ದೇವದುರ್ಗ: ಅಯೋಧ್ಯೆಯಲ್ಲಿ ಶ್ರೀರಾಮಮೂರ್ತಿ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಸೋಮವಾರ ತಾಲೂಕಿನಾದ್ಯಂತ ವಿವಿಧ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಭಜನೆ, ಕೀರ್ತನೆ, ಉಪನ್ಯಾಸ, ಯುವಕರ ರ್ಯಾಲಿ ಜರುಗಿದವು.
ಪಟ್ಟಣದ ಗೋಪಾಲಸ್ವಾಮಿ, ಈಶ್ವರ, ಅಂಬಾಭವಾನಿ, ದುರಗಮ್ಮ, ಕಾಳಿಕಾದೇವಿ ದೇವಸ್ಥಾನ, ಅನೇಕ ವಾರ್ಡ ಹನುಮಾನ್ ಮಂದಿರಗಳಲ್ಲಿ ವಿಶೇಷ ಪೂಜೆ ಜರುಗಿದವು.
ಪಟ್ಟಣದ ಕೆಇಬಿ ರಸ್ತೆಯಲ್ಲಿರುವ ಶ್ರೀ ಹನುಮಾನ ದೇವಸ್ಥಾನದಲ್ಲಿ ಹೋಮ, ಹವನ ಜರುಗಿದವು. ಬಳಿಕ ಶ್ರೀರಾಮನ ಕುರಿತು ಏರ್ಪಡಿಸಿದ್ದ ಭಾಷಣ, ಪ್ರಬಂಧ, ರಂಗೊಲಿ, ಚಿತ್ರ ಪ್ರದರ್ಶನ, ವೇಷ ಭೂಷಣಗಳ ಸ್ಪರ್ಧೆಗಳಲ್ಲಿ ವಿಜೇತ ಮಕ್ಕಳಿಗೆ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು.ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಬ್ಯಾನರ್, ಧ್ವಜ ಭರಾಟೆ ಜೋರಾಗಿತ್ತು. ಯುವಕರು ತಮ್ಮ ವಾಹನಗಳಿಗೆ ಧ್ವಜ ಕಟ್ಟಿಕೊಂಡು ತಿರುಗಾಡುವ ದೃಶ್ಯ ಸಾಮಾನ್ಯವಾಗಿತ್ತು. ಯುವಕರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಇಡೀ ಪಟ್ಟಣದ ಹಸಿರು - ತೋರಣಗಳಿಂದ ಅಲಂಕೃತಗೊಂಡು ಹಬ್ಬದ ವಾತಾವರಣ ಕಂಡು ಬಂತು.