ಸಿದ್ಧಲಿಂಗಪುರದಲ್ಲಿ ಷಷ್ಠಿ ಜಾತ್ರೆ; ಹರಿದು ಬಂದ ಭಕ್ತಸಾಗರ

KannadaprabhaNewsNetwork |  
Published : Nov 27, 2025, 01:02 AM IST
10 | Kannada Prabha

ಸಾರಾಂಶ

ಸಹಸ್ರಾರು ಭಕ್ತರು ಶ್ರೀ ಸುಬ್ರಹ್ಮಣೇಶ್ವರಸ್ವಾಮಿ ದರ್ಶನ ಪಡೆದು ಪುನೀತರಾದರು. ಮೈಸೂರು- ಬೆಂಗಳೂರು ಹೆದ್ದಾರಿಯ ಸಿದ್ದಲಿಂಗಪುರ ಬಳಿಯ ಶ್ರೀ ಸುಬ್ರಹ್ಮಣೇಶ್ವರ ಸ್ವಾಮಿ ಜಾತ್ರೆಯನ್ನು ಸಂಭ್ರಮ, ಸಡಗರದಿಂದ ಆಚರಿಸಲಾಯಿತು.

ಕನ್ನಡಪ್ರಭ ವಾರ್ತೆ ಮೈಸೂರು

ಮೈಸೂರು ಹೊರವಲಯದ ಸಿದ್ದಲಿಂಗಪುರದಲ್ಲಿ ಸುಬ್ರಹ್ಮಣ್ಯ ಷಷ್ಠಿ ಜಾತ್ರೆ ಬುಧವಾರ ಅತ್ಯಂತ ಸಡಗರ ಸಂಭ್ರಮದಿಂದ ನಡೆಯಿತು.

ಸಹಸ್ರಾರು ಭಕ್ತರು ಶ್ರೀ ಸುಬ್ರಹ್ಮಣೇಶ್ವರಸ್ವಾಮಿ ದರ್ಶನ ಪಡೆದು ಪುನೀತರಾದರು. ಮೈಸೂರು- ಬೆಂಗಳೂರು ಹೆದ್ದಾರಿಯ ಸಿದ್ದಲಿಂಗಪುರ ಬಳಿಯ ಶ್ರೀ ಸುಬ್ರಹ್ಮಣೇಶ್ವರ ಸ್ವಾಮಿ ಜಾತ್ರೆಯನ್ನು ಸಂಭ್ರಮ, ಸಡಗರದಿಂದ ಆಚರಿಸಲಾಯಿತು. ಸಹಸ್ರಾರು ಮಂದಿ ಷಷ್ಠಿ ಜಾತ್ರೆ ಪ್ರಯುಕ್ತ ನಡೆದ ವಿಶೇಷ ಪೂಜೆಯಲ್ಲಿ ಪಾಲ್ಗೊಂಡರು. ಮುಂಜಾನೆಯಿಂದ ತಡರಾತ್ರಿವರೆಗೆ ಮೈಸೂರು ಸೇರಿದಂತೆ ದೂರ ದೂರದ ಸಾವಿರಾರು ಭಕ್ತರು ತಂಡೋಪತಂಡವಾಗಿ ಆಗಮಿಸಿ ದೇವರ ದರ್ಶನ ಪಡೆದರು.

ಬುಧವಾರ ಮುಂಜಾನೆ 2 ಗಂಟೆಯಿಂದಲೇ ಸುಬ್ರಹ್ಮಣೇಶ್ವರಸ್ವಾಮಿಗೆ ಪಂಚಾಮೃತ ಅಭಿಷೇಕ, ರುದ್ರಾಭಿಷೇಕ, ಸಹಸ್ರನಾಮಾರ್ಚನೆ, ಅಷ್ಟವಧಾನ ಪೂಜೆ ನಂತರ ಹಾಲು, ಮೊಸರು, ಜೇನುತುಪ್ಪ, ಬೆಣ್ಣೆ ಅಭಿಷೇಕ ನೇರವೇರಿಸಲಾಯಿತು. ಕಳೆದ ರಾತ್ರಿಯೇ ಪೊಲೀಸ್ ಬಂದೋಬಸ್ತ್‌ನಿಯೋಜಿಸಲಾಗಿತ್ತು.

ಮೈಸೂರು ಅರಮನೆಯಿಂದ ತಂದ ಬೆಳ್ಳಿ ನಾಗಾಭರಣವನ್ನು ತಹಸೀಲ್ದಾರ್, ದೇವಸ್ಥಾನದ ಪ್ರಧಾನ ಅರ್ಚಕ ಸುಬ್ರಹ್ಮಣ್ಯ ಅವರ ಸಮ್ಮುಖದಲ್ಲಿ ದೇವರಿಗೆ ಧರಿಸಿ ಅಲಂಕರಿಸಲಾಯಿತು.

ನಂತರ ಬೆಳ್ಳಿ ನಾಗಾಭರಣ ಧರಿಸಿದ ಸುಬ್ರಹ್ಮಣೇಶ್ವರಸ್ವಾಮಿ ದೇವರಿಗೆ ವಿಶೇಷ ಪೂಜೆ ನೆರವೇರಿಸಿ, ಮಹಾಮಂಗಳಾರತಿ ನಡೆದ ಬಳಿಕ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು. ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಚಿಕ್ಕ ವಯಸ್ಸಿನಲ್ಲಿ ಅನಾರೋಗ್ಯ ಪೀಡಿತರಾದಾಗ ಒಳಿತಾಗಲೆಂದು ಹರಕೆ ಕಟ್ಟಿಕೊಳ್ಳಲಾಗಿತ್ತು. ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಗುಣಮುಖರಾದ ಹಿನ್ನೆಲೆಯಲ್ಲಿ ನೀಡಲಾಗಿರುವ ಬೆಳ್ಳಿ ನಾಗಾಭರಣವನ್ನು ಸಂಪ್ರದಾಯದಂತೆ ಪ್ರತಿ ವರ್ಷ ಷಷ್ಠಿ ಹಬ್ಬದ ದಿನದಂದು ಧರಿಸುವುದು ವಾಡಿಕೆ.

ಮುಂಜಾನೆಯಿಂದಲೇ ಸಾರ್ವಜನಿಕರು ದೇವರ ದರ್ಶನ ಪಡೆದರೆ, ಮಧ್ಯಾಹ್ನ ಸುಬ್ರಹ್ಮಣೇಶ್ವರ ಸ್ವಾಮಿಯ ರಥೋತ್ಸವ ಅತ್ಯಂತ ವೈಭವದಿಂದ ಜರುಗಿತು. ವಿಶೇಷವಾಗಿ ಅಲಂಕರಿಸಿದ್ದ ರಥೋತ್ಸವದಲ್ಲಿ ದೇವರನ್ನು ಪ್ರತಿಷ್ಠಾಪಿಸಿ ರಾಷ್ಟ್ರೀಯ ಹೆದ್ದಾರಿಯ ಮೂಲಕವೇ ಸಿದ್ದಲಿಂಗಪುರದ ಚಂದ್ರಮೌಳೇಶ್ವರಸ್ವಾಮಿ ದೇವಾಲಯದವರೆಗೆ ರಥೋತ್ಸವ ನಡೆಯಿತು. ನಂತರ, ಅದೇ ಮಾರ್ಗವಾಗಿ ವಾಪಸ್ ದೇವಸ್ಥಾನ ತಲುಪಿತು.

ಸಾಲುಗಟ್ಟಿ ನಿಂತ ಭಕ್ತರು:

ಸುಬ್ರಹ್ಮಣ್ಯ ಷಷ್ಠಿ ಜಾತ್ರೆ ಪ್ರಯುಕ್ತ ಪ್ರತಿವರ್ಷವೂ ವಿಶೇಷವಾಗಿ ದೇವರ ದರ್ಶನ ಪಡೆಯುವುದು ಸಂಪ್ರದಾಯ. ಅದರಂತೆ ಮೈಸೂರು, ಸಿದ್ದಲಿಂಗಪುರ, ಕಳಸ್ತವಾಡಿ, ಶ್ರೀರಂಗಪಟ್ಟಣ, ಹೆಬ್ಬಾಳು, ಕುಂಬಾರಕೊಪ್ಪಲು, ಮೇಟಗಳ್ಳಿ, ಯರಗನಹಳ್ಳಿ, ಪಾಲಹಳ್ಳಿ, ಕೆಆರ್‌ಎಸ್ ಸುತ್ತಮುತ್ತಲ ಹಳ್ಳಿಗಳಿಂದ ಭಕ್ತರು ಆಗಮಿಸಿದರು.

ಚುಮುಚುಮು ಚಳಿ ಲೆಕ್ಕಿಸದೆ ಉಚಿತ ದರ್ಶನದ ಸಾಲಿನಲ್ಲಿ ನಿಂತು ದರ್ಶನ ಪಡೆದರು. ದೇವರ ದರ್ಶನಕ್ಕೆ ಭಕ್ತರು ಮುಗಿ ಬಿದ್ದ ಕಾರಣಕ್ಕಾಗಿ ಸಾರ್ವಜನಿಕರನ್ನು ಪೊಲೀಸರು ನಿಯಂತ್ರಿಸಲು ಹರಸಾಹಸ ಪಡಬೇಕಾಯಿತು. ದೇವಸ್ಥಾನದ ಬಳಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು.

ಜಿಟಿಡಿ ಭೇಟಿ:

ಷಷ್ಠಿ ಹಿನ್ನೆಲೆಯಲ್ಲಿ ಶಾಸಕ ಜಿ.ಟಿ.ದೇವೇಗೌಡ ಸಿದ್ದಲಿಂಗಪುರದ ಸುಬ್ರಹ್ಮಣೇಶ್ವರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಈ ವೇಳೆ ಮಾತನಾಡಿದ ್ವರು, ನಾನು ಹುಟ್ಟಿದ್ದೇ ಷಷ್ಠಿ ದಿನ. ಷಷ್ಠಿ ಹಿನ್ನೆಲೆಯಲ್ಲಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದುಕೊಂಡಿದ್ದೇನೆ. ಸುಬ್ರಹ್ಮಣ್ಯನ ಆಶೀರ್ವಾದ ಎಲ್ಲರ ಮೇಲಿರಲಿ. ದೇವಸ್ಥಾನಕ್ಕೆ ಕಾಂಪೌಂಡ್, ಕುಡಿಯುವ ನೀರು, ಶೌಚಾಲಯ ಸೇರಿದಂತೆ ಅಗತ್ಯ ಸೌಕರ್ಯ ಕಲ್ಪಿಸುವ ಸಂಬಂಧ ಜಿಲ್ಲಾಧಿಕಾರಿಯೊಂದಿಗೆ ಮಾತನಾಡಿದ್ದೇನೆ ಎಂದರು.

ಹುತ್ತಕ್ಕೆ ಹಾಲು- ಬೆಣ್ಣೆ ತನಿ:

ಹರಕೆ ಹೊತ್ತ ಭಕ್ತರು ನಾಗರ ಹುತ್ತಕ್ಕೆ ಹಾಲು-ಬೆಣ್ಣೆ ತನಿ ಎರೆದರೆ, ಕೆಲವರು ಬೆಳ್ಳಿ ನಾಗರವನ್ನು ಹುತ್ತಕ್ಕೆ ಬಿಡುತ್ತಿದ್ದುದು ಸಾಮಾನ್ಯವಾಗಿತ್ತು. ಅನೇಕರು ದೇವಸ್ಥಾನದ ಹಿಂಭಾಗ ಹುತ್ತಕ್ಕೆ ಹಾಲು-ಬೆಣ್ಣೆ ತನಿ ಎರೆಯುತ್ತಿದ್ದರಿಂದ ಭರ್ಜರಿಯಾಗಿ ಹಾಲು, ಬೆಣ್ಣೆ ಮಾರಾಟವಾಯಿತು.ನಗರದೆಲ್ಲೆಡೆ ಆಚರಣೆ

