ಕುಂದಗೋಳ: ಸಮಾಜದ ಜನತೆ ಇನ್ನೊಬ್ಬರನ್ನು ನೋಡಿ ಬದುಕು ಕಟ್ಟಿಕೊಳ್ಳದೆ, ತಾನೇ ಚಿಂತನೆ ಮಾಡಿ ಜೀವನ ರೂಪಿಸಿಕೊಳ್ಳುವ ಅಗತ್ಯತೆಯಿದೆ ಎಂದು ಶಿರೊಂಜ ಗ್ರಾಮ ಜ್ಞಾನಯೋಗಾಶ್ರಮದ ಶ್ರೀ ಬಸವ ಸಮರ್ಥ ಮಹಾಸ್ವಾಮಿಗಳು ಹೇಳಿದರು.
ಒಳ್ಳೆಯ ವಾತಾವರಣ ಇರಬೇಕು.ಅದಕ್ಕೆ ಅನುಭವಿ ಗುರುವಿನ ಮಾರ್ಗದರ್ಶನದ ಅವಶ್ಯಕತೆಯಿದೆ. ಗುರು ದೊಡ್ಡವನಲ್ಲ, ಶಿಷ್ಯನೂ ದೊಡ್ಡವನಾಗಬೇಕೆಂಬ ಅಭಿಲಾಷೆ ಶ್ರೀಸಿದ್ದೇಶ್ವರ ಮಹಾಸ್ವಾಮೀಜಿ ಹೊಂದಿದ್ದರು. ಬೈದರೂ ಅಷ್ಟೇ, ವರ್ಣಿಸಿದರೂ ಅಷ್ಟೇ ತನ್ನಷ್ಟಕ್ಕೆ ತಾನು ಬದುಕಬೇಕೆಂಬ ಸಂದೇಶ ಶ್ರೀಗಳು ಸಮಾಜದ ಜನರಿಗೆ ನೀಡಿದರು. ಅವರ ಸಂದೇಶ ನಮಗೆ ದಾರಿದೀಪ ಎಂದರು.
ಮುಖ್ಯ ಅತಿಥಿಗಳಾಗಿದ್ದ ಪ್ರಾಚಾರ್ಯ ಎಸ್.ಬಿ. ಸೊರಟೂರ, ಶ್ರೀ ಸಿದ್ದೇಶ್ವರ ಶ್ರೀಗಳು ಜನರ ಬದುಕಿನಲ್ಲಿ ಬೆಳಕನ್ನು ತರಲು ಯತ್ನಿಸಿದ ಮಹಾ ಪುರುಷರು ಅವರ ನಡೆ-ನುಡಿ ಒಂದೇ ಆಗಿತ್ತು. ನಾವಿಂದು ಭೌತಿಕ ಜಗತ್ತಿನತ್ತ ವಾಲುತ್ತಿದ್ದೇವೆ. ಈ ಕಾಲಕ್ಕೆ ಸಿದ್ದೇಶ್ವರ ಶ್ರೀಗಳು ನೀಡಿದ ಸಂದೇಶ ಜೀವನಕ್ಕೆ ದಾರಿದೀಪ ಎಂದು ಬಣ್ಣಿಸಿದರು.ನ್ಯಾಯವಾದಿ ಕವಿತಾ ರಮೇಶ ಮಾತನಾಡಿ, ಶ್ರೀ ಸಿದ್ದೇಶ್ವರರು ಜನಮಾನಸದ ದೇವರಾಗಿದ್ದರು. ಅವರ ಚಿಂತನೆ ಮುಂದಿನ ಪೀಳಿಗೆಗೆ ತಿಳಿಸುವ ಅಗತ್ಯವಿದೆ ಎಂದರು.