ಪರಶಿವಮೂರ್ತಿ ಮಾಟಲದಿನ್ನಿ
ತಾಲೂಕಿನ ದೋಟಿಹಾಳ ಗ್ರಾಮದಿಂದ ಗೋತಗಿ ಗ್ರಾಮಕ್ಕೆ ಹೋಗುವ ಮಾರ್ಗ ಮಧ್ಯೆ ಮುಖ್ಯ ರಸ್ತೆ ಪಕ್ಕದ ಗಿಡಕ್ಕೆ ರೋಗ ಕಾಣಿಸಿಕೊಂಡ ಕುರಿ ನೇತು ಹಾಕಿರುವ ಘಟನೆ ಭಾನುವಾರ ಬೆಳಕಿಗೆ ಬಂದಿದೆ.
ಕುರಿ ಮತ್ತು ಮೇಕೆಗಳಿಗೆ ರೋಗ ಬಾರದಿರಲಿ ಎಂಬ ಉದ್ದೇಶದಿಂದ ರೋಗ ಕಾಣಿಸಿಕೊಂಡ ಜೀವಂತ ಕುರಿಗಳನ್ನು ಗಿಡಗಳಿಗೆ ನೇತು ಹಾಕುವ (ಬಲಿ ನೀಡುವ) ಮೌಢ್ಯತೆ ಕುರಿಗಾಹಿಗಳಲ್ಲಿ ಜೀವಂತವಾಗಿದ್ದು, ತಾಲೂಕಿನ ಕೆಲ ಪ್ರದೇಶಗಳಲ್ಲಿ ಕಂಡು ಬರುತ್ತಿದೆ.ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋಗುವ ವೇಳೆ ಮೂರ್ನಾಲ್ಕು ರಸ್ತೆ ಸೇರುವ ತಿರುವಿನ ಸಮೀಪದ ಗಿಡಕ್ಕೆ ಕುರಿ ಮರಿಯ ಹಿಂಗಾಲಿಗೆ ಹಗ್ಗ ಕಟ್ಟಿ ನೇತು ಹಾಕುತ್ತಾರೆ. ನಂತರ ಪೂಜೆ ಮಾಡಿ ಅದನ್ನು ತಿರುಗಿ ನೋಡದೆ ಅಲ್ಲಿಂದ ತೆರಳುತ್ತಾರೆ. ನೇತು ಬಿಟ್ಟ ಕುರಿಯ ಇಡೀ ದೇಹದ ಭಾರ ತಲೆಯ ಮೇಲೆ ಬಿದ್ದು ಕಣ್ಣಿನಿಂದ ರಕ್ತ ಸೋರಲಾರಂಭಿಸುತ್ತದೆ. ಆಗ ಕುರಿಯು ಹಿಂಸೆಯಿಂದ ಒದ್ದಾಡಿ ಪ್ರಾಣ ಬಿಡುತ್ತದೆ. ತಾಲೂಕಿನ ಮದಲಗಟ್ಟಿ, ಹಿರೆಬನ್ನಿಗೋಳ, ಶಾಖಾಪೂರು, ನೆರೆಬೆಂಚಿ, ಬ್ಯಾಲಿಹಾಳ, ಶಿರಗುಂಪಿ, ಟಕ್ಕಳಕಿ, ಬಿಜಕಲ್, ಹೆಸರೂರು, ಕ್ಯಾದಿಗುಪ್ಪ ಸೇರಿದಂತೆ ಅನೇಕ ಗ್ರಾಮದ ಅರಣ್ಯ ಪ್ರದೇಶಗಳಲ್ಲಿ ಈ ದೃಶ್ಯ ಸಾಮಾನ್ಯವಾಗಿದೆ.
ಕುರಿಗಳಲ್ಲಿ ರೋಗ ಕಾಣಿಸಿಕೊಂಡರೆ ವೈದ್ಯರ ಬಳಿ ಚಿಕಿತ್ಸೆ ಕೊಡಿಸುವುದು ಬಿಟ್ಟು ಪೂಜೆ ಮಾಡುವುದು, ಮಂತ್ರ ಹಾಕಿಸುವ ಮೂಢನಂಬಿಕೆಗಳತ್ತ ಕುರಿಗಾಹಿಗಳು ವಾಲುತ್ತಿದ್ದಾರೆ. ಹೀಗಾಗಿ ರೋಗ ಉಲ್ಬಣಿಸಿ ಕುರಿ-ಮೇಕೆಗಳು ಸಾಯುವ ಸಂಖ್ಯೆ ಹೆಚ್ಚುತ್ತದೆ. ಜೀವಂತ ಅಥವಾ ಸತ್ತ ಕುರಿ ಮರಕ್ಕೆ ನೇತು ಹಾಕುವುದರಿಂದ ರೋಗ ನಿವಾರಣೆ ಆಗುವುದಿಲ್ಲ ಎಂಬ ಮೌಢ್ಯತೆ ದೂರ ಮಾಡಲು ಜಾಗೃತಿ ಮೂಡಿಸಬೇಕಿದೆ ಎನ್ನುತ್ತಾರೆ ವೈದ್ಯರು.
ಡಾ. ಆನಂದ ದೇವರನಾವದಗಿ, ಸಹಾಯಕ ನಿರ್ದೇಶಕರು, ಪಶು ಸಂಗೋಪನಾ ಇಲಾಖೆ ಕುಷ್ಟಗಿ