ಏಪ್ರಿಲ್‌ 3ರಿಂದ ಸಿಂಗಟಾಲೂರು ಶ್ರೀ ವೀರಭದ್ರೇಶ್ವರ ದೇವರ ಜಾತ್ರಾ ಮಹೋತ್ಸವ

KannadaprabhaNewsNetwork |  
Published : Apr 03, 2025, 12:32 AM IST
2ಎಂಡಿಜಿ1. ಸಿಂಗಟಾಲೂರು ಶ್ರೀ ವಿರಭದ್ರೇಶ್ವರ ದೇವಸ್ಥಾನದ ಚಿತ್ರ.2ಎಂಡಿಜಿ1ಎ.ಸಿಂಗಟಾಲೂರು ಶ್ರೀವೀರಭದ್ರೇಶ್ವರ ದೇವರು. 2ಎಂಡಿಜಿ1ಬಿ.ಸಿಂಗಟಾಲೂರು ಶ್ರೀವೀರಭದ್ರೇಶ್ವರ ದೇವಸ್ಥಾನ ಟ್ರಷ್ಟ ಕಮೀಟಿ ಅಧ್ಯಕ್ಷ ಕರಬಸಪ್ಪ ಹಂಚಿನಾ‍ಳ ಚಿತ್ರ. | Kannada Prabha

ಸಾರಾಂಶ

ಗದಗ ಜಿಲ್ಲೆಯ ಕಪ್ಪತ್ತಗುಡ್ಡದ ಉತ್ತರ ಭಾಗದಲ್ಲಿನ, ತುಂಗಭದ್ರಾ ನದಿಯ ತೀರದ ನಂದಿಬೆಟ್ಟದ ಮೇಲೆ ಪ್ರಾಚೀನ ಕಾಲದಲ್ಲಿ ಸ್ಥಾಪಿತವಾಗಿರುವ ಮುಂಡರಗಿ ತಾಲೂಕಿನ ಸುