ಬ್ಯಾಡಗಿ: ಭಾರತೀಯ ಸಂಸ್ಕತಿಯಲ್ಲಿ ವೈವಾಹಿಕ ಜೀವನ ಸೇರಿದಂತೆ ಉಡುಗೆ ತೊಡುಗೆ ಸಂಸ್ಕಾರ ಎಲ್ಲವೂ ವೈಜ್ಞಾನಿಕ ನೆಲೆಗಟ್ಟಿನ ಮೇಲೆ ನಿರ್ಮಿತವಾಗಿದೆ. ಯುವಕರು ಯಾವುದೇ ಕಾರಣಕ್ಕೂ ಪಾಶ್ಚಾತ್ಯ ಸಂಸ್ಕೃತಿಯತ್ತ ಮುಖ ಮಾಡದಂತೆ ಮಾಜಿ ಶಾಸಕ, ಬಿಇಎಸ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಸುರೇಶಗೌಡ ಪಾಟೀಲ ಸಲಹೆ ನೀಡಿದರು.ಪಟ್ಟಣದ ಬಿಇಎಸ್ ಶಿಕ್ಷಣ ಸಂಸ್ಥೆಯ ವರ್ತಕರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಆಶ್ರಯದಲ್ಲಿ ಏರ್ಪಡಿಸಿದ್ದ ಸಾಂಪ್ರದಾಯಿಕ ದಿನಾಚರಣೆ ಕಾರ್ಯಕ್ರಮಕ್ಕೆ ಡೋಲು ಬಡಿಯುವ ಮೂಲಕ ಚಾಲನೆ ನೀಡಿ ಮಾತನಾಡಿದರು. ಭಾರತೀಯ ಸಂಸ್ಕೃತಿಗೆ ಸಾವಿರಾರು ವರ್ಷದ ಇತಿಹಾಸವಿದೆ. ವೇದಗಳ ಕಾಲದಿಂದಲೂ ಹಿಡಿದು ಹರಪ್ಪ ಮೆಹೆಂಜೋದಾರ ನಗರಗಳ ಉತ್ಖನನದವರೆಗೂ ನಮ್ಮ ಸಂಸ್ಕೃತಿ, ಸಂಪ್ರದಾಯಗಳು ಇಂದಿಗೂ ಮುಂದುವರಿದುಕೊಂಡು ಬಂದಿದ್ದು, ತನ್ಮೂಲಕ ವಿಶ್ವದ ಬಹುತೇಕ ಸಂಸ್ಕೃತಿಗಳನ್ನು ಮೆಚ್ಚಿಸುವಂತಿದೆ ಎಂದರು. ಕೊರೋನಾ ಮೆಟ್ಟಿ ನಿಂತ ಭಾರತ: ಸಂಸ್ಥೆಯ ನಿರ್ದೇಶಕ ಡಾ. ಎಸ್.ಎನ್. ನಿಡಗುಂದಿ ಮಾತನಾಡಿ, ನಮ್ಮ ಜನಪದರು ರೂಢಿಸಿಕೊಟ್ಟಿರುವ ಸಾಂಪ್ರದಾಯಿಕ ಸಾವಯವ ಕೃಷಿ ಪದ್ಧತಿಯಲ್ಲಿ ಬೆಳೆದ ಆಹಾರವನ್ನು ಸೇವಿಸಿದ ನಾವು ಕೊರೋನಾದಂತಹ ಮಾರಣಾಂತಿಕ ರೋಗವನ್ನು ನಿಗ್ರಹಿಸಲು ಸಾಧ್ಯವಾಯಿತು. ಇದೇ ವೇಳೆ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಸಾವು- ನೋವಿನ ಸಂಖ್ಯೆ ಹೆಚ್ಚಾಗಿತ್ತು. ಇದಕ್ಕೆ ಪ್ರಮುಖ ಕಾರಣ ಆಹಾರ ಪದ್ಧತಿಯಾಗಿದೆ ಎಂದರು.
ಪ್ರತಿ ಕ್ಷಣದಲ್ಲಿ ಜನಪದ: ಪ್ರಾಚಾರ್ಯ ಡಾ. ಎಸ್.ಜಿ. ವೈದ್ಯ ಮಾತನಾಡಿ, ಬೆಳಗ್ಗೆ ಮನೆಯ ಕಸ ಗುಡಿಸಿ ಸಗಣಿಯಿಂದ ಅಂಗಳವನ್ನು ಸಾರಿಸುವುದರಿಂದ ಹಿಡಿದು ಆರಂಭವಾಗುವ ನಮ್ಮ ಜನಪದ ಶೈಲಿಯು ರಂಗೋಲಿ ಬಿಡಿಸುವುದು, ಬೀಸಿಕಲ್ಲು ಬೀಸುವುದು, ಒಣಕೆ ಕುಟ್ಟುವುದು, ರುಬ್ಬುವ ಕಲ್ಲಿನಿಂದ ತಿರುವುದು, ಬಾವಿ ನೀರನ್ನು ಸೇದುವುದು, ರೊಟ್ಟಿ ಮಾಡುವುದು ಎಲ್ಲದರಲ್ಲಿಯೂ ನಮಗೆ ದೈಹಿಕವಾಗಿ ವ್ಯಾಯಾಮ ಜತೆಗೆ ಆರೋಗ್ಯವನ್ನು ಕಲ್ಪಿಸಲಿದೆ ಎಂದರು.ಜನಮನ ಸೆಳೆದ ಕಾರ್ಯಕ್ರಮ: ಜಾನಪದ ಸಂಭ್ರಮ ಕಾರ್ಯಕ್ರಮದಲ್ಲಿ ಕಾಲೇಜಿನ ವಿದ್ಯಾರ್ಥಿಗಳು ನಾಡಿನ ಸಂಸ್ಕೃತಿ, ಸಂಪ್ರದಾಯದ ಉಡುಗೆಗಳಾದ ಇಳಕಲ್ ಸೀರೆ, ಪಂಚೆ ಶರ್ಟ್ ಧರಿಸಿದ್ದು, ಉಪನ್ಯಾಸಕರು ಸಹ ಬಿಳಿ ಬಣ್ಣದ ಪಂಜೆ ಶರ್ಟ್, ದೋತಿ, ಟೋಪಿ ಹಾಗೂ ಉಪನ್ಯಾಸಕಿಯರು ಸೀರೆ ಆಭರಣಗಳನ್ನು ಧರಿಸಿದ್ದು ವಿಶೇಷವಾಗಿತ್ತು. ಇದಕ್ಕೂ ಮುನ್ನ ಎಲ್ಲ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕ ವೃಂದ ಜಾನುವಾರುಗಳು, ಎತ್ತಿನ ಚಕ್ಕಡಿ, ಟ್ರ್ಯಾಕ್ಟರ್ನೊಂದಿಗೆ ಪಟ್ಟಣದ ಸಿದ್ದೇಶ್ವರ ದೇವಸ್ಥಾನದಿಂದ ಮೆರವಣಿಗೆ ಮಾಡುವ ಮೂಲಕ ಜನಮನ ಸೆಳೆದರು.ಕಾಲೇಜು ಆವರಣದಲ್ಲಿ ವಿದ್ಯಾರ್ಥಿಗಳು ಜೋಳದ ರಾಶಿ, ವಿವಿಧ ಕಾಳುಗಳಿಂದ ಅಲಂಕಾರ, ಒನಕೆ, ಬೀಸುವ ಕಲ್ಲು, ಒಳ್ಳು, ಮರ ಇತ್ಯಾದಿ ವಸ್ತುಗಳ ಪ್ರದರ್ಶನ ಮಾಡಿದರು. ಕಾರ್ಯಕ್ರಮದಲ್ಲಿ ಜಾನಪದ ನೃತ್ಯ ಹಾಡುಗಳು ಎಲ್ಲರ ಗಮನ ಸೆಳೆದವು.ಈ ಸಂದರ್ಭದಲ್ಲಿ ಉಪನ್ಯಾಸಕರಾದ ಡಾ. ಎನ್.ಎಸ್. ಪ್ರಶಾಂತ, ಡಾ. ಸುರೇಶಕುಮಾರ ಪಾಂಗಿ, ಡಾ. ಪ್ರಭುಲಿಂಗ ದೊಡ್ಮನಿ, ಶಿವನಗೌಡ ಪಾಟೀಲ, ಶಶಿಧರ ಮಾಗೋಡ, ಪ್ರಶಾಂತ ಜಂಗಳೇರ, ಚನ್ನಬಸಪ್ಪ ಗೂರಣ್ಣವರ, ನಿಂಗಪ್ಪ ಕುಡುಪಲಿ, ಕಿರಣ ಡಂಬರ ಮತ್ತೂರ, ಕುಮಾರ ಮಾಳಗಿ, ಅಂಬಿಕಾ ನವಲೆ, ಜ್ಯೋತಿ ಹಿರೇಮಠ, ನಿವೇದಿತಾ ವಾಲಿಶೆಟ್ಟರ, ಶೃತಿ ಹುಗ್ಗಿ, ಸಿಬ್ಬಂದಿಗಳಾದ ಸಂತೋಷ ಉದ್ಯೋಗಣ್ಣನವರ, ಮಲ್ಲಿಕಾರ್ಜುನ ಕೋಡಿಹಳ್ಳಿ, ಮಹಾಂತೇಶ ಕರಗಲ್ಲ, ಚನ್ನಪ್ಪ ದೊಡ್ಮನಿ, ಬಸಮ್ಮ ನಾಯ್ಕರ್, ಮಂಜು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.