- ಲಿಂಗದಹಳ್ಳಿಯಲ್ಲಿ ಮಹಿಳಾ ಘಟಕದ ಪದವಿ ಪ್ರಧಾನ ಸಮಾರಂಭ
ಜಾನಪದ ಸಾಹಿತ್ಯಕ್ಕೆ ಯಾವುದೇ ಇತಿಮಿತಿ ಹಾಗೂ ಚೌಕಟ್ಟಿಲ್ಲ. ಜಾನಪದ ಒಂದು ಜಾತಿಗೆ, ಒಂದು ಧರ್ಮಕ್ಕೆ ಸೀಮಿತವೂಅಲ್ಲ. ಜನಪದ ಸಾಹಿತ್ಯ ಧರ್ಮಾತೀತ ಹಾಗೂ ಜಾತ್ಯತೀತವಾದದ್ದು ಎಂದು ಕನ್ನಡ ಜಾನಪದ ಪರಿಷತ್ ರಾಜ್ಯ ಘಟಕದ ಅಧ್ಯಕ್ಷ ಡಾ.ಜಾನಪದ ಎಸ್. ಬಾಲಾಜಿ ಹೇಳಿದರು.ತರೀಕೆರೆ ತಾಲೂಕಿನ ಲಿಂಗದಹಳ್ಳಿ ಶ್ರೀ ದೇವಾಂಗ ಸಮುದಾಯ ಭವನದಲ್ಲಿ ನಡೆದ ಲಿಂಗದಹಳ್ಳಿ ಹೋಬಳಿ ಕನ್ನಡ ಜಾನಪದ ಪರಿಷತ್ ಮಹಿಳಾ ಘಟಕದ ಪದವಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಜಾನಪದಕ್ಕೆ ಬಹು ದೊಡ್ಡ ಸಂಸ್ಕೃತಿ, ಸಂಸ್ಕಾರ ಇದೆ. ಮನೆಯಲ್ಲಿ ಮಕ್ಕಳಿಗೆ ಶಿಶುಪ್ರಾಸ ಗೀತೆಗಳು ಹಾಗೂ ಜನಪದ ತಿಂಡಿ ತಿನಿಸುಗಳನ್ನು ತಿನಿಸುವ ಪ್ರಯತ್ನ ತಮ್ಮದಾಗಲಿ ವಿದೇಶ ಆಹಾರ ನಿಲ್ಲಿಸಬೇಕೆಂದು ಸಲಹೆ ನೀಡಿದ ಅವರು ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಸೋಬಾನೇ, ರಾಗಿ ಬೀಸುವ ಪದಗಳು, ಗೀಗಿ ಪದಗಳು, ಜಾನಪದ ಬಗ್ಗೆ ಆಸಕ್ತಿ ಮೂಡಿಸುವ ಕಾರ್ಯಕ್ರಮ ಅಳವಡಿಸಬೇಕಾಗಿದೆ ಎಂದು ತಿಳಿಸಿದರು.
ಚಿಕ್ಕಮಗಳೂರು ಕನ್ನಡ ಜಾನಪದ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಎಂ. ಎಸ್. ವಿಶಾಲಾಕ್ಷಮ್ಮ ಮಾತನಾಡಿ, ಲಿಂಗದಹಳ್ಳಿ ಹೋಬಳಿ ಮಟ್ಟದ ಮಹಿಳಾ ಘಟಕದ ಪದಗ್ರಹಣ ಸಮಾರಂಭ ನಡೆಯುತ್ತಿರುವುದು ನನಗೆ ತುಂಬಾ ಖುಷಿಯಾಗಿದೆ. ಈ ಕಾರ್ಯಕ್ರಮದಲ್ಲಿ ಜಾನಪದ ಸಾಹಿತ್ಯಕ್ಕೆ ಸಂಬಂಧಿಸಿದ ವಸ್ತುಗಳನ್ನು ಇಟ್ಟಿರುವುದನ್ನು ನೋಡಿದರೆ ಲಿಂಗದಹಳ್ಳಿ ಹೋಬಳಿ ಮಹಿಳಾ ಘಟಕದ ಸದಸ್ಯರು ಜಾನಪದ ಸೊಗಡು ಪರಿಚಯಿಸುವ ಮೂಲಕ ಕಾರ್ಯಕ್ರಮಕ್ಕೆ ಕಳೆ ತಂದಿದ್ದಾರೆ ಎಂದು ಹೇಳಿದರು.ಮಹಿಳಾ ಘಟಕದ ನೂತನ ಅಧ್ಯಕ್ಷೆ ಆರ್. ಆರ್. ಜಯಮ್ಮನಾಗರಾಜ್ ಅಧಿಕಾರ ಸ್ವೀಕರಿಸಿ ಮಾತನಾಡಿ ತಮ್ಮನ್ನು ಲಿಂಗದಹಳ್ಳಿ ಹೋಬಳಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದಕ್ಕಾಗಿ ಎಲ್ಲರಿಗೂ ಹೃದಯಪೂರ್ವಕ ಧನ್ಯವಾದ ಅರ್ಪಿಸುವುದಾಗಿ ಹೇಳಿದರು.