಂದರು.

ಮಾಜಿ ಸಚಿವ ಎಸ್.ಎಸ್. ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿ, ಅಭಿವೃದ್ಧಿಯ ಹೆಸರಲ್ಲಿ ಪ್ರತಿವರ್ಷ ಶೇ. 3ರಿಂದ 4ರಷ್ಟು ಅರಣ್ಯ ನಾಶವಾಗಲಿದೆ. 50 ವರ್ಷದ ಹಿಂದೆ ಸರ್ಕಾರವೇ ಅನೇಕ ಅರಣ್ಯ ಭೂಮಿಯನ್ನು ಪಟ್ಟಾ ನೀಡಿತು. ಇದೀಗ 6 ಲಕ್ಷ ಹೆಕ್ಟೇರ್ ಅರಣ್ಯ ಭೂಮಿಯನ್ನು ಪಟ್ಟಾ ಮಾಡಲು ಸರ್ಕಾರ ಮುಂದಾಗಿರುವುದು ದುರ್ದೈವದ ಸಂಗತಿಯಾಗಿದೆ. ಕಪ್ಪತ್ತಗುಡ್ಡ ಉಳಿದಿದ್ದರೆ ಲಿಂ. ತೋಂಟದ‌ ಸಿದ್ದಲಿಂಗ ಸ್ವಾಮಿಜಿಯವರ ಪೋಸ್ಕೋ ವಿರೋಧಿ ಹಾಗೂ ಕಪ್ಪತ್ತಗುಡ್ಡ ಉಳಿಸಿ ಹೋರಾಟದ ಫಲವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಗಂಗಾಧರ ಅಣ್ಣಿಗೇರಿ, ಹಿರಿಯ ಆರೊಗ್ಯ ನಿರೀಕ್ಷಕ ಎಂ.ಎಸ್. ಮ್ಯಾಗೇರಿ, ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ವಿಶಾಲಾಕ್ಷಿ ಮಲ್ಲಾಪೂರ ಸೇರಿದಂತೆ ಅನೇಕರು ಮಾತನಾಡಿದರು. ಕಾರ್ಯಕ್ರಮದಲ್ಲಿ ಸಾಮಾಜಿಕ ವಲಯ ಅರಣ್ಯಾಧಿಕಾರಿ ಸುನಿತಾ ಬಿ.ಎಸ್., ಜಿಲ್ಲಾ ವನ್ಯಜೀವಿ ಪರಿಪಾಲಕ ಸಿ.ಎಸ್. ಅರಸನಾಳ, ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಪಿ. ಶೀರನಹಳ್ಳಿ, ಎಸ್.ಎಂ. ನಾಗರಹಳ್ಳಿ, ಶಾಲಾ ಮುಖ್ಯೋಪಾಧ್ಯಾಯ ಬಸವರಾಜ ಮೇಗಳಮನಿ, ಪ್ರಭಾವತಿ ಬೆಳವಣಕಿಮಠ, ಬಸವರಾಜ ನವಲಗುಂದ, ವಿ.ಎಸ್. ಘಟ್ಟಿ, ಎ.ಕೆ. ಮುಲ್ಲಾನವರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ದೇವಪ್ಪ ಇಟಗಿ ಸ್ವಾಗತಿಸಿ, ಗುಡದಪ್ಪ ಲಿಂಗಶೆಟ್ಟರ ನಿರೂಪಿಸಿದರು.₹5 ಸಾವಿರ ಬಹುಮಾನ ಘೋಷಣೆ

ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ತಾಲೂಕಿನ 20 ಶಾಲೆಗಳಿಗೆ 20 ಪಂಚವಟಿ ಸಸಿಗಳನ್ನು ವಿತರಿಸಿದ್ದು, ಅವುಗಳನ್ನು 5 ವರ್ಷ ಚೆನ್ನಾಗಿ ಬೆಳೆಸಿದ ಶಾಲೆಗಳಿಗೆ ₹5 ಸಾವಿರ ಬಹುಮಾನ ನೀಡುವುದಾಗಿ ಜಿಲ್ಲಾ ವನ್ಯಜೀವಿ ಪರಿಪಾಲಕ ಸಿ‌.ಎಸ್.ಅರಸನಾಳ ಘೋಷಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಮೀರ್‌ ಅಹ್ಮದ್ ಖಾನ್‌ ಗೆ ಸಚಿವ ಸ್ಥಾನ ನೀಡುವಂತೆ ಪ್ರತಿಭಟನೆ
ಕುಷ್ಟಗಿ ಹಸಿರು ನಗರವನ್ನಾಗಿ ಮಾಡಲು ಪಣ ತೊಡಿ