ಸಿದ್ದು, ಡಿಕೆಶಿ ಖುದ್ದು ಕೋರ್ಟ್‌ಗೆ ಹಾಜರು

KannadaprabhaNewsNetwork |  
Published : Jun 02, 2024, 01:46 AM ISTUpdated : Jun 02, 2024, 05:09 AM IST
ನ್ಯಾಯಾಲಯದ ವಿಚಾರಣೆಗೆ ಹಾಜರಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್. | Kannada Prabha

ಸಾರಾಂಶ

ನ್ಯಾಯಾಲಯದಿಂದ ಜಾಮೀನು ಮಂಜೂರು ಮಾಡಲಾಗಿದೆ.

 ಬೆಂಗಳೂರು :     ಭ್ರಷ್ಟಾಚಾರದ ಕುರಿತು ದಿನಪತ್ರಿಕೆಗಳಿಗೆ ಸುಳ್ಳು ಜಾಹೀರಾತು ನೀಡಿ ಬಿಜೆಪಿ ವರ್ಚಸ್ಸಿಗೆ ಧಕ್ಕೆ ತಂದ ಆರೋಪ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಶನಿವಾರ ಜನಪ್ರತಿನಿಧಿಗಳ ವಿರುದ್ಧದ ಪ್ರಕರಣಗಳ ವಿಶೇಷ ನ್ಯಾಯಾಲಯಕ್ಕೆ ಖುದ್ದು ಹಾಜರಾಗಿ ಜಾಮೀನು ಪಡೆದುಕೊಂಡರು. ಕೋರ್ಟ್‌ ಹಾಲ್‌ನ ಹೊರಗೆ ಇಬ್ಬರೂ ಬೆಂಚ್‌ ಮೇಲೆ ಕುಳಿತಿದ್ದರು. ಇದೇ ಪ್ರಕರಣದಲ್ಲಿ ರಾಹುಲ್‌ ಗಾಂಧಿ ಅವರಿಗೂ ಸಮನ್ಸ್‌ ನೀಡಲಾಗಿದ್ದು, ಅವರು ವಿಚಾರಣೆಗೆ ಹಾಜರಾಗಿರಲಿಲ್ಲ.

ರಾಹುಲ್‌ ಗಾಂಧಿ ಅವರು ಮೂರನೇ ಸಮನ್ಸ್‌ಗೂ ನ್ಯಾಯಾಲಯಕ್ಕೆ ಹಾಜರಾಗದ ಹಿನ್ನೆಲೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಾಧೀಶರು ವಿಚಾರಣೆಯನ್ನು ಜೂ.7ಕ್ಕೆ ಮುಂದೂಡಿದರು.

ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೇಶವ್‌ ಪ್ರಸಾದ್‌ ಅವರು ಸಲ್ಲಿಸಿದ್ದ ಮಾನನಷ್ಟ ಖಾಸಗಿ ದೂರಿನ ವಿಚಾರಣೆ ನಡೆಸಿದ ನ್ಯಾಯಾಲಯ, ಮೂವರು ಆರೋಪಿಗಳ ಹಾಜರಾತಿಗೆ ಸಮನ್ಸ್ ಜಾರಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಶನಿವಾರ ನ್ಯಾಯಾಲಯಕ್ಕೆ ಹಾಜರಾಗಿ ಜಾಮೀನು ಪಡೆದುಕೊಂಡರು. ಆದರೆ, ರಾಹುಲ್ ಗಾಂಧಿ ವಿಚಾರಣೆಗೆ ಹಾಜರಾಗಿರಲಿಲ್ಲ.

ರಾಹುಲ್ ಗಾಂಧಿ ಪರ ವಕೀಲ ನಿಶಿತ್ ಶೆಟ್ಟಿ ಹಾಜರಾಗಿ, ಜೂ.4ಕ್ಕೆ ಲೋಕಸಭಾ ಚುನಾವಣೆಯ ಫಲಿತಾಂಶವಿದೆ. ಇಂದು ದಿಲ್ಲಿಯಲ್ಲಿ ಇಂಡಿಯಾ ಒಕ್ಕೂಟದ ಸಭೆ ನಡೆಯುತ್ತಿರುವ ಕಾರಣ ರಾಹುಲ್ ಗಾಂಧಿ ಅವರ ಹಾಜರಾತಿಗೆ ವಿನಾಯಿತಿ ನೀಡಬೇಕು. ಮುಂದಿನ ವಿಚಾರಣೆಗೆ ಅವರು ಹಾಜರಾಗುತ್ತಾರೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು. ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಾಧೀಶರು, ಇಂದೇ ಬಂದು ಪ್ರಕ್ರಿಯೆ ಮುಗಿಸಿಕೊಂಡು ಹೋಗಬಹುದಿತ್ತು. ದೆಹಲಿಗೆ ತೆರಳಲು 5 ದಿನಗಳು ಬೇಕಾಗುವುದಿಲ್ಲವಲ್ಲಾ? ಎಂದರು.

ಇದೇ ವೇಳೆ, ರಾಹುಲ್ ಗಾಂಧಿ ಗೈರು ಹಾಜರಿ ಕುರಿತು ಆಕ್ಷೇಪ ವ್ಯಕ್ತಪಡಿಸಿದ ಕೇಶವ್ ಪ್ರಸಾದ್ ಪರ ವಕೀಲ ವಿನೋದ್ ಕುಮಾರ್, ಆರೋಪಿತರು ಉದ್ದೇಶಪೂರ್ವಕವಾಗಿ ವಿಚಾರಣೆಗೆ ಗೈರು ಹಾಜರಾಗುತ್ತಿದ್ದಾರೆ. ಪ್ರತಿ ಬಾರಿ ಮೀಟಿಂಗ್ ಎಂದರೆ ಹೇಗೆ? ನ್ಯಾಯಾಲಯ ಸಮನ್ಸ್ ನೀಡಿದಾಗ ಹಾಜರಾಗಬೇಕು. ಕಾನೂನಿನ ಮುಂದೆ ಎಲ್ಲರೂ ಸಮಾನರು. ಮುಂದೆ ಈ ರೀತಿ ಗೈರು ಹಾಜರಿಯನ್ನು ತಡೆಯಲು ವಾರೆಂಟ್ ಜಾರಿ ಮಾಡಬೇಕೆಂದು ಮನವಿ ಮಾಡಿದರು.ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ರಾಹುಲ್ ಗಾಂಧಿ ಪರ ವಕೀಲರು, ಆ ಸಂದರ್ಭದಲ್ಲಿ ರಾಹುಲ್ ಗಾಂಧಿ ಪ್ರಮುಖ ಹುದ್ದೆಯಲ್ಲಿ ಇರಲಿಲ್ಲ.

 ಕೇವಲ ಜಾಹೀರಾತಿನಲ್ಲಿ ಫೋಟೋ ಪ್ರಕಟಿಸಿದ ಆಧಾರದ ಮೇಲೆ ಪ್ರಕರಣದಲ್ಲಿ ಪ್ರತಿವಾದಿ ಮಾಡಲಾಗಿದೆ. ಅಲ್ಲದೆ, ಖಾಸಗಿ ದೂರುಗಳಿಗೆ ವಾರೆಂಟ್ ಅಗತ್ಯವಿಲ್ಲವೆಂದು ಸುಪ್ರೀಂಕೋರ್ಟ್ ಹೇಳಿರುವ ಕುರಿತಾದ ಆದೇಶದ ಪ್ರತಿಯನ್ನು ನ್ಯಾಯಾಲಯದ ಅವಗಾಹನೆಗೆ ತಂದರು.

ಬೆಂಚ್ ಮೇಲೆ ಕುಳಿತ ನಾಯಕರು: ಪ್ರಕರಣದ ವಿಚಾರಣೆಯ ಪೂರ್ವದಲ್ಲೇ ಇಬ್ಬರು ನಾಯಕರು ಕೋರ್ಟ್‌ನ ಹಾಲ್‌ನಲ್ಲಿ ಉಪಸ್ಥಿತರಿದ್ದರು. ಇವರ ಹಾಜರಾತಿ ಕುರಿತು ವಕೀಲರು ನೀಡಿದ ಮಾಹಿತಿಯನ್ನು ದಾಖಲಿಸಿಕೊಂಡ ನ್ಯಾಯಾಧೀಶರು, ಹೊರಗೆ ಹೋಗಬಹುದು ಎಂದು ಸೂಚಿಸಿದರು. ಬಾಂಡ್ ಪತ್ರಗಳಿಗೆ ಸಹಿ ಹಾಕಿದ ನಾಯಕರು, ಹಾಲ್ ನ ಹೊರಭಾಗದ ಬೆಂಚ್ ನ ಮೇಲೆ ಕೆಲ ನಿಮಿಷ ಕುಳಿತು, ಪರಿಚಿತರೊಂದಿಗೆ ಲಘು ಕುಶಲೋಪರಿ ನಡೆಸಿ, ನಿರ್ಗಮಿಸಿದರು.

ನಾವು ಕಾನೂನು ಪಾಲಕರು: ಸಿದ್ದರಾಮಯ್ಯ

ಬಳಿಕ, ನ್ಯಾಯಾಲಯದ ಆವರಣದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸಿದ್ದರಾಮಯ್ಯ, ಇದು ಸಿವಿಲ್ ಸ್ವರೂಪದ ಪ್ರಕರಣ. ಕಾನೂನು ರಕ್ಷಕರಾಗಿ, ಪಾಲಕರಾಗಿ ನ್ಯಾಯಾಲಯಕ್ಕೆ ಹಾಜರಾಗಿದ್ದೇನೆ. ಜಾಮೀನು ಪಡೆದಿದ್ದೇನೆ. ರಾಹುಲ್ ಗಾಂಧಿಯವರೂ ನ್ಯಾಯಾಲಯಕ್ಕೆ ಹಾಜರಾಗುತ್ತಾರೆ ಎಂದು ಹೇಳಿದರು.

ಡಿ.ಕೆ.ಶಿವಕುಮಾರ್‌ ಮಾತನಾಡಿ, ನಾವು ಸುಮ್ಮನೆ ಇದ್ದರೆ ಭ್ರಷ್ಟ ಬಿಜೆಪಿಯವರು ತಾವಾಗಿಯೇ ಕೇಸ್‌ ದಾಖಲಿಸುವಂತೆ ನಮ್ಮನ್ನು ಆಹ್ವಾನಿಸುತ್ತಿದ್ದಾರೆ. ಹೀಗಾಗಿ, ನಾವು ಏನು ಎನ್ನುವುದನ್ನು ಅವರಿಗೆ ತೋರಿಸುತ್ತೇವೆ. ಈ ಪ್ರಕರಣದಲ್ಲಿ ಶಾಸಕ ಬಸವನಗೌಡ ಪಾಟೀಲ್‌ ಯತ್ನಾಳ್ ನೀಡಿರುವ ಹೇಳಿಕೆಗಳು ದಿನಪತ್ರಿಕೆಗಳಲ್ಲಿ ಪ್ರಕಟವಾಗಿರುವ ಆಧಾರದ ಮೇಲೆ ಜಾಹೀರಾತು ನೀಡಲಾಗಿತ್ತು ಎಂದು ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