ಶರಣ ಸಾಹಿತ್ಯ ಸಂಘಟನೆ ಜವಾಬ್ದಾರಿ ಸಾರ್ಥಕ ಸೇವೆ: ಡಾ.ಸಿ. ಸೋಮಶೇಖರ

KannadaprabhaNewsNetwork | Published : May 31, 2025 12:10 AM
ಬಸವಾದಿ ಶಿವಶರಣರ ವಿಚಾರಧಾರೆಗಳನ್ನು ಜನಮಾನಸಕ್ಕೆ ಮುಟ್ಟಿಸುವುದಕ್ಕಾಗಿ ಸುತ್ತೂರು ಜಗದ್ಗುರು ಡಾ.ರಾಜೇಂದ್ರ ಶ್ರೀಗಳು ಹುಟ್ಟುಹಾಕಿದ ಸಂಘಟನೆಯನ್ನು ತಾವು ಮುನ್ನೆಡೆಸುತ್ತಿರುವುದು ಸಾರ್ಥಕ ಸೇವೆ ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ರಾಜ್ಯ ಅಧ್ಯಕ್ಷ ಡಾ.ಸಿ.ಸೋಮಶೇಖರ ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಬಸವಾದಿ ಶಿವಶರಣರ ವಿಚಾರಧಾರೆಗಳನ್ನು ಜನಮಾನಸಕ್ಕೆ ಮುಟ್ಟಿಸುವುದಕ್ಕಾಗಿ ಸುತ್ತೂರು ಜಗದ್ಗುರು ಡಾ.ರಾಜೇಂದ್ರ ಶ್ರೀಗಳು ಹುಟ್ಟುಹಾಕಿದ ಸಂಘಟನೆಯನ್ನು ತಾವು ಮುನ್ನೆಡೆಸುತ್ತಿರುವುದು ಸಾರ್ಥಕ ಸೇವೆ ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ರಾಜ್ಯ ಅಧ್ಯಕ್ಷ ಡಾ.ಸಿ.ಸೋಮಶೇಖರ ಹೇಳಿದರು.

ಚರಂತಿಮಠದಲ್ಲಿ ಡಾ.ಪ್ರಭುಸ್ವಾಮೀಜಿ ಸಾನ್ನಿಧ್ಯದಲ್ಲಿ ಬಾಗಲಕೊಟೆ ಜಿಲ್ಲೆಯ ಎಲ್ಲ ತಾಲೂಕು ಘಟಕದ ಅಧ್ಯಕ್ಷರು ಹಾಗೂ ಜಿಲ್ಲಾ ಕದಳಿ ಮಹಿಳಾ ವೇದಿಕೆಯ ಅಧ್ಯಕ್ಷರ ಸಭೆಯಲ್ಲಿ ಮಾತನಾಡಿದರು.

ಬಾಗಲಕೋಟೆ ಜಿಲ್ಲೆಯ ಶರಣ ಸಾಹಿತ್ಯ ಪರಿಷತ್ತಿನ ಎಲ್ಲ ತಾಲೂಕು ಘಟಕಗಳ ಯಶಸ್ವಿ ಕಾರ್ಯ ವೈಖರಿ ಮೆಚ್ಚಿ ಮಾತನಾಡಿದ ಡಾ.ಸಿ.ಸೋಮಶೇಖರ ಅವರು, ಪ್ರಭುಸ್ವಾಮಿಗಳ ಮಾನವೀಯತೆ ಅನುಕರಣೀಯ. ಅವರಿಗೆ ಗೌರವ ಡಾಕ್ಟರೇಟ್ ನೀಡಿದ್ದು ಅತ್ಯಂತ ಔಚಿತ್ಯಪೂರ್ಣ ಎಂದು ಹೇಳಿದರು.ಬೆಳಗಾವಿ ಕಿತ್ತೂರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಚರಂತಿಮಠದ ಪ್ರಭುಸ್ವಾಮಿಗಳಿಗೆ ಗೌರವ ಡಾಕ್ಟರೇಟ್ ನೀಡಿದ ಪ್ರಯುಕ್ತ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ರಾಜ್ಯ ಘಟಕದ ವತಿಯಿಂದ ಅಧ್ಯಕ್ಷ ಡಾ.ಸಿ. ಸೋಮಶೇಖರ ಹಾಗೂ ಕಾರ್ಯದರ್ಶಿ ಸೋಮಶೇಖರ ಗಾಂಜಿ ಅವರು ಶ್ರೀಗಳನ್ನು ಗೌರವಿಸಿದರು. ಡಾ.ಪ್ರಭುಸ್ವಾಮೀಜಿ ಆಶೀರ್ವಚನ ನೀಡಿದರು.

ಕದಳಿ ವೇದಿಕೆಯ ಸಹೋದರಿಯರಿಂದ ವಚನ ಗಾಯನ ಜರುಗಿತು. ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎ.ಎಸ್. ಪಾವಟೆ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ,ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಗೌರವಾಧ್ಯಕ್ಷ, ಬಿ.ವಿ.ವಿ. ಸಂಘದ ಕಾರ್ಯಧ್ಯಕ್ಷ ಡಾ.ವೀರಣ್ಣ ಚರಂತಿಮಠ ಇವರ ಮಾರ್ಗದರ್ಶನ ಸಹಾಯ, ಸಹಕಾರ ನೆನೆದರು. ಪರಿಷತ್ತಿನ ರಾಜ್ಯ ಕಾರ್ಯದರ್ಶಿ ಸೋಮಶೇಖರ ಗಾಂಜಿ ವಂದಿಸಿದರು. ಕದಳಿ ಮಹಿಳಾ ವೇದಿಕೆಯ ಕಾರ್ಯದರ್ಶಿ ವಿಜಯಲಕ್ಷ್ಮಿ ಭದ್ರಶೆಟ್ಟಿ ನಿರೂಪಿಸಿದರು. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ಜಿಲ್ಲಾಧ್ಯಕ್ಷ ಜಿ.ಎನ್. ಪಾಟೀಲ ಹಾಗೂ ಕದಳಿ ಮಹಿಳಾ ವೇದಿಕೆಯ ಜಿಲ್ಲಾ ಅಧ್ಯಕ್ಷೆ ಎಸ್.ಎಚ್. ಶೆಟ್ಟರ ಇದ್ದರು.

ಜಿಲ್ಲೆಗೆ ಪ್ರಥಮ ಬಾರಿಗೆ ಆಗಮಿಸಿದ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್‌ ರಾಜ್ಯ ಅಧ್ಯಕ್ಷ ಡಾ.ಸಿ.ಸೋಮಶೇಖರ ಹಾಗೂ ಪರಿಷತ್‌ ಕಾರ್ಯದರ್ಶಿ ಸೋಮಶೇಖರ ಗಾಂಜಿ ಅವರನ್ನು ಬಾಗಲಕೋಟೆ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಪರವಾಗಿ ಗೌರವಿಸಿ, ಸನ್ಮಾನಿಸಲಾಯಿತು.