ಮರ್ಮಾಂಗಕ್ಕೆ ಶಾಕ್ ಅಮಾನವೀಯ ಘಟನೆ ತಾಲಿಬಾನ್ ಕೃತ್ಯ

KannadaprabhaNewsNetwork |  
Published : May 16, 2024, 12:46 AM IST
ಉಮೇಶ್‌ ಜಾಧವ್‌ | Kannada Prabha

ಸಾರಾಂಶ

ಹಾಗರಗಾ ಕ್ರಾಸ್‌ನ ಮನೆಯೊಂದರಲ್ಲಿ ಯುವಕರಿಗೆ ಮರ್ಮಾಂಗಕ್ಕೆ ಗನ್ ಮೂಲಕ ಶಾಕ್ ಕೊಟ್ಟು ಮಚ್ಚುಗಳಿಂದ ದಾಳಿ ಮಾಡಿದ ಘಟನೆಯು ತಾಲಿಬಾನ್ ಕೃತ್ಯವಾಗಿದ್ದು ಇದನ್ನು ಖಂಡಿಸುತ್ತೇನೆ ಮತ್ತು ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಕೂಡಲೇ ರಾಜೀನಾಮೆ ನೀಡಬೇಕು ಎಂದು ಲೋಕಸಭಾ ಸದಸ್ಯ ಡಾ. ಉಮೇಶ್ ಜಾಧವ್ ಅವರು ಆಗ್ರಹಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ನಗರದ ಹಾಗರಗಾ ಕ್ರಾಸ್‌ನ ಮನೆಯೊಂದರಲ್ಲಿ ಯುವಕರಿಗೆ ಮರ್ಮಾಂಗಕ್ಕೆ ಗನ್ ಮೂಲಕ ಶಾಕ್ ಕೊಟ್ಟು ಮಚ್ಚುಗಳಿಂದ ದಾಳಿ ಮಾಡಿದ ಘಟನೆಯು ತಾಲಿಬಾನ್ ಕೃತ್ಯವಾಗಿದ್ದು ಇದನ್ನು ಖಂಡಿಸುತ್ತೇನೆ ಮತ್ತು ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಕೂಡಲೇ ರಾಜೀನಾಮೆ ನೀಡಬೇಕು ಎಂದು ಲೋಕಸಭಾ ಸದಸ್ಯ ಡಾ. ಉಮೇಶ್ ಜಾಧವ್ ಅವರು ಆಗ್ರಹಿಸಿದ್ದಾರೆ.

ಜಿಲ್ಲೆಯಲ್ಲಿ ಕಾರು ಮಾರಾಟ ಮಾಡಿ ಜೀವನ ನಡೆಸುತ್ತಿದ್ದ ಯುವಕರ ಮೇಲೆ ನಡೆದ ಈ ಅಮಾನವೀಯ ಘಟನೆ ನಾಗರಿಕ ಸಮಾಜ ತಲೆತಗ್ಗಿಸುವಂಥದ್ದು. ಅವರ ಬಟ್ಟೆ ಕಳಚಿ ಶಾಕ್ ನೀಡುವಂತಹ ತಾಲಿಬಾನ್ ಕೃತ್ಯ ನಡೆಸಿರುವುದು ನಿಜಕ್ಕೂ ದುಃಖ. ಇದಕ್ಕೆ ಕೂಡಲೇ ಪ್ರಿಯಾಂಕ್ ಖರ್ಗೆ ಉತ್ತರ ನೀಡಬೇಕಲ್ಲದೆ ಕಾನೂನು ಸುವ್ಯವಸ್ಥೆ ಕಾಪಾಡಲು ವಿಫಲರಾಗಿರುವುದಕ್ಕೆ ರಾಜೀನಾಮೆ ನೀಡಬೇಕು ಎಂದು ಅವರು ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.

ಘಟನೆಯ ಆರೋಪಿಗಳು ಪ್ರಿಯಾಂಕ್ ಖರ್ಗೆ ಮತ್ತು ಲೋಕಸಭಾ ಸ್ಪರ್ಧೆಗೆ ನಿಂತ ರಾಧಾಕೃಷ್ಣ ದೊಡ್ಡಮನಿಯವರ ನಿಕಟವರ್ತಿಗಳಾಗಿದ್ದು, ನಿತ್ಯ ಅವರ ಒಡನಾಟದಲ್ಲಿರುವವರು. ಆದುದರಿಂದ ಆರೋಪಿಗಳು ಯಾವುದೇ ಭಯವಿಲ್ಲದೆ ಇಂಥ ನೀಚ ಕೃತ್ಯವನ್ನು ಮಾಡಿ ಕಲಬುರ್ಗಿಯಲ್ಲಿ ಭಯದ ವಾತಾವರಣ ಸೃಷ್ಟಿಸಿದ್ದಾರೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಇಂತಹ ನೂರಾರು ಕೃತ್ಯಗಳು ನಡೆಯುತ್ತಿದ್ದು, ಜಿಲ್ಲೆಯಲ್ಲಿ ಈ ಘಟನೆ ಮೇ ನಾಲ್ಕರಂದು ಸಂಭವಿಸಿದ್ದರೂ ಮಾಧ್ಯಮಗಳಿಗೆ ತಿಳಿಸದೆ ರಹಸ್ಯವಾಗಿ ಇಟ್ಟಿರುವುದರಿಂದ ಪೊಲೀಸರ ನಿಷ್ಕ್ರೀಯತೆ ಹಾಗು ಕೈವಾಡವು ಇದೆ ಎಂದು ಆರೋಪಿಸಿದ ಅವರು, ನಗರದಲ್ಲಿ ನಿರ್ಭೀತಿಯಿಂದ ಜೀವನ ಮಾಡಲು ಕಷ್ಟಕರವಾಗಿದ್ದು ಪೊಲೀಸರು ಕಾಂಗ್ರೆಸ್ಸಿನ ಕೈ ಗೊಂಬೆಗಳಾಗಿ ಕಾರ್ಯನಿರ್ವಹಿಸುತ್ತಿರುವುದರಿಂದ ಜನರಿಗೆ ರಕ್ಷಣೆ ಇಲ್ಲದಂತಹ ಸ್ಥಿತಿ ನಿರ್ಮಾಣವಾಗಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಚುನಾವಣೆಯಲ್ಲಿ ಪೊಲೀಸರು ಹಾಗೂ ಅಧಿಕಾರಿಗಳು ಉತ್ತಮ ಕೆಲಸ ಮಾಡಿದ್ದರೂ ಈ ಘಟನೆ ಒಂದು ಸಾಮಾನ್ಯ ಘಟನೆಯಾಗಿರದೆ ಅತ್ಯಂತ ಹೇಯ ಹಾಗೂ ಗಂಭೀರ ಕೃತ್ಯವಾಗಿರುವುದರಿಂದ ಈ ಬಗ್ಗೆ ನೈತಿಕ ಹೊಣೆಯನ್ನು ಹೊತ್ತು ಸಚಿವ ಪ್ರಿಯಾಂಕ್ ಖರ್ಗೆ ಕೂಡಲೇ ರಾಜೀನಾಮೆ ಸಲ್ಲಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಸರ್ಕಾರ ಮತ್ತು ಪೊಲೀಸ್‌ ಇಲಾಖೆ ಸಾರ್ವಜನಿಕರ ನೆಮ್ಮದಿಯ ಹಾಗೂ ನಿರ್ಭೀತೀಯ ಜೀವನ ನಡೆಸಲು ಅನುವು ಮಾಡಿಕೊಡಬೇಕಾಗಿದೆ. ಕಳೆದ ಕೆಲವಾರು ತಿಂಗಳಿಂದ ಸಚಿವರ ಕುಮ್ಮಕ್ಕು ಹಾಗೂ ಸರ್ಕಾರದ ಪ್ರೋತ್ಸಾಹದಿಂದ ದುಷ್ಟ ಶಕ್ತಿಗಳು ಶಾಂತಿ ಮತ್ತು ನೆಮ್ಮದಿಯನ್ನು ಕೆಡಿಸುತ್ತಿವೆ. ಯಾವುದೇ ರೀತಿಯ ಭಯ ಇಲ್ಲದೆ ಕಾನೂನನ್ನು ಕೈಗೆತ್ತಿಕೊಂಡು ಅಮಾಯಕರ ಮೇಲೆ ದೌರ್ಜನ್ಯಗಳಾಗುತ್ತಿರುವುದನ್ನು ನೋಡಿಯು ನೋಡದಂತಿರುವ ಉಸ್ತುವಾರಿ ಸಚಿವರ ನಡವಳಿಕೆಯನ್ನು ತೀವ್ರ ಖಂಡನೀಯ ಎಂದು ಅವರು ಆಕ್ರೋಶ ಹೊರಹಾಕಿದ್ದಾರೆ.

ಮಹಾರಾಷ್ಟ್ರ ರಾಜ್ಯದಲ್ಲಿ ಚುನಾವಣಾ ಪ್ರಚಾರ ಕಾರ್ಯದಲ್ಲಿ ಇರುವುದರಿಂದ ದೌರ್ಜನ್ಯಕ್ಕೊಳಗಾದ ಯುವಕರನ್ನು ಭೇಟಿ ಮಾಡಿ ಸಾಂತ್ವನ ಹೇಳಲು ಅಸಾಧ್ಯವಾಗಿದೆ. ಪೊಲಿಸ್ ಇಲಾಖೆಯು ಕೂಡಲೇ ನಿಷ್ಪಕ್ಷಪಾತವಾದ ತನಿಖೆಯನ್ನು ಮಾಡಿ ತಪ್ಪಿತಸ್ಥರಿಗೆ ಉಗ್ರ ಶಿಕ್ಷೆಯನ್ನು ನೀಡಲು ಮತ್ತು ಸಮಾಜದಲ್ಲಿ ಶಾಂತಿ ನೆಮ್ಮದಿಯನ್ನು ಕಾಪಾಡಲು ಕ್ರಮ ಕೈಗೊಳ್ಳಬೇಕು. ಘಟನೆ ನಡೆದು ಇಷ್ಟು ದಿನಗಳಾದರೂ ಪೊಲೀಸ್ ಇಲಾಖೆ ಘಟನೆಯನ್ನು ಮುಚ್ಚಿಟ್ಟು ರಾಜಕೀಯ ಪಕ್ಷಗಳ ಕೈಗೊಂಬೆಗಳಂತೆ ವರ್ತಿಸುತ್ತಿರುವುದರಿಂದ ನಾಗರಿಕ ಸಮಾಜಕ್ಕೆ ಪೊಲಿಸ್ ಇಲಾಖೆಯ ಮೇಲಿನ ವಿಶ್ವಾಸವನ್ನು ಕಳೆದುಕೊಳ್ಳುವಂತಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

5 ಪಾಲಿಕೆಗಳಲ್ಲಿ ಜಯಭೇರಿ ಬಾರಿಸಲು ಬಿಜೆಪಿಗೆ ಒಳ್ಳೆ ಅವಕಾಶ
ಸಿಎಂ ಗಾದಿ ಸಂಚಲನ : ನಾನು ಸಿಎಂ ಆಗಲಿ ಎಂಬುದು ಜನರ ಬಯಕೆ ಎಂದರು ಡಿಕೆಶಿ