ಷಷ್ಠಿ ಹಿನ್ನೆಲೆಯಲ್ಲಿ ಬುಧವಾರ ನಗರದಲ್ಲೆಡೆ ಭಕ್ತರು ಹುತ್ತಕ್ಕೆ ಹಾಲು(ತನಿ) ಎರೆದು ಭಕ್ತಿಭಾವದಿಂದ ಪೂಜೆ ಸಲ್ಲಿಸಿದರು. ನಗರದ ಹಲವೆಡೆ ಹುತ್ತಕ್ಕೆ ಹಾಗೂ ನಾಗರಕಲ್ಲಿಗೆ ಹಾಲೆರೆದು ಪೂಜೆ ಸಲ್ಲಿಸುವ ಮೂಲಕ ಭಕ್ತರು ಷಷ್ಠಿ ಆಚರಿಸಿದರು. ವಿದ್ಯಾರಣ್ಯಪುರಂನ ಬೂತಾಳೆ ಮೈದಾನ, ದಿವಾನ್ಸ್ ರಸ್ತೆಯ ಅಮೃತೇಶ್ವರ ದೇವಾಲಯ, ಕುರುಬಾರಹಳ್ಳಿ ಬನ್ನಿಮಹಾಕಾಳೇಶ್ವರಿ ದೇವಾಲಯ, ಅಗ್ರಹಾರ ಗಣಪತಿ ದೇವಾಲಯ, ಕೆ.ಜಿ. ಕೊಪ್ಪಲಿನ ಬಂದಂತಮ್ಮ ದೇವಾಲಯ, ಜಿಲ್ಲಾಧಿಕಾರಿ ಕಚೇರಿ ಸಮೀಪದ ಕಾಡುಮಲ್ಲೇಶ್ವರ ದೇವಾಲಯ, ಯರಗನಹಳ್ಳಿ, ಸಿದ್ದಾರ್ಥ ಬಡಾವಣೆ, ಆಲನಹಳ್ಳಿ, ಸರಸ್ವತಿಪುರಂ, ಟಿ.ಕೆ. ಲೇಔಟ್, ಜನತಾನಗರ, ಬಿಸಿಲುಮಾರಮ್ಮ ದೇವಾಲಯ, ದಟ್ಟಗಳ್ಳಿ, ಬೋಗಾದಿ, ಮೇಟಗಳ್ಳಿ, ಕುಂಬಾರಕೊಪ್ಪಲು, ಕೆಸರೆ, ಜೆ.ಪಿ. ನಗರ, ರಮಾಬಾಯಿನಗರ, ಚಾಮುಂಡಿಪುರಂ, ಜೆಎಸ್‌ಎಸ್ ಬಡಾವಣೆ ಸೇರಿದಂತೆ ವಿವಿಧ ಬಡಾವಣೆಗಳಲ್ಲಿಯೂ ಭಕ್ತರು ಹುತ್ತ ಹಾಗೂ ನಾಗರಕಲ್ಲಿಗೆ ಹಾಲೆರೆದು ಪೂಜೆ ಸಲ್ಲಿಸಿದರು.

ಕೆಲವೆಡೆ ನೈವೇಧ್ಯಕ್ಕೆ ಮನೆಯಿಂದ ಮಾಡಿಕೊಂಡು ಬಂದಿದ್ದ ತಿಂಡಿ, ತಿನಿಸು, ಹಣ್ಣನ್ನು ಭಕ್ತರಿಗೆ ಪ್ರಸಾದವಾಗಿ ನೀಡುತ್ತಿದ್ದ ದೃಶ್ಯ ಕಂಡು ಬಂತು.

PREV

Recommended Stories

ಡಿಕೆಶಿ ಭೇಟಿಯಾದ್ರೂ ಸಿದ್ದುಗೇ ನಮ್ಮ ಬೆಂಬಲ: ಜಾರಕಿಹೊಳಿ
2028ಕ್ಕೆ ಕಾಂಗ್ರೆಸ್‌ ಅಧಿಕಾರಕ್ಕೆ ತರಲು ಸತೀಶ್‌ ಜತೆ ಚರ್ಚೆ : ಡಿಕೆ