ಉಡುಪಿ: ತುಳುನಾಡು ದೈವಾರಾಧನೆ, ನಾಗಾರಾಧನೆಯ ಮೂಲ ನೆಲೆಯಾಗಿದ್ದು, ನಮ್ಮ ಮಣ್ಣಿನ ಮೂಲ ಸಂಸ್ಕೃತಿ ತಿಳಿದುಕೊಳ್ಳಬೇಕಾದರೆ ತುಳು ಪಾಡ್ದನಗಳನ್ನು ಅಧ್ಯಯನ ಮಾಡಬೇಕು. ಜನಪದರಿಂದ ಬಾಯ್ದೆರೆಯಾಗಿ ಬಂದಿರುವ ಪಾಡ್ದನಗಳು ತುಳುವರ ಮಹಾಕಾವ್ಯಗಳಾಗಿವೆ ಎಂದು ನ್ಯಾಯವಾದಿ ಎಂ.ಶಾಂತಾರಾಮ್ ಶೆಟ್ಟಿ ಹೇಳಿದ್ದಾರೆ.
ಇದೇ ವೇಳೆ ಕರ್ನಾಟಕ ರಾಜ್ಯೋತ್ಸವ ಮತ್ತು ಜನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತೆ ಪಾಡ್ದನ ಗಾಯಕಿ ಸಿಂಧು ಗುಜರನ್ ಮೂಲ್ಕಿ ಅವರಿಗೆ 10 ಸಾವಿರ ರು. ನಗದು, ಅಕ್ಕಿ ಮುಡಿ ಸಹಿತ ಪಾಡ್ದನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.ಸಮಾರಂಭದ ಅಧ್ಯಕ್ಷತೆ ಹಿಸಿದ್ದ ಉಡುಪಿ ತುಳುಕೂಟದ ಅಧ್ಯಕ್ಷ ಬಿ. ಜಯಕರ ಶೆಟ್ಟಿ ಇಂದ್ರಾಳಿ ಅವರು ದೆಂದೂರು ದಯಾನಂದ ಕೆ ಶೆಟ್ಟಿ ಅವರು ಬರೆದಿರುವ ‘ಬನ್ನಂಜೆ ಕಲ್ಕುಡ’ ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿ, ಕಳೆದ 5 ವರ್ಷಗಳಿಂದ ಹಿರಿಯ ಜನಪದ ಸಾಧಕರನ್ನು ಗುರುತಿಸಿ ಪಾಡ್ದನ ಪುರಸ್ಕಾರ ನೀಡುವ ಕೊಲ್ಲುಕೃಷ್ಣ ಶೆಟ್ಟಿ ಫೌಂಡೇಶನ್ ಇತರರಿಗೆ ಮಾದರಿಯೆನಿಸಿದೆ ಎಂದರು.
ಹೃದಯಂ ಫೌಂಡೇಶನ್ ಮುಖ್ಯಸ್ಥ, ಉದ್ಯಮಿ ಸುಭಾಷ್ ಸಾಲಿಯಾನ್, ಹೊಟೇಲ್ ಉದ್ಯಮಿ ಚೇತನ್ ಕುಮಾರ್ ಶೆಟ್ಟಿ, ಜಯಂಟ್ಸ್ ಸಂಸ್ಥೆಯ ಕೇಂದ್ರೀಯ ಸಮಿತಿ ಸದಸ್ಯ ದಿನಕರ್ ಅಮೀನ್, ಕೊಲ್ಲುಕೃಷ್ಣ ಶೆಟ್ಟಿ ಫೌಂಡೇಶನ್ ಗೌರವಾಧ್ಯಕ್ಷೆ ದೀಪಾ ಚೇತನ್ಕುಮಾರ್ ಶೆಟ್ಟಿ, ಕಾರ್ಯದರ್ಶಿ ಗುಣವತಿ ದಯಾನಂದ ಶೆಟ್ಟಿ, ಕೋಶಾಧಿಕಾರಿ ಇಶಾನಿ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.ಇದೇ ವೇಳೆ ಪಿಯುಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಗಳಿಸಿ ಸಾಧನೆ ಮಾಡಿರುವ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಕೊಲ್ಲುಕೃಷ್ಣ ಶೆಟ್ಟಿ ಫೌಂಡೇಶನ್ ಅಧ್ಯಕ್ಷ ದಯಾನಂದ್ ಕೆ.ಶೆಟ್ಟಿ ದೆಂದೂರು ಸ್ವಾಗತಿಸಿದರು. ಪ್ರಕಾಶ ಸುವರ್ಣ ಕಟಪಾಡಿ ನಿರೂಪಿಸಿದರು.