ಉತ್ತರ ಕನ್ನಡ, ಶಿವಮೊಗ್ಗ ಕಬಡ್ಡಿ ತಂಡಗಳಿಗೆ ಸಿದ್ಧಗಂಗಾ ಕಪ್

KannadaprabhaNewsNetwork |  
Published : Feb 18, 2026, 02:00 AM IST
0000 | Kannada Prabha

ಸಾರಾಂಶ

ಸಿದ್ಧಗಂಗಾ ಮಠದಲ್ಲಿ ಮೂರು ದಿನಕಾಲ ನಡೆದ ರಾಜ್ಯಮಟ್ಟದ ಹೊನಲು ಬೆಳಕಿನ ಪಂದ್ಯಾವಳಿಯಲ್ಲಿ ಪುರುಷರ ವಿಭಾಗದಲ್ಲಿ ಉತ್ತರ ಕನ್ನಡ ಜಿಲ್ಲೆ ತಂಡ ಹಾಗೂ ಮಹಿಳೆಯರ ವಿಭಾಗದಲ್ಲಿ ಶಿವಮೊಗ್ಗ ತಂಡ ಅಂತಿಮ ಹಣಾಹಣಿಯಲ್ಲಿ ಶ್ರೇಷ್ಠ ಪ್ರದರ್ಶನ ನೀಡಿ ಪ್ರಥಮ ಸ್ಥಾನ ಪಡೆದು ನಗದು ಬಹುಮಾನದೊಂದಿಗೆ ಸಿದ್ಧಗಂಗಾ ಕಪ್ ಗೆದ್ದು ಬೀಗಿದವು.

ಕನ್ನಡಪ್ರಭ ವಾರ್ತೆ, ತುಮಕೂರು

ಸಿದ್ಧಗಂಗಾ ಮಠದಲ್ಲಿ ಮೂರು ದಿನಕಾಲ ನಡೆದ ರಾಜ್ಯಮಟ್ಟದ ಹೊನಲು ಬೆಳಕಿನ ಪಂದ್ಯಾವಳಿಯಲ್ಲಿ ಪುರುಷರ ವಿಭಾಗದಲ್ಲಿ ಉತ್ತರ ಕನ್ನಡ ಜಿಲ್ಲೆ ತಂಡ ಹಾಗೂ ಮಹಿಳೆಯರ ವಿಭಾಗದಲ್ಲಿ ಶಿವಮೊಗ್ಗ ತಂಡ ಅಂತಿಮ ಹಣಾಹಣಿಯಲ್ಲಿ ಶ್ರೇಷ್ಠ ಪ್ರದರ್ಶನ ನೀಡಿ ಪ್ರಥಮ ಸ್ಥಾನ ಪಡೆದು ನಗದು ಬಹುಮಾನದೊಂದಿಗೆ ಸಿದ್ಧಗಂಗಾ ಕಪ್ ಗೆದ್ದು ಬೀಗಿದವು.

ಸಿದ್ಧಗಂಗಾ ಮಠದ ಸಿದ್ಧಲಿಂಗೇಶ್ವರ ಜಾತ್ರೆ ಅಂಗವಾಗಿ ಜಿಲ್ಲಾ ಅಮೇಚೂರ್ ಕಬಡ್ಡಿ ಅಸೋಸಿಯೇಷನ್ ಸಹಕಾರದಲ್ಲಿ ನಗರದ ಸಿದ್ಧಗಂಗಾ ಸ್ಪೋರ್ಟ್ಸ್ ಅಸೋಸಿಯೇಷನ್ ಮಠದಲ್ಲಿ ಹಮ್ಮಿಕೊಂಡಿದ್ದ ಕಬಡ್ಡಿ ಪಂದ್ಯಾವಳಿಯಲ್ಲಿ ಶಿವರಾತ್ರಿಯ ರಾತ್ರಿ ನಡೆದ ಅಂತಿಮ ಪಂದ್ಯಗಳಲ್ಲಿ ಎದುರಾಳಿ ತಂಡಕ್ಕೆ ಪ್ರಬಲ ಪೈಪೋಟಿ ನೀಡಿ ಪುರುಷರ ಶಿವಮೊಗ್ಗ ತಂಡ ಹಾಗೂ ಮಹಿಳೆಯರ ಚಿಕ್ಕಮಗಳೂರು ತಂಡಗಳು ಎರಡನೇ ಸ್ಥಾನ ಗಳಿಸಿ ಬಹುಮಾನ ಹಾಗೂ ಆಕರ್ಷಕ ಟ್ರೋಫಿ ಸ್ವೀಕರಿಸಿದವು. ಪಂದ್ಯಾವಳಿಯಲ್ಲಿ ಪುರುಷರ 20 ಹಾಗೂ ಮಹಿಳೆಯರ 4 ತಂಡಗಳು ಭಾಗವಹಿಸಿದ್ದವು.

ಪಂದ್ಯಾವಳಿಯ ಸಮಾರೋಪ ಸಮಾರಂಭದ ದಿವ್ಯಸಾನಿಧ್ಯವಹಿಸಿ ಮಾತನಾಡಿದ ಸಿದ್ಧಗಂಗಾ ಮಠದ ಶಿವಸಿದ್ಧೇಶ್ವರ ಸ್ವಾಮೀಜಿ, ಭಾರತೀಯ ಶಿಕ್ಷಣ ವ್ಯವಸ್ಥೆಯಲ್ಲಿ ಪ್ರತಿ ವ್ಯಕ್ತಿಯೂ ಬೌದ್ಧಿಕವಾಗಿ, ಮಾನಸಿಕವಾಗಿ ಹಾಗೂ ದೈಹಿಕವಾಗಿ ಶಿಕ್ಷಣ ಪಡೆಯಬೇಕು. ಈ ಮೂರರಲ್ಲೂ ಸಮರ್ಥ ಶಿಕ್ಷಣ ಪಡೆದರೆ ಅದು ಪರಿಪೂರ್ಣ ಶಿಕ್ಷಣವಾಗುತ್ತದೆ. ಪಠ್ಯಪುಸ್ತಕದಲ್ಲಿರುವ ಮಾಹಿತಿಯ ಪ್ರಶ್ನೆಗಳಿಗೆ ಉತ್ತರ ನೀಡುವುದಷ್ಟೇ ಶಿಕ್ಷಣವಲ್ಲ ಎಂದು ಹೇಳಿದರು.

ದೈಹಿಕ ಶಿಕ್ಷಣ ಪಡೆಯಲು ಕ್ರೀಡಾ ಚಟುವಟಿಕೆಗಳು ಮಹತ್ತರವಾಗಿವೆ. ವಿಶೇಷವಾಗಿ ನಮ್ಮ ದೇಸೀಯ ಆಟ ಕಬಡ್ಡಿ ಪ್ರೇರಣಾಪೂರ್ಣ ಆಟವಾಗಿದೆ. ಸೋಲು-ಗೆಲುವು ಕ್ರೀಡೆಯ ಅಂಗ. ಸೋಲು, ಗೆಲುವಿಗಿಂಥ ಆಟದಲ್ಲಿ ಉತ್ತಮ ಪ್ರದರ್ಶನ ತೋರುವುದು ಮುಖ್ಯವಾಗಬೇಕು. ಸೋಲು ಇನ್ನೊಂದು ಗೆಲುವಿನ ಅವಕಾಶಕ್ಕೆ ಹಾತೊರೆಯಬೇಕು. ಗೆಲುವು ಮತ್ತಷ್ಟು ಸಾಧನೆಗೆ ಪ್ರೇರಣೆ ಆಗಬೇಕು. ಯಾವುದೇ ಕ್ಷೇತ್ರದಲ್ಲೇ ಆಗಲಿ ಒಂದು ಗೆಲುವು ಅಂತಿಮವಲ್ಲ, ಸತತ ಶ್ರಮ, ಪರಿಶ್ರಮದಿಂದ ಗೆಲುವುಗಳನ್ನು ಪಡೆಯುತ್ತಾ ಹೋಗಬೇಕು ಎಂದು ಶಿವಸಿದ್ಧೇಶ್ವರ ಸ್ವಾಮೀಜಿ ಕ್ರೀಡಾಪಟುಗಳಿಗೆ ಕಿವಿಮಾತು ಹೇಳಿದರು.

ಶಾಸಕ ಜಿ.ಬಿ.ಜ್ಯೋತಿಗಣೇಶ್ ಮಾತನಾಡಿ, ಕಬಡ್ಡಿ ನಮ್ಮ ಮಣ್ಣಿನ ಆಟ. ಈ ಆಟ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಯಾಗುತ್ತಿರುವುದು ನಮ್ಮ ಹೆಮ್ಮೆ. ನಮ್ಮ ಕ್ರೀಡಾ ಪ್ರತಿಭೆಗಳು ಹೊರಹೊಮ್ಮಿ ಬೆಳಗಲು ಇಂತಹ ಪಂದ್ಯಾವಳಿಗಳು ವೇದಿಕೆಯಾಗಿವೆ ಎಂದು ತಿಳಿಸಿದರು.

ಸ್ಫೂರ್ತಿ ಡೆವಲಪರ್ಸ್ನ ವ್ಯವಸ್ಥಾಪಕ ನಿರ್ದೇಶಕ ಎಸ್.ಪಿ.ಚಿದಾನಂದ್ ಮಾತನಾಡಿ, ಕ್ರೀಡಾಪಟುಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಕ್ರೀಡಾಕೂಟ ಆಯೋಜನೆ ವಿಶೇಷ. ಸಿದ್ಧಗಂಗಾ ಸ್ಪೋರ್ಟ್ಸ್ ಅಸೋಸಿಯೇಷನ್‌ನವರು ಪ್ರತಿ ವರ್ಷ ಸಿದ್ಧಗಂಗಾ ಮಠದಲ್ಲಿ ಕಬಡ್ಡಿ ಪಂದ್ಯಾವಳಿ ಆಯೋಜನೆ ಮಾಡಲು ಹೊರಟಿರುವುದು ಶ್ಲಾಘನೀಯ ವಿಚಾರ. ಈ ಕಾರ್ಯಕ್ಕೆ ತಮ್ಮ ಸಂಪೂರ್ಣ ಸಹಕಾರವಿದೆ ಎಂದು ಹೇಳಿದರು.

ಅರ್ಜುನ ಪ್ರಶಸ್ತಿ, ಏಕಲವ್ಯ ಪ್ರಶಸ್ತಿ ಧ್ಯಾನ್ ಚಂದ್ ಪ್ರಶಸ್ತಿ ಪುರಸ್ಕೃತ ಹಿರಿಯ ಕಬಡ್ಡಿ ಆಟಗಾರ ಬಿ.ಸಿ.ಸುರೇಶ್ ಮಾತನಾಡಿ, ಜಗತ್ತಿನಲ್ಲಿ ಈಗ ಕ್ರಿಕೆಟ್ ನಂತರ ಕಬಡ್ಡಿ ಹೆಚ್ಚು ಜನಪ್ರಿಯವಾಗುತ್ತಿದೆ. ನಮ್ಮ ಮಣ್ಣಿನ ಕಬಡ್ಡಿಯನ್ನು ವಿವಿಧ ದೇಶಗಳ ಆಟಗಾರರು ಪ್ರಮುಖ ಕ್ರೀಡೆಯಾಗಿ ಆಡುತ್ತಿದ್ದಾರೆ. ಸ್ಥಳೀಯ ಕ್ರೀಡಾ ಪ್ರತಿಭೆಗಳನ್ನು ಗುರುತಿಸಿ ಅವರು ಭಾರತ ಕಬಡ್ಡಿ ತಂಡ ಸೇರಲು ಇಂತಹ ಕ್ರೀಡಾಕೂಟಗಳು ಪ್ರಮುಖ ವೇದಿಕೆಯಾಗಿವೆ ಎಂದು ಹೇಳಿದರು.

ಸಿದ್ಧಗಂಗಾ ಸ್ಪೋರ್ಟ್ಸ್ ಅಸೋಸಿಯೇಷನ್ ಗೌರವಾಧ್ಯಕ್ಷ ಎಚ್.ಎನ್. ದೀಪಕ್ ಮಾತನಾಡಿ, ಮೂರು ದಿನಗಳ ರಾಜ್ಯ ಮಟ್ಟದ ಕಬಡ್ಡಿ ಪಂದ್ಯಾವಳಿ ನಿರೀಕ್ಷೆ ಮೀರಿ ಯಶಸ್ವಿಯಾಗಿದೆ. ಇದಕ್ಕೆ ಎಲ್ಲಾ ರೀತಿ ಸಹಕಾರ ನೀಡಿದವರಿಗೆ ಅಭಿನಂದನೆಗಳು. ಸಹಸ್ರಾರು ಜನ ಕಬಡ್ಡಿ ಪಂದ್ಯಾವಳಿ ವೀಕ್ಷಣೆ ಮಾಡಿ ರೋಮಾಂಚನಗೊಂಡಿದ್ದಾರೆ. ವಿದ್ಯಾರ್ಥಿಗಳಿಗೆ ಪ್ರಮುಖ ಆಟವಾಗಿ ಕಬಡ್ಡಿ ಪ್ರೇರಣೆ ನೀಡಿದೆ ಎಂದು ಹೇಳಿದರು.

ಬೆಂಗಳೂರು ಬುಲ್ಸ್ ಕಬಡ್ಡಿ ತಂಡದ ಕೋಚ್ ಬಿ.ಸಿ.ರಮೇಶ್, ಪಿ.ಎನ್.ಕೆ. ಟೌನ್‌ಶಿಪ್ ಮಾಲೀಕರಾದ ಪಿ.ಎನ್.ಕೃಷ್ಣಮೂರ್ತಿ, ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಅಧ್ಯಕ್ಷ ಕೆ.ಆರ್.ರವೀಂದ್ರ, ಜಂಟಿ ಕಾರ್ಯದರ್ಶಿ ಮುನಿರಾಜು, ಜಂಟಿ ಕಾರ್ಯದರ್ಶಿ ಮಹಮದ್ ಇಸ್ಮಾಯಿಲ್, ಖಜಾಂಚಿ ನಟರಾಜ್, ನಿರ್ದೇಶಕ ರಮೇಶ್ ಸೇರಿ ಹಲವು ಹಿರಿಯ ಕಬಡ್ಡಿ ಆಟಗಾರರು, ಸಿದ್ಧಗಂಗಾ ಸ್ಪೋಟ್ಸ್ ಅಸೋಸಿಯೇಷನ್ ಅಧ್ಯಕ್ಷ ಆರ್.ಎಸ್. ವಿರೂಪಾಕ್ಷಯ್ಯ, ಉಪಾಧ್ಯಕ್ಷರಾದ ಕೆ.ಆರ್. ಸತೀಶ್, ಆರ್. ಗುರುಪ್ರಸಾದ್, ಆರ್.ಎಸ್. ಸೋಮಶೇಖರ್, ಬಿ.ಸಿ. ಮಲ್ಲಿಕಾರ್ಜುನ್, ಆರ್.ಎಚ್. ಶಿವಕುಮಾರ್, ಎಚ್.ಜಿ. ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಎಂ.ಪಿ. ಉಮಾಶಂಕರ್, ಕಾರ್ಯದರ್ಶಿ ಆರ್.ಎಂ. ಸಿದ್ಧರಾಜು, ಖಜಾಂಚಿ ಎ.ಜಿ. ಹರೀಶ್ ಹಾಗೂ ನಿರ್ದೇಶಕರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗ್ರಾಮೀಣ ಜನರಿಗೆ ಶುದ್ಧ ಕುಡಿಯುವ ನೀರು: ಶಾಸಕ ಕೆ.ಎಸ್.ಆನಂದ್
ದೇಶ ಉಳಿಯಲು ಹಿಂದೂ ಧರ್ಮ ಉಳಿಯಬೇಕು