ಸರ್ಕಾರ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರ ಅವಧಿ ವಿಸ್ತರಣೆ ಮಾಡಿದೆ, ಲೋಕ ಚುನಾವಣೆವರೆಗೆ ಇದನ್ನು ಮುಂದೆ ತೆಗೆದುಕೊಂಡು ಹೋಗುವ ಯೋಚನೆ ಮಾಡಿದಂತಿದೆ. ಆಯೋಗದ ವರದಿಯ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದೆ ಹಿಂದುಳಿದ ವರ್ಗ, ದಲಿತ, ಪರಿಶಿಷ್ಟರನ್ನು ಕತ್ತಲಲ್ಲಿಡುವ ಕೆಲಸ ಮಾಡುತ್ತಿದೆ. ಸಿಎಂ ಸಿದ್ದರಾಮಯ್ಯರ ಈ ನಿಲುವು ಖಂಡಿಸುತ್ತೇನೆ ಎಂದು ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಕನ್ನಡಪ್ರಭ ವಾರ್ತೆ ಉಡುಪಿ
ಸಿದ್ದರಾಮಯ್ಯ ಸರ್ಕಾರದ ಶೈಲಿ ಜನರಲ್ಲಿ ಗೊಂದಲ ಮೂಡಿಸುತ್ತಿದೆ. ಕಾಂತರಾಜು ವರದಿ ಸಿದ್ಧವಾಗಿದೆ, ಅದಕ್ಕೆ 150 ಕೋಟಿ ರು. ಖರ್ಚಾಗಿದೆ. ಅದನ್ನೀಗ ಸಮಾವೇಶ ಮಾಡಿ ಅಂಗೀಕರಿಸುವ ಅವಶ್ಯಕತೆ ಇದೆಯಾ ? ವರದಿ ಬಿಡುಗಡೆಗೆ ಪ್ರಚಾರದ ಅವಶ್ಯಕತೆ ಇದೆಯಾ ಎಂದು ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಪ್ರಶ್ನಿಸಿದ್ದಾರೆ.
ಅವರು ಮಂಗಳವಾರ, ಉಡುಪಿಯಲ್ಲಿನ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಸರ್ಕಾರ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರ ಅವಧಿ ವಿಸ್ತರಣೆ ಮಾಡಿದೆ, ಲೋಕ ಚುನಾವಣೆವರೆಗೆ ಇದನ್ನು ಮುಂದೆ ತೆಗೆದುಕೊಂಡು ಹೋಗುವ ಯೋಚನೆ ಮಾಡಿದಂತಿದೆ. ಆಯೋಗದ ವರದಿಯ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದೆ ಹಿಂದುಳಿದ ವರ್ಗ, ದಲಿತ, ಪರಿಶಿಷ್ಟರನ್ನು ಕತ್ತಲಲ್ಲಿಡುವ ಕೆಲಸ ಮಾಡುತ್ತಿದೆ. ಸಿಎಂ ಸಿದ್ದರಾಮಯ್ಯರ ಈ ನಿಲುವು ಖಂಡಿಸುತ್ತೇನೆ ಎಂದರು.
ಏಕವಚನ ಬಳಕೆ ಸರಿಯಾ?: ಸಿಎಂ ಸಿದ್ದರಾಮಯ್ಯನವರು ರಾಷ್ಟ್ರಪತಿಯವರಿಗೆ ಏಕವಚನ ಪ್ರಯೋಗಿಸಿ, ನಂತರ ಸ್ಪಷ್ಟಿಕರಣ ಕೊಟ್ಟಿದ್ದಾರೆ. ಆದರೆ ಸಿದ್ದರಾಮಯ್ಯ ನೀವು ಕಾಂಗ್ರೆಸ್ ನಾಯಕರಾದ ಸೋನಿಯಾ, ರಾಹುಲ್ ಗಾಂಧಿಯವರನ್ನು ಏಕವಚನದಲ್ಲಿ ಕರೆದಿದ್ದಾರಾ? ಬುಡಕಟ್ಟು ಸಮುದಾಯದ ಮಹಿಳೆ ಎಂಬ ಕಾರಣಕ್ಕೆ ಈ ರೀತಿ ಮಾತನಾಡುವುದು ಸರಿಯಾ ಎಂದು ಪ್ರಶ್ನಿಸಿದ ಕೋಟ, ಹಿಂದೆ ಅಹಿಂದ ನಾಯಕ ಆಗಿದ್ದ ಸಿದ್ದರಾಮಯ್ಯ ಈಗ ಅಲ್ಪಸಂಖ್ಯಾತ ನಾಯಕ ಆಗಿದ್ದಾರೆ ಎಂದು ಟೀಕಿಸಿದರು.
ಹಿಂ.ವ.ಕ್ಕೆ ಹಣ ಯಾಕಿಲ್ಲ?: ಹಿಂದುಳಿದ ಮಕ್ಕಳ ವಿದ್ಯಾರ್ಥಿ ವೇತನ, ಹಾಸ್ಟೆಲ್ ಸ್ಥಗಿತ ಮಾಡಿ, ಸವಲತ್ತು ಕೊಡುತ್ತಿಲ್ಲ. ಅಲ್ಪಸಂಖ್ಯಾತರರಿಗೆ 10 ಸಾವಿರ ಕೋಟಿ ಬಿಡುಗಡೆ ಮಾಡ್ತೀರಿ, ಬರಕ್ಕೆ, ಹಿಂದುಳಿದ ದಲಿತರಿಗೆ ಯಾವ ಸವಲತ್ತು ಕೊಡುತ್ತಿಲ್ಲ. ಸಿದ್ದರಾಮಯ್ಯ ಸರ್ಕಾರ ಅಹಂಕಾರದ ಪರಾಕಾಷ್ಠೆ ಮುಟ್ಟಿದೆ ಎಂದರು.
ಗ್ಯಾರಂಟಿ ವಿಫಲವಾಗಿದೆ: ರಾಜ್ಯದಲ್ಲಿ ಯುವನಿಧಿಗೆ ಅರ್ಹರಾದ 40 ಲಕ್ಷ ಯುವ ಜನಾಂಗ ಇದೆ. ಆದರೆ ಕಾಂಗ್ರೆಸ್ ಸರ್ಕಾರ ಫಲಾನುಭವಿಗಳನ್ನು 4 ಲಕ್ಷಕ್ಕೆ ಸೀಮಿತ ಮಾಡಿದೆ. ಯುವನಿಧಿಗೆ 10 ಸಾವಿರ ಕೋಟಿ ಮೀಸಲು ಇಡಬೇಕಿತ್ತು, ಕೇವಲ 500 ಕೋಟಿಗೆ ಸೀಮಿತಗೊಳಿಸಿದೆ. ಈ ಯುವನಿಧಿ ಗ್ಯಾರಂಟಿ ವಿಫಲವಾಗಿದೆ ಎಂದರು.
ರಾಜ್ಯದಲ್ಲಿ 64 ಸಾವಿರ ಮಕ್ಕಳು ಹಾಸ್ಟೆಲ್ ಸೌಲಭ್ಯ ಇಲ್ಲದೆ, ಮನೆಯಿಂದ ದೂರದ ಶಾಲಾ ಕಾಲೇಜಿಗೆ ನಿತ್ಯ ಓಡಾಡುತ್ತಿದ್ದಾರೆ. ಸರ್ಕಾರಕ್ಕೆ ಈ ಬಗ್ಗೆ ಕಾಳಜಿಯೇ ಇಲ್ಲ ಎಂದು ಕೋಟ ಅಸಮಾಧಾನ ವ್ಯಕ್ತಪಡಿಸಿದರು. ರಾಮ ಭಕ್ತರು ವರ್ಸಸ್ ಟಿಪ್ಪು ಭಕ್ತರ ಹೋರಾಟ!
ಪಂಚಾಯಿತಿ ಅನುಮತಿ ಪಡೆದ ಖಾಸಗಿ ಟ್ರಸ್ಟ್ ಧ್ವಜ ಸ್ತಂಭ ರಚಿಸಿ ಹನುಮಧ್ವಜ ಹಾರಿಸಿತ್ತು. ಅದರಲ್ಲಿ ಕಾನೂನು ನಿಯಮ ಉಲ್ಲಂಘನೆಯಾಗಿದ್ದರೆ ನೋಟಿಸ್ ಕೊಡಬೇಕಿತ್ತು. ಅದನ್ನು ಬಿಟ್ಟು ಕಾಂಗ್ರೆಸ್ ಸರ್ಕಾರ ಮಹಿಳೆಯರು ಮಕ್ಕಳು ಎಂಬುದನ್ನ ನೋಡದೆ ಲಾಠಿಚಾರ್ಜ್ ಮಾಡಿದೆ. ಅರ್ಧ ರಾತ್ರಿಗೆ ಧ್ವಜ ಇಳಿಸಿ ಹಿಂದೂಗಳಿಗೂ ರಾಮಭಕ್ತರಿಗೆ ಅವಮಾನ ಮಾಡಿದೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಕೋಟ ಶ್ರೀನಿವಾಸ ಪೂಜಾರಿ. ಮನೆಮನೆಯಲ್ಲಿ ಧ್ವಜ ಹಾರಿಸ್ತೇವೆ, ಧೈರ್ಯ ಇದ್ದರೆ ತಡೆಯಿರಿ, ರಾಮ ಭಕ್ತರಿಗೂ, ಟಿಪ್ಪು ಭಕ್ತರಿಗೂ ನಡುವಿನ ಹೋರಾಟ ಇದು ಎಂದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.