ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಪ್ರಸ್ತಾಪ ಹಿಂದಿನ ಸರ್ಕಾರದ ಅವಧಿಯಲ್ಲಿ ಆಗಿದ್ದು, ಆದರೂ ಕಾಂಗ್ರೆಸ್ ನವರು ಈ ಯೋಜನೆಯಲ್ಲಿ ಹಣ ಹೊಡೆದಿದ್ದಾರೆನ್ನುವ ಕೂಗಾಟ ನಡೆದಿದೆ. ಹಾಗಾದರೆ ಈ ಹಿಂದೆ ತಾವೇ ತಂದ ಯೋಜನೆಗಳಲ್ಲಿ ಬಿಜೆಪಿಯವರು ಹಣ ಹೊಡೆದಿದ್ದರೆ ಎನ್ನುವುದನ್ನು ಬಹಿರಂಗಪಡಿಸಲಿ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ತಿರುಗೇಟು ನೀಡಿದರು.
ಶಿವಮೊಗ್ಗ: ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಪ್ರಸ್ತಾಪ ಹಿಂದಿನ ಸರ್ಕಾರದ ಅವಧಿಯಲ್ಲಿ ಆಗಿದ್ದು, ಆದರೂ ಕಾಂಗ್ರೆಸ್ ನವರು ಈ ಯೋಜನೆಯಲ್ಲಿ ಹಣ ಹೊಡೆದಿದ್ದಾರೆನ್ನುವ ಕೂಗಾಟ ನಡೆದಿದೆ. ಹಾಗಾದರೆ ಈ ಹಿಂದೆ ತಾವೇ ತಂದ ಯೋಜನೆಗಳಲ್ಲಿ ಬಿಜೆಪಿಯವರು ಹಣ ಹೊಡೆದಿದ್ದರೆ ಎನ್ನುವುದನ್ನು ಬಹಿರಂಗಪಡಿಸಲಿ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ತಿರುಗೇಟು ನೀಡಿದರು.
ಶುಕ್ರವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ವಿಚಾರದಲ್ಲಿ ಜನರಿಗೆ ತಪ್ಪು ಮಾಹಿತಿ ನೀಡಲಾಗುತ್ತಿದೆ. ಯೋಜನೆಯ ಸಾಧಕ-ಭಾದಕಗಳಬಗ್ಗೆ ಚರ್ಚೆ ಮಾಡದೆ, ಈ ಯೋಜನೆಯಲ್ಲಿ ಕಾಂಗ್ರೆಸ್ನವರು ಹಣ ಹೊಡೆದಿದ್ದಾರೆಂದು ಗೂಬೆ ಕೂರಿಸಲಾಗುತ್ತಿದೆ. ಹಾಗಾದರೆ ಸಿಗಂದೂರು ಸೇತುವೆ ಸೇರಿ ಅವರೇ ತಂದ ಯೋಜನೆಗಳಲ್ಲಿ ಬಿಜೆಪಿಯವರು ಎಷ್ಟು ಹಣ ಹೊಡೆದಿದ್ದಾರೆಂದು ಹೇಳಲಿ ಎಂದು ಕಿಡಿಕಾರಿದರು.ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ದೇಶದ ೨ನೇ ಅತೀ ದೊಡ್ಡ ಯೋಜನೆ. ಇದಕ್ಕೆ ಅನುಮತಿ ಕೊಟ್ಡಿದ್ದು ಕೇಂದ್ರ ಸರ್ಕಾರ. ಇಲ್ಲಿ ನಮ್ಮದೇನು ಪಾತ್ರವಿಲ್ಲ. ಯೋಜನೆಯ ಅನುಷ್ಠಾನ ಮಾತ್ರ ಕಾಂಗ್ರೆಸ್ ಸರ್ಕಾರದ ಕೆಲಸ. ಆದರೂ ಕೂಡ ಕೆಲವು ಪರಿಸರವಾದಿಗಳು, ರೈತರ ಜೊತೆಗೆ ಸೇರಿ ಬಿಜೆಪಿಯವರು ರಾಜಕಾರಣಕ್ಕಾಗಿ ಹೋರಾಟ ಮಾಡುತ್ತಿದ್ದಾರೆ. ಇವರ ಹೋರಾಟಕ್ಕೆ ಮಣಿದು ಕೇಂದ್ರ ಸರ್ಕಾರ ಈ ಯೋಜನೆ ನಿಲ್ಲಿಸುವುದಾದರೆ ನಿಲ್ಲಿಸಲಿ ನಮ್ಮದೇನು ಅಭ್ಯಂತರವೇನಿಲ್ಲ ಎಂದು ಸ್ಪಷ್ಟ ಪಡಿಸಿದರು.ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯಿಂದ ಅನುಕೂಲ ಆಗಲಿದೆ. ಈಗಿರುವ ಒಂದು ಸಾವಿರ ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯ ಗುರಿಯಿದೆ. ಇದಕ್ಕೆ ಫಾರೆಸ್ಟ್ ಹೋಗುತ್ತೆ, ಅದಾಗುತ್ತೆ ಎಂದರೆ ಹೇಗೆ? ಯಾವ ಯೋಜನೆ ಮಾಡಿದ್ರೂ ಫಾರೆಸ್ಟ್ ಹೋಗುತ್ತೆ. ಹೆದ್ದಾರಿ ಮಾಡಿದ್ರೆ ಫಾರೆಸ್ಟ್ ಹೋಗಲ್ವಾ? ಸುಮ್ನೆ ಕೆಟ್ಟ ಹೆಸರು ತರೋದು ಬೇಡ ಎಂದು ಗುಡುಗಿದರು.ಸಂಸದರು ಡಬಲ್ ಗೇಮ್ ಆಡುತ್ತಿದ್ದಾರೆ. ಕೇಂದ್ರ ಸರ್ಕಾರ ಅನುಮತಿ ಕೊಟ್ಟಿದ್ದನ್ನು ಮರೆಮಾಚಿ, ಯೋಜನೆ ಬೇಡ ಎನ್ನುತ್ತಿದ್ದಾರೆ. ಇದು ಕಣ್ಣೋರೆಸುವ ತಂತ್ರ ಎಂದ ಅವರು, ಹಾಲಪ್ಪ ಪ್ರತಿಭಟನೆಯಲ್ಲಿ ನಿಂತು ಕಾಂಗ್ರೆಸ್ ನವರು ದುಡ್ಡು ಹೊಡೆಯುತ್ತಿದ್ದಾರೆಂದು ಆರೋಪ ಮಾಡ್ತಾರೆ. ಈ ಹಿಂದೆ ಸಂಸದರು ತಂದ ಯೋಜನೆಗಳನ್ನು ದುಡ್ಡು ಹೊಡಯೋದಿಕ್ಕೆ ತಂದಿದ್ದಾ ? ಎಂದು ಪ್ರಶ್ನಿಸಿದರು.ಶಾಸಕ ಡಾ.ಯತೀಂದ್ರ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಅದು ಅವರ ವೈಯುಕ್ತಿಕ ಹೇಳಿಕೆ. ಅದಕ್ಕೆ ಪ್ರತಿಕ್ರಿಯೆ ನೀಡುವುದಿಲ್ಲ. ನಮ್ಮಲ್ಲಿ ಹೈಕಮಾಂಡ್ ಇದೆ. ಪಕ್ಷವೇ ನಿರ್ಧಾರ ಮಾಡುತ್ತೆ ಎಂದರು.
ನವೆಂಬರ್ ಕ್ರಾಂತಿ ಬಗ್ಗೆ ಪ್ರತಿಕ್ರಿಯೆ ನೀಡಿ, ಕ್ರಾಂತಿ ಇಲ್ಲ, ಬ್ರಾಂತಿಯೂ ಇಲ್ಲ ಎಲ್ಲವೂ ಸುಳ್ಳು ಎಂದರು.ನಾನು ಸಿಎಂ ಆಗಬೇಕು ಅಂತಿನಿ ಮಾಡಿ ಬಿಡ್ತಾರಾ, ನನಗೂ ಸಚಿವನಾಗಬೇಕೆಂಬ ಆಸೆ ಇದೆ. ಕೊಟ್ಟು ಬಿಡ್ತಾರಾ? ಸತೀಶ್ ಜಾರಕಿಹೊಳಿಯವರು ಈ ಹಿಂದಿನ ಚುನಾವಣೆಯಲ್ಲೇ ಹೇಳಿದ್ದರು. 2028ರ ಚುನಾವಣೆ ನನ್ನ ಸಾರಥ್ಯದಲ್ಲಿ ನಡೆಯಬೇಕೆಂದು ಆಗ ಹೇಳಿದ್ದರು. ಆದರೆ, ಹೈಕಮಾಂಡ್ ಆದೇಶವೇ ಅಂತಿಮ. ನಾನು ಯಾರ ಪರವಾಗಿಯೂ ಇಲ್ಲ. ನಾನು ಕಾಂಗ್ರೆಸ್ ಪಕ್ಷದ ಪರವಾಗಿದ್ದೇನೆ. ಕೇಂದ್ರದ ವರಿಷ್ಠರ ತೀರ್ಮಾನಕ್ಕೆ ನಾವೆಲ್ಲ ಬದ್ಧರಾಗಿದ್ದೇವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.