ಗದಗ: ನಿಸ್ವಾರ್ಥ ಕಾಯಕವೇ ಶರಣತ್ವದ ದಾರಿಯಾಗಿದೆ ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ ತಿಳಿಸಿದರು.
ನಿಸ್ವಾರ್ಥ ಕಾಯಕ ಮಾಡುವವರೇ ನಿಜವಾದ ಶರಣರು ಎಂದು ಹೇಳಿದ ಅವರು, ನಾನು ಎಂಬ ಅಹಂಕಾರದಿಂದ ಹೊರಬಂದಾಗಲೇ ಶರಣತ್ವ ಸಾಧ್ಯ. ಶರಣರು ತೋರಿಸಿದ ಸಾಧನೆಯ ದಾರಿಯಲ್ಲಿ ಸಾಗುವುದು ನಮ್ಮೆಲ್ಲರ ಕರ್ತವ್ಯ ಎಂದರು.
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರ್ ಸಾಬ್ ಬಬರ್ಚಿ ಕಾಯಕ ಶರಣರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಸಲ್ಲಿಸಿ ಜಯಂತಿಗೆ ಚಾಲನೆ ನೀಡಿದರು.ಶರಣತತ್ವ ಚಿಂತಕ ಅಶೋಕ ಬರಗುಂಡಿ ಉಪನ್ಯಾಸ ನೀಡಿ, ಕಾಯಕವನ್ನು ಕೇವಲ ದುಡಿಮೆಯ ಮಟ್ಟಕ್ಕೆ ಸೀಮಿತಗೊಳಿಸಬಾರದು. ಅದು ಆಧ್ಯಾತ್ಮಿಕ ಸಾಧನೆಯ ದಾರಿಯೆಂದು ಹೇಳಿದರು. 12ನೇ ಶತಮಾನದಲ್ಲೇ ಶರಣರು ವೃತ್ತಿಗೆ ಗೌರವ ನೀಡುವ ಮೂಲಕ ಶ್ರೇಣಿಕೃತ ವ್ಯವಸ್ಥೆಗೆ ಸವಾಲು ಹಾಕಿದರು. ದುಡಿಯುವವನೇ ದೇವರು ಎಂಬ ತತ್ವವನ್ನು ಅವರು ಜೀವನದ ಮೂಲಕ ಸಾರಿದರು. ಶರಣರು ಜಾತಿ, ಧರ್ಮಗಳ ಗಡಿಗಳನ್ನು ಮೀರಿ ಚೈತನ್ಯವೇ ಮೂಲಸ್ವರೂಪ ಎಂದು ಸಾರಿದ್ದು, ಅವರ ತತ್ವ ಇಂದಿಗೂ ಸಮಾಜಕ್ಕೆ ದಿಕ್ಕು ತೋರುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹನೀಯರನ್ನು ಜಿಲ್ಲಾಡಳಿತ ವತಿಯಿಂದ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಡಾ. ಕೆ.ಆರ್. ದುರಗೇಶ್, ಸಹಾಯಕ ಆಯುಕ್ತ ಗಂಗಪ್ಪ, ಡಿವೈಎಸ್ಪಿ ಮುರ್ತುಜಾ ಖಾದ್ರಿ, ತಹಸೀಲ್ದಾರ್ ಶ್ರೀನಿವಾಸ್ ಮೂರ್ತಿ, ಜನಪದ ಅಕಾಡೆಮಿ ಸದಸ್ಯ ಶಂಕ್ರಣ್ಣ ಸಂಕಣ್ಣನವರ, ಎಸ್.ಎನ್. ಬಳ್ಳಾರಿ, ಶರೀಫ್ ಬಿಳಿಯಲಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಸವರಾಜ ಬಳ್ಳಾರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.