ಗದಗ: ಸಿಎಂ ಸಿದ್ದರಾಮಯ್ಯ ಅವರು ಮುಂದಿನ ಚುನಾವಣೆಗೆ ಸ್ಪರ್ಧಿಸಲ್ಲ ಅಂತಾರೆ. ಅವರ ಹಿಂಬಾಲಕರಿಂದ ನಿಲ್ಲುವಂತೆ ಹೇಳಿಕೆ ನೀಡಿಸುತ್ತಾರೆ. ಒಮ್ಮೆ ನಿಲ್ಲುವುದಿಲ್ಲ ಅಂತಾರೆ. ಬೇರೆಯವರು ಒತ್ತಾಯ ಮಾಡುತ್ತಾರೆ ಎನ್ನುತ್ತಲೇ ಸಿಎಂ ಸಿದ್ದರಾಮಯ್ಯ 2028ಕ್ಕೆ ಮತ್ತೆ ಸ್ಪರ್ಧಿಸುತ್ತಾರೆ. ಸಿಎಂ ಅವರು ಹೇಳೊದೊಂದು ಮಾಡೊದೊಂದು ಎನ್ನುವುದಕ್ಕೆ ಇದು ಸ್ಪಷ್ಟ ಉದಾಹರಣೆ ಎಂದು ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ಟೀಕಿಸಿದರು.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಸಚಿವ ಸಂಪುಟ ಸದಸ್ಯರು ಹಾಗೂ ಅಧಿಕಾರಿಗಳ ಮೇಲೆ ತಮ್ಮ ನಿಯಂತ್ರಣ ಕಳೆದುಕೊಂಡಿದ್ದಾರೆ. ಎರಡೂವರೆ ವರ್ಷದಲ್ಲಿ ಒಂದೂ ಅಭಿವೃದ್ಧಿ ಕೆಲಸವಾಗಿಲ್ಲ. ಯಾವ ಪುರುಷಾರ್ಥಕ್ಕೆ ಈ ಎರಡೂವರೆ ವರ್ಷ ಅವಧಿ ಮುಗಿಸಿದರು ಎಂಬುದು ಜನತೆಗೆ ಹೇಳಬೇಕು ಎಂದರು.ನವೆಂಬರ್ ಕ್ರಾಂತಿ ಭ್ರಾಂತಿ ನೋಡಿದರೆ ಸರ್ಕಾರದ ಮೇಲೆ ಕರ್ನಾಟಕದ ಜನತೆಗೆ ಭ್ರಾಂತಿಯಾಗುತ್ತಿದೆ. ಕಾಂಗ್ರೆಸ್ಸಿನವರು ಆಡಳಿತವನ್ನೇ ಮರೆತುಬಿಟ್ಟಿದ್ದಾರೆ. ಅಭಿವೃದ್ಧಿಯಂತೂ ಮರೀಚಿಕೆಯಾಗಿದೆ. ಹಣಕಾಸು ವ್ಯವಸ್ಥೆ ಸರಿ ಇಲ್ಲ. ಹೀಗಾಗಿ ಡ್ರಾಮಾ ಮಾಡಿಕೊಂಡು ಹೊರಟಿದ್ದಾರೆ. ಸಿಎಂ ಸಿದ್ದರಾಮಯ್ಯ ಒಂದು ಹೇಳಿದರೆ, ಡಿಸಿಎಂ ಡಿ.ಕೆ. ಶಿವಕುಮಾರ್ ಅದಕ್ಕೆ ತದ್ವಿರುದ್ಧವಾಗಿ ಹೇಳುತ್ತಾರೆ. ಮಂತ್ರಿಗಳು ಇನ್ನೊಂದು ರೀತಿಯ ಹೇಳಿಕೆ ನೀಡುತ್ತಾರೆ ಎಂದರು.
ಹಣ ಕಳುಹಿಸುವ ಪರಂಪರೆ: ಬಿಹಾರ ಚುನಾವಣೆಗೆ ರಾಜ್ಯದಿಂದ ಹಣ ಸಂದಾಯವಾಗುತ್ತಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ರಾಜ್ಯದಲ್ಲಿದ್ದಾಗ ಯಾವಾಗಲೂ ಇಲ್ಲಿಂದ ಹಣ ಕಳಿಸುವ ಪರಂಪರ ಇದೆ. ತೆಲಂಗಾಣ ರಾಜ್ಯದಲ್ಲೂ ದುಡ್ಡಿಲ್ಲ. ಕಾಂಗ್ರೆಸ್ಸಿನವರಿಗೆ ಕರ್ನಾಟಕ ಹಿಂಡುವ ಆಕಳಾಗಿದೆ ಎಂದರು.ರಾಜ್ಯದಲ್ಲಿ ದಲಿತ ಸಿಎಂ ಆಗಬೇಕು ಎಂಬ ಕೂಗು ಕೇಳಿ ಬರುತ್ತಿರುವ ವಿಚಾರವಾಗಿ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ದಲಿತ ಸಿಎಂ ಆಗಲಿ ಅದಕ್ಕೆ ಸಂತೋಷ. ಆದರೆ, ಇದ್ದ ಸಿಎಂ ಅವರೇ ಕೆಲಸ ಮಾಡುತ್ತಿಲ್ಲ. ಕರ್ನಾಟಕದ ಹಣೆಬರಹ ಕಾಂಗ್ರೆಸ್ ಕೈಯಲ್ಲಿ ಎಂದೆಂದೂ ಉದ್ಧಾರವಾಗಲು ಸಾಧ್ಯವಿಲ್ಲ ಎಂದರು.