ಜಿ. ಎಚ್. ಶ್ರೀನಿವಾಸ್ ಜನಹಿತ ಸೇವಾ ಟ್ರಸ್ಟ್ ಅಧ್ಯಕ್ಷೆ ವಾಣಿ ಶ್ರೀನಿವಾಸ್ ಮಾತನಾಡಿ ಹೋಬಳಿ ಮಟ್ಟದ ಪದವಿ ಪ್ರದಾನ ಸಮಾರಂಭದಲ್ಲಿ ಜಾನಪದದ ಸಾರವನ್ನು ಸಾರುವ ರಾಗಿ ರಾಶಿ, ಮಣ್ಣಿನಿಂದ ಮಾಡಿರುವ ಮಡಕೆ ಕಲಾಕೃತಿಗಳು, ಎತ್ತಿನ ಗಾಡಿ, ಒನಕೆ ಮುಂತಾದ ವಸ್ತುಗಳನ್ನು ಪ್ರದರ್ಶಿಸಿರುವುದು ಮಹಿಳೆಯರಿಗೆ ಜಾನಪದದ ಬಗ್ಗೆ ಇರುವ ಆಸಕ್ತಿ ತೋರಿಸುತ್ತಿದೆ. ಇದನ್ನು ಮುಂದುವರಿಸಿಕೊಂಡು ಹೋಗಬೇಕೆಂದು ಹೇಳಿದರು, ಲಿಂಗದಹಳ್ಳಿ ಹೋಬಳಿ ಮಟ್ಟದ ಸಮ್ಮೇಳನ ಹಾಗೂ ತರೀಕೆರೆಯಲ್ಲಿ ನಡೆಯುವ ರಾಜ್ಯಮಟ್ಟದ ಸಮ್ಮೇಳನಕ್ಕೆ ಸರ್ವರ ಸಹಕಾರ ಅಗತ್ಯ. ಶಾಸಕರು ಮತ್ತು ತಾವು ನಿಮ್ಮ ಜೊತೆ ಇರುತ್ತೇನೆ ಎಂದು ತಿಳಿಸಿದರು. ಕಸಾಪ ಮಹಿಳಾ ಘಟಕ ತರೀಕೆರೆ ಅಧ್ಯಕ್ಷೆ ಲೀಲಾ ಸೋಮಶೇಖರಯ್ಯ ಪ್ರಾಸ್ತಾವಿಕವಾಗಿ ಮಾತನಾಡಿ ಜಾನಪದ ಪರಂಪರೆ ಸಾವಿರಾರು ವರ್ಷಗಳ ಇತಿಹಾಸ ಹೊಂದಿದೆ. ಇಂದು ನಮ್ಮ ಪೂರ್ವಿಕರಿಂದ ಪೀಳಿಗೆಯಿಂದ ಪೀಳಿಗೆಗೆ ಮುಂದುವರಿಯುತ್ತಾ ಬಂದಿದೆ. ಇಂತಹ ಪ್ರಾಚೀನ ಕಲಾ ಪರಂಪರೆಯಾದ ಜಾನಪದವನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಹೊಣೆ ಎಂದು ಹೇಳಿದರು. ಗ್ರಾಪಂ ಅಧ್ಯಕ್ಷೆ ರತ್ತಮ್ಮ, ಜಿಲ್ಲಾ ಕಜಾಪ ಬ್ಯಾಟರಾಯನಪುರ ಅಧ್ಯಕ್ಷ ಮಹೇಂದ್ರ ಜಾದವ್,ಸಿಡಿಪಿಒ ಚರಣ್ ರಾಜ್, ಮಹಿಳಾ ಸಮಾಜ ಅಧ್ಯಕ್ಷೆ ದ್ರಾಕ್ಷಾಯಣಿ, ದೇವಾಂಗ ಸಮಾಜದ ಅಧ್ಯಕ್ಷ ನಾಗರಾಜ್, ಮಹಿಳಾ ಸಮಾಜದ ಮಾಜಿ ಅಧ್ಯಕ್ಷೆ ಶಾರದಮ್ಮ, ಲಿಂಗದಹಳ್ಳಿ ಹೋಬಳಿ ಪದಾಧಿಕಾರಿಗಳು ಹಾಗೂ ಸದಸ್ಯರು, ಪ್ರಹರ್ಷಿತ ವಿದ್ಯಾ ಸಂಸ್ಥೆ ಅಡಳಿತಾಧಿಕಾರಿ ಅನೂಪ್, ಶಂಕರಮ್ಮ ಶೇಖರಪ್ಪ, ರೇಣುಕಾ ನೀಲಕಂಠಪ್ಪ ಶೈಲಜಾ ಭಾಗವಹಿಸಿದ್ದರು.11ಕೆಟಿಆರ್.ಕೆ.1ಃ
ತರೀಕೆರೆ ಸಮೀಪದ ಲಿಂಗಗದಹಳ್ಳಿಯಲ್ಲಿ ನಡೆದ ಹೋಬಳಿ ಕನ್ನಡ ಜಾನಪದ ಪರಿಷತ್ ಮಹಿಳಾ ಘಟಕದ ಪದವಿ ಪ್ರದಾನ ಕಾರ್ಯಕ್ರಮವನ್ನು ಕಜಾಪ ರಾಜ್ಯ ಘಟಕದ ಅಧ್ಯಕ್ಷ ಡಾ.ಜಾನಪದ ಎಸ್. ಬಾಲಾಜಿ ಉದ್ಘಾಟಿಸಿದರು. ಜಿಲ್ಲಾ ಕನ್ನಡ ಜಾನಪದ ಮಹಿಳಾ ಘಟಕದ ಅಧ್ಯಕ್ಷೆ ಎಂ. ಎಸ್. ವಿಶಾಲಾಕ್ಷಮ್ಮ, ತರೀಕೆರೆ ಅಧ್ಯಕ್ಷೆ ಲೀಲಾಸೋಮಶೇಖರಯ್ಯ ಮತ್ತಿತರರು ಇದ್ದರು.