ಕನ್ನಡಪ್ರಭ ವಾರ್ತೆ ಶನಿವಾರಸಂತೆ
ಶಾಲಾ ಆವರಣದಲ್ಲಿ ಮೂರು ಮತ್ತು ನಾಲ್ಕನೇ ತರಗತಿ ಪುಟಾಣಿಗಳು ಮಕ್ಕಳ ಸಂತೆ ಹಮ್ಮಿಕೊಂಡಿದ್ದರು. ಶಾಲಾ ಮಕ್ಕಳು ತಮ್ಮ ಮನೆಯ ಹೊಲ ಗದ್ದೆ, ಹಿತ್ತಲು ತೋಟಗಳಲ್ಲಿ ವಿವಿಧ ಬೆಳೆದ ತರಕಾರಿ, ಸೊಪ್ಪು, ಹಣ್ಣು ಹಂಪಲು ಹಾಗೂ ಮನೆಯಲ್ಲಿ ತಯಾರಿಸಿದ ತಿಂಡಿ ತಿನಿಸುಗಳನ್ನು ತಂದು ಮಾರಾಟ ಮಾಡಿದರು.
ಶಾಲೆಯಲ್ಲಿ ಮಕ್ಕಳ ವ್ಯವಹಾರಿಕ ಜ್ಞಾನ, ಸುಲಭ ಗಣಿತ ಕಲಿಕೆಯ ಆಶಯದಿಂದ ವರ್ಷವಿಡೀ ಬೇರೆ ಬೇರೆ ತರಗತಿಯ ವಿದ್ಯಾರ್ಥಿಗಳಿಗೂ ತಿಂಗಳಿಗೊಮ್ಮೆ ಮಾಸಿಕ ಮಕ್ಕಳ ಸಂತೆಯನ್ನು ಆಯೋಜನೆ ಮಾಡಲಾಗುತ್ತಿದೆ. ಪೋಷಕರು ಮಕ್ಕಳ ಸಂತೆಯಲ್ಲಿ ತರಕಾರಿ, ಹಣ್ಣು ಹಂಪಲುಗಳನ್ನು ಕೊಂಡು ಶಾಲೆಯ ಅಭಿವೃದ್ದಿಗೆ ಸಹಕಾರ ನೀಡುತ್ತಿದ್ದಾರೆ ಎಂದು ಶಾಲೆಯ ಪ್ರಾಂಶುಪಾಲೆ ಡಿ.ಸುಜಲಾದೇವಿ ತಿಳಿಸಿದರು.ಇದೇ ಸಂದರ್ಭ ಶಾಲೆಯ ಪೋಷಕರ ಸಭೆಯನ್ನು ನಡೆಸಿ ವಿದ್ಯಾಸಂಸ್ಥೆಯ ಅಭಿವೃದ್ಧಿ, ಶೈಕ್ಷಣಿಕ ಪ್ರಗತಿ ಮತ್ತಿತ್ತರ ವಿಷಯಗಳ ಬಗ್ಗೆ ಸಭೆಯಲ್ಲಿ ಚರ್ಚಿಸಿದರು. ಸಭೆಯಲ್ಲಿ ವಿದ್ಯಾರ್ಥಿಗಳಿಗೆ ಅಂಕಪಟ್ಟಿ ವಿತರಣೆ ಮಾಡಲಾಯಿತು. ಶಾಲೆಯ ಶಿಕ್ಷಕರು, ಪೋಷಕರು ಸಭೆಯಲ್ಲಿ ಪಾಲ್ಗೊಂಡಿದ್ದರು.