ಕಾಳುಕಡಿ ಮಾರುಕಟ್ಟೆಯಿಂದ ಸ್ಥಳಾಂತರ
ನಾರಾಯಣ ಹೆಗಡೆ
ಕನ್ನಡಪ್ರಭ ವಾರ್ತೆ ಹಾವೇರಿಇದುವರೆಗೆ ರಸ್ತೆಯಲ್ಲೇ ನಡೆಯುತ್ತಿದ್ದ ಹೋಲ್ಸೇಲ್ ತರಕಾರಿ ವ್ಯಾಪಾರ ಇನ್ಮುಂದೆ ವ್ಯವಸ್ಥಿತ ರೀತಿಯಲ್ಲಿ ಆಗಲಿದೆ. ಇಲ್ಲಿಯ ಜಾನುವಾರು ಮಾರುಕಟ್ಟೆಯ ಆವರಣದಲ್ಲಿ ಪ್ರತ್ಯೇಕ ತರಕಾರಿ ಮಾರುಕಟ್ಟೆ ಆರಂಭಿಸಲಾಗಿದ್ದು, ವ್ಯಾಪಾರಿಗಳಿಗೆ ಮತ್ತು ರೈತರಿಗೆ ಅನುಕೂಲ ಕಲ್ಪಿಸಿದಂತಾಗಿದೆ.
ಬಾಡಿಗೆ ಆಧಾರದಲ್ಲಿ ಅಂಗಡಿ:
ಕಾಳುಕಡಿ ಮಾರುಕಟ್ಟೆ ಆವರಣದ ರಸ್ತೆ ಮೇಲೆಯೇ ಹಲವು ವರ್ಷಗಳಿಂದ ಸಗಟು ತರಕಾರಿ ವ್ಯಾಪಾರ ನಡೆಯುತ್ತಿತ್ತು. ಇದರಿಂದ ಕಾಳುಕಡಿ ವ್ಯಾಪಾರಸ್ಥರಿಗೆ, ಅಲ್ಲಿಗೆ ಬರುವ ವಾಹನಗಳಿಗೆ ತೊಂದರೆಯಾಗುತ್ತಿತ್ತು. ರಸ್ತೆ ಮೇಲೆಯೇ ಸೊಪ್ಪು, ತರಕಾರಿ ಚೀಲಗಳನ್ನು ರಾಶಿ ಹಾಕಿ ವ್ಯಾಪಾರ ಮಾಡಲಾಗುತ್ತಿತ್ತು. ಬೆಳಗ್ಗೆ 7 ಗಂಟೆಯಿಂದ ಶುರುವಾಗಿ 10 ಗಂಟೆವರೆಗೂ ಈ ಸ್ಥಳದಲ್ಲಿ ವ್ಯಾಪಾರ ನಡೆಯುತ್ತಿತ್ತು. ಆದರೆ, ಅಲ್ಲಿ ಬೆರಳೆಣಿಕೆಯಷ್ಟು ವ್ಯಾಪಾರಸ್ಥರಿಗೆ ಮಾತ್ರ ಪುಟ್ಟ ಶೆಡ್ಗಳಿದ್ದವು. ಇನ್ನುಳಿದ ವ್ಯಾಪಾರಿಗಳಿಗೆ ಅಂಗಡಿ ಇಲ್ಲದ್ದರಿಂದ ಸಮಸ್ಯೆ ಎದುರಿಸುತ್ತಿದ್ದರು. ಈಗ ಪ್ರತ್ಯೇಕ ಅಂಗಡಿ ಸಿಕ್ಕಿರುವುದರಿಂದ ವ್ಯಾಪಾರಸ್ಥರು ಸಂತಸಗೊಂಡಿದ್ದಾರೆ. ಆದರೆ, ಗುರುವಾರ ದನದ ಸಂತೆ ದಿನ ಮಾತ್ರ ಸಮಸ್ಯೆಯಾಗುತ್ತಿದೆ. ಈರುಳ್ಳಿ, ಆಲುಗಡ್ಡೆ ಇತ್ಯಾದಿ ತರಕಾರಿಗಳನ್ನು ಮಳೆ ಬಿಸಿಲಿನಿಂದ ರಕ್ಷಿಸಿ ದಾಸ್ತಾನು ಮಾಡಿಕೊಳ್ಳಲು ಅನುಕೂಲವಾಗಿದೆ. ಈಗ ಅಂಗಡಿ ಪಡೆದ ಬಹುತೇಕರು ಮುಂದೆ ಶೀಟ್ ಇಳಿಬಿಟ್ಟು ವಿಸ್ತೀರ್ಣ ಮಾಡಿಕೊಂಡಿದ್ದಾರೆ. ಅಂಗಡಿ ಹೊರಗೆ ತರಕಾರಿ ರಾಶಿ ಹಾಕಿಟ್ಟು ವ್ಯಾಪಾರ ಮಾಡುತ್ತಿದ್ದಾರೆ. ಬಹಳ ವರ್ಷಗಳಿಂದ ಇದ್ದ ಬೇಡಿಕೆ ಈಡೇರಿದಂತಾಗಿದೆ. ಇದೇ ರೀತಿ ಜಿಲ್ಲಾಸ್ಪತ್ರೆ ಎದುರು ರಸ್ತೆಯಲ್ಲೇ ನಡೆಯುವ ಹೂವಿನ ವ್ಯಾಪಾರವನ್ನೂ ಬೇರೆಡೆ ಸ್ಥಳಾಂತರಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.
ಹಾವೇರಿಯ ಹೋಲ್ಸೇಲ್ ತರಕಾರಿ ಮಾರುಕಟ್ಟೆ ಸುತ್ತಮುತ್ತಲಿನ ಭಾಗದಲ್ಲಿ ಫೇಮಸ್ ಎನಿಸಿದೆ. ಹತ್ತಾರು ಹಳ್ಳಿಗಳಿಂದ ರೈತರು ತಾವು ಬೆಳೆದ ಸೊಪ್ಪು, ತರಕಾರಿಗಳನ್ನು ಇಲ್ಲಿಗೆ ತಂದು ಮಾರುತ್ತಾರೆ. ಮದುವೆ, ಧಾರ್ಮಿಕ ಕಾರ್ಯಕ್ರಮ ಏನೇ ಇದ್ದರೂ ನೇರವಾಗಿ ಇಲ್ಲಿಗೆ ಬಂದು ಕಡಿಮೆ ದರದಲ್ಲಿ ತರಕಾರಿ ಖರೀದಿ ಮಾಡುತ್ತಾರೆ. ತಳ್ಳು ಗಾಡಿಗಳಲ್ಲಿ ತರಕಾರಿ ಮಾರುವವರು, ಹೋಟೆಲ್ನವರು ಕೂಡ ಇಲ್ಲಿಯೇ ತರಕಾರಿ ಖರೀದಿ ಮಾಡುತ್ತಾರೆ. ಭಾನುವಾರ ಹೊರತುಪಡಿಸಿ ಉಳಿದ ದಿನಗಳಂದು ನಸುಕಿನಲ್ಲೇ ಶುರುವಾಗುವ ತರಕಾರಿ ವ್ಯಾಪಾರಕ್ಕೆ ಇನ್ನು ಮತ್ತಷ್ಟು ಮೆರಗು ಸಿಕ್ಕಂತಾಗಿದೆ.ಎಪಿಎಂಸಿ ಕಾಳುಕಡಿ ಮಾರುಕಟ್ಟೆಯಲ್ಲೇ ಇಷ್ಟು ವರ್ಷ ಹೋಲ್ಸೇಲ್ ತರಕಾರಿ ವ್ಯಾಪಾರ ನಡೆಯುತ್ತಿತ್ತು. ಇದರಿಂದ ಕಾಳುಕಡಿ ವ್ಯಾಪಾರಸ್ಥರಿಗೆ ಮತ್ತು ತರಕಾರಿ ವ್ಯಾಪಾರಿಗಳಿಗೆ ತೊಂದರೆಯಾಗುತ್ತಿತ್ತು. ಜಾನುವಾರು ಮಾರುಕಟ್ಟೆ ಪ್ರಾಂಗಣದ ಒಂದು ಬದಿಯಲ್ಲಿ ತರಕಾರಿ ವ್ಯಾಪಾರಕ್ಕೆಂದೇ ಕಟ್ಟಿದ್ದ ಅಂಗಡಿಗಳನ್ನು ಈಗ ತರಕಾರಿ ವ್ಯಾಪಾರಿಗಳಿಗೆ ತಿಂಗಳ ಬಾಡಿಗೆ ಆಧಾರದಲ್ಲಿ ನೀಡಲಾಗಿದೆ. ಅಲ್ಲಿ ವ್ಯವಸ್ಥಿತ ರೀತಿಯಲ್ಲಿ ತರಕಾರಿ ವ್ಯಾಪಾರಕ್ಕೆ ಅನುಕೂಲ ಆಗಿದೆ ಎನ್ನುತ್ತಾರೆ ಎಪಿಎಂಸಿ ಕಾರ್ಯದರ್ಶಿ ಗೋವಿಂದರೆಡ್ಡಿ ಕಬ್ಬೇರಳ್ಳಿ.