ಸಂಭ್ರಮದಿಂದ ನಡೆದ ಶ್ರೀಭಗವಾನ್ ಘನಲೀಲಾ ಸಿದ್ದಪ್ಪಾಜಿ ಕಂಡಾಯ ಉತ್ಸವ

KannadaprabhaNewsNetwork |  
Published : Apr 05, 2026, 01:45 AM IST
4ಕೆಎಂಎನ್ ಡಿ13 | Kannada Prabha

ಸಾರಾಂಶ

ಬೆಳಗ್ಗೆಯಿಂದ ರಾತ್ರಿವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ದೇವಾಲಯದ ಪ್ರಧಾನ ಅರ್ಚಕ ಪುನೀತ್ ಸ್ವಾಮೀಜಿ ಹಾಗೂ ಪೃಥ್ವಿ ಸ್ವಾಮೀಜಿ ನೇತೃತ್ವದಲ್ಲಿ ನಡೆದವು. ಬೆಳ್ಳಿ ರಥದಲ್ಲಿ ದೇವರ ವಿಗ್ರಹ ಪ್ರತಿಷ್ಠಾಪನೆ ಮಾಡಿ ಗ್ರಾಮದ ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ನಡೆಸಲಾಯಿತು.

ಕೆ.ಆರ್.ಪೇಟೆ:

ಹೊಸಹೂಳಲು ವಿಜಯನಗರ ಬಡಾವಣೆಯ ಶ್ರೀಭಗವಾನ್ ಘನಲೀಲಾ ಸಿದ್ದಪ್ಪಾಜಿ ಅವರ 16ನೇ ವರ್ಷದ ಜೋಡಿ ಕಂಡಾಯ ಉತ್ಸವ ಶುಕ್ರವಾರ ಸಡಗರ ಸಂಭ್ರಮದಿಂದ ಜರುಗಿತು.

ಬೆಳಗ್ಗೆಯಿಂದ ರಾತ್ರಿವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ದೇವಾಲಯದ ಪ್ರಧಾನ ಅರ್ಚಕ ಪುನೀತ್ ಸ್ವಾಮೀಜಿ ಹಾಗೂ ಪೃಥ್ವಿ ಸ್ವಾಮೀಜಿ ನೇತೃತ್ವದಲ್ಲಿ ನಡೆದವು. ಬೆಳ್ಳಿ ರಥದಲ್ಲಿ ದೇವರ ವಿಗ್ರಹ ಪ್ರತಿಷ್ಠಾಪನೆ ಮಾಡಿ ಗ್ರಾಮದ ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ನಡೆಸಲಾಯಿತು.

ಉತ್ಸವದ ಮೆರವಣಿಗೆಯಲ್ಲಿ ದೀಪಾಲಂಕಾರ, ಪುಷ್ಪಾಲಂಕಾರ, ಪೂಜಾ ಕುಣಿತ, ಡೊಳ್ಳುಕುಣಿತ, ವೀರಗಾಸೆ, ಭದ್ರಾಕಾಳಿ ಕುಣಿತ, ಚಿಲಿಪಿಲಿ ದಸರಾ ಗೊಂಬೆಗಳು, ಮಂಗಳವಾದ್ಯ ಹಾಗೂ ನಗಾರಿ ವಾದ್ಯದೊಂದಿಗೆ ಮೆರವಣಿಗೆ ನಡೆಸಲಾಯಿತು. ದೇವಾಲಯದ ಆವರಣದಲ್ಲಿ ಪ್ರಸಾದ ವಿನಿಯೋಗ, ಅನ್ನಸಂತರ್ಪಣೆ, ದೇವರ ಪೂರಿ ಪ್ರಸಾದ ಸೇರಿದಂತೆ ಅನೇಕ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲಾಯಿತು. ಸಾವಿರಾರು ಸಂಖ್ಯೆಯಲ್ಲಿ ಭಕ್ತದಾದಿಗಳು ಪಾಲ್ಗೊಂಡಿದ್ದರು.ಲಕ್ಷ್ಮೀದೇವಿ ಅಮ್ಮನವರ ಜಾತ್ರೆ

ಕಿಕ್ಕೇರಿ:ಸಮೀಪದ ಭಾರತೀಪುರ ಗ್ರಾಮದ ಲಕ್ಷ್ಮೀದೇವಿ ಅಮ್ಮನವರ ಜಾತ್ರೆಯ ಇಳಿಹೊತ್ತಿನ ಭಾಸ್ಕರನ ಹೊಂಗಿರಣದ ಪ್ರಕಾಶಮಾನದಲ್ಲಿ ಅಮ್ಮನವರ ರಥವು ವಿಜೃಂಭಣೆಯಿಂದ ರಥಬೀದಿಯಲ್ಲಿ ಸಾಗಿತು.

ಬೆಳಗ್ಗೆಯಿಂದಲೇ ಸಾವಿರಾರು ಭಕ್ತರು ಬಿರು ಬಿಸಿಲನ್ನು ಲೆಕ್ಕಿಸದೆ ಪಾಲ್ಗೊಂಡು ಪೂಜೆ ಸಲ್ಲಿಸಿದರು. ಸಂಜೆ ದಾರಿಯುದ್ದಕ್ಕೂ ಲಕ್ಷ್ಮೀದೇವಿ ಉಘೇ, ಉಘೇ ಎಂದು ಜಯಘೋಷ ಕೂಗುತ್ತ ರಥವನ್ನು ಎಳೆದರು. ಭಕ್ತರು ಹಣ್ಣು ಧವನ ಎಸೆಯುವ ಮೂಲಕ ಭಕ್ತಿ ಮೆರೆದು. ಹಲವರು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಬಾಳೆಹಣ್ಣು ಮೇಲೆ ತಮ್ಮ ಬಯಕೆ ಬರೆದು ರಥಕ್ಕೆ ಎಸೆದರು. ದೇವಿಗೆ ವಿವಿಧ ಪರಿಮಳ ಪುಷ್ಪ, ನೋಟಿನ ಹಾರದೊಂದಿಗೆ ವಸ್ತ್ರ, ಆಭರಣಗಳಿಂದ ಅಲಂಕರಿಸಲಾಗಿತ್ತು.ರಥೋತ್ಸವಕ್ಕೂ ಮುನ್ನ ಧ್ವಜಪಟ ಪೂಜೆ, ಕಳಶ ಪೂಜೆ, ಗ್ರಾಮದ ಅಷ್ಟದಿಕ್ಕುಗಳಿಗೆ ಬಲಿಪೂಜೆ, ಧೂಪ ಪೂಜೆ ನಡೆಯಿತು. ಗುಡಿಯಿಂದ ಅಮ್ಮನವರನ್ನು ಸರ್ವಾಲಂಕಾರದಿಂದ ಶೃಂಗರಿಸಿ ಮೆರವಣಿಗೆ ಮಾಡಲಾಯಿತು. ತರುವಾಯ ದೇವಿಯನ್ನು ರಥದಲ್ಲಿ ಪ್ರತಿಷ್ಠಾಪಿಸಲಾಯಿತು.

ನೂತನ ಜೋಡಿ, ಪುಟಾಣಿಗಳು ತವರೂರಿನ ಸಂಭ್ರಮದ ಜಾತ್ರೆಗೆ ನೆಂಟರಿಷ್ಟರನ್ನು ಸಂಭ್ರಮದಿಂದ ಬರಮಾಡಿಕೊಂಡು ಸಂಭ್ರಮಪಟ್ಟರು. ದಾನಿಗಳು ಸ್ವಯಂಪ್ರೇರಣೆಯಿಂದ ನೀರು ಮಜ್ಜಿಗೆ, ಕೋಸಂಬರಿ, ಪಾನಕ, ಚಿತ್ರನ್ನ, ಮೊಸರನ್ನದಂತಹ ಅರಹೊಟ್ಟಿಗೆ ಕಾರ್ಯಕ್ರಮವನ್ನು ನಡೆಸಿ ಭಕ್ತರ ದಾಹ ತಣಿಸಿದರು. ಗ್ರಾಮ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಭಕ್ತರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕುಡಿದ ಮತ್ತಿನಲ್ಲಿ ಬೈಕ್‌ ಜಖಂಮಾಡಿದ್ದಕ್ಕೆ ಸ್ನೇಹಿತನ ಕೊಲೆ
ಐಪಿಎಲ್‌ ಪಂದ್ಯದ ವೇಳೆ ಮೊಬೈಲ್‌ಎಗರಿಸಿದ್ದ ಇನ್ನು 9 ಮಂದಿ ಬಂಧನ