ಮೂಢನಂಬಿಕೆಗಳ ವಿರುದ್ಧವೂ ಹೋರಾಡಿದ ಮಹಿಳೆ ಸಾವಿತ್ರಿಬಾಯಿ

KannadaprabhaNewsNetwork | Published : Jan 12, 2024 1:45 AM

ಸಾವಿತ್ರಿ ಬಾಯಿ ಫುಲೆ ಸ್ತ್ರೀಯರಿಗೆ ಶಿಕ್ಷಣ ನೀಡಬೇಕೆಂಬ ಮಹತ್ವಾಕಾಂಕ್ಷೆ ಹೊತ್ತು ಸಮಾಜದ ಎಲ್ಲಾ ನಿಬಂಧನೆಗಳನ್ನು ಸಹಿಸಿಕೊಂಡು ಬ್ರಿಟೀಷರ ಅಧಿಪತ್ಯದ ಅವಧಿಯಲ್ಲಿಯೇ ಹೆಣ್ಣು ಮಕ್ಕಳಿಗಾಗಿ ಮಹಾರಾಷ್ಟ್ರದಲ್ಲಿ 18 ಶಾಲೆಗಳನ್ನು ಆರಂಭಿಸಿದ ದಿಟ್ಟ ಮಹಿಳೆ ಎಂದು ಯಡಹಳ್ಳಿಯ ಕರ್ನಾಟಕ ಪಬ್ಲಿಕ್ ಶಾಲೆಯ ಪ್ರಾಚಾರ್ಯರಾದ ಪ್ರೊ.ವಿಜಯಲಕ್ಷ್ಮೀ ಪಿ. ಪೆಟ್ಲೂರ ಹೇಳಿದರು.

ಕನ್ನಡಪ್ರಭ ವಾರ್ತೆ ಮುಧೋಳ

ಸಾವಿತ್ರಿ ಬಾಯಿ ಫುಲೆ ಸ್ತ್ರೀಯರಿಗೆ ಶಿಕ್ಷಣ ನೀಡಬೇಕೆಂಬ ಮಹತ್ವಾಕಾಂಕ್ಷೆ ಹೊತ್ತು ಸಮಾಜದ ಎಲ್ಲಾ ನಿಬಂಧನೆಗಳನ್ನು ಸಹಿಸಿಕೊಂಡು ಬ್ರಿಟೀಷರ ಅಧಿಪತ್ಯದ ಅವಧಿಯಲ್ಲಿಯೇ ಹೆಣ್ಣು ಮಕ್ಕಳಿಗಾಗಿ ಮಹಾರಾಷ್ಟ್ರದಲ್ಲಿ 18 ಶಾಲೆಗಳನ್ನು ಆರಂಭಿಸಿದ ದಿಟ್ಟ ಮಹಿಳೆ ಎಂದು ಯಡಹಳ್ಳಿಯ ಕರ್ನಾಟಕ ಪಬ್ಲಿಕ್ ಶಾಲೆಯ ಪ್ರಾಚಾರ್ಯರಾದ ಪ್ರೊ.ವಿಜಯಲಕ್ಷ್ಮೀ ಪಿ. ಪೆಟ್ಲೂರ ಹೇಳಿದರು.

ಸ್ಥಳೀಯ ದಾನಮ್ಮದೇವಿ ಮಹಿಳಾ ಮಹಾವಿದ್ಯಾಲಯದ ಸಮಾಜಶಾಸ್ತ್ರ, ಶಿಕ್ಷಣ ಶಾಸ್ತ್ರ, ಇತಿಹಾಸ ವಿಭಾಗ ಹಾಗೂ ಕನ್ನಡ ಸಂಘದ ಸಂಯುಕ್ತಾಶ್ರಯದಲ್ಲಿ ಸಾವಿತ್ರಿಬಾಯಿ ಫುಲೆಯವರ ಜನ್ಮದಿನದ ಅಂಗವಾಗಿ ಆಯೋಜಿಸಿದ್ದ ಫುಲೆ ಜೀವನಾಧಾರಿತ ಕಿರು ನಾಟಕ ಕಾರ್ಯಕ್ರಮದಲ್ಲಿ ಸಾವಿತ್ರಿ ಬಾಯಿ ಫುಲೆಯವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು.

ಬ್ರಿಟೀಷರಿಂದ ಮೊದಲ ಶಿಕ್ಷಕಿ ಎಂಬ ಬಿರುದು ಪಡೆದ ಸಾವಿತ್ರಿ ಬಾಯಿ ಫುಲೆಯವರು ಕೇವಲ ಶಿಕ್ಷಕಿಯಾಗಿರದೆ ಪತಿಯ ಜೊತೆ ಸೇರಿ ಸಮಾಜದ ಮೂಢನಂಬಿಕೆಗಳ ವಿರುದ್ಧ ಸಮರ ಸಾರಿದವರು. ಸಮಾಜ ಸೇವೆಯಲ್ಲಿ ಮುಳುಗಿ ಸಾವಿನ ಮಡಿಲ ಸೇರಿದವಳು. ಇವರ ಆದರ್ಶಗಳು ನಮ್ಮೆಲ್ಲರ ಬದುಕಿಗೆ ಸ್ಫೂರ್ತಿ ಎಂದು ಹೇಳಿದರು.

ಪ್ರಾಚಾರ್ಯ ಪ್ರೊ.ಎಂ.ಎಂ. ಹಿರೇಮಠ ಮಾತನಾಡಿ, ಹೆಣ್ಣು ಸರ್ವಗುಣಗಳ ಸಾಕಾರ ಮೂರ್ತಿ, ಹೆಣ್ಣು ಅಶಕ್ತಳಲ್ಲ. ಅವಳು ಸಕಲವನ್ನು ಸಾಧಿಸಬಲ್ಲ ಸಾಮರ್ಥ್ಯ ವಿರುವ ಸಶಕ್ತ ಮಹಿಳೆ. ಹೆಣ್ಣಿನಲ್ಲಿ ಪುರಷನಷ್ಟೆ ಸರಿಸಮಾನ ಸಾಮರ್ಥ್ಯವಿದೆ. ಅವಳು ಧೈರ್ಯವಾಗಿ ಸಮಾಜದ ಪ್ರಮುಖ ಕ್ಷೇತ್ರಗಳಲ್ಲಿ ತನ್ನ ಸಾಮರ್ಥ್ಯವನ್ನು ಅಭಿವ್ಯಕ್ತಪಡಿಸಬೇಕು ಎಂದರು.

ವಿದ್ಯಾರ್ಥಿನಿಯರಾದ ಭವಾನಿ ಯಡಹಳ್ಳಿ, ದಾನೇಶ್ವರಿ ಪಾಟೀಲ, ಐಶ್ವರ್ಯ ಪೂಜಾರಿ, ಕೀರ್ತಿ ಕುಲ್ಲೋಳ್ಳಿ, ವರ್ಷಾ ಬಸ್ತವಾಡ, ಭೂಮಿಕಾ ಮೆಟಗುಡ್ಡ, ಅಕ್ಷತಾ ದಾಸರ ಮುಂತಾದ ವಿದ್ಯಾರ್ಥಿನಿಯರು ಸಾವಿತ್ರಿ ಬಾಯಿ ಪುಲೆ ಜೀವನ ಆಧಾರಿತ ಕಿರು ನಾಟಕ ಪ್ರದರ್ಶಿಸಿದರು.

ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ ಎನ್.ಎನ್.ಬಾರಕೇರ ಅವರು ಸಾವಿತ್ರಿ ಬಾಯಿಪುಲೆ ಅವರ ಜೀವನಾಧಾರಿತ ಅಕ್ಷರದವ್ವ ಸ್ವರಚಿತ ಕವನ ವಾಚಿಸಿದರು. ಕೀರ್ತಿ ಉಪ್ಪಾರ ಸ್ವಾಗತಿಸಿದರು, ವರ್ಷಾ ಬಸ್ತವಾಡ ಪರಿಚಯಿಸಿದರು, ಸವಿತಾ ಗುರಕೇರ ಸತ್ಕರಿಸಿದಳು. ಭವಾನಿ ಯಡಹಳ್ಳಿ ನಿರೂಪಿಸಿದರು. ಭಾರತಿ ಒಂಟಗೋಡಿ ವಂದಿಸಿದರು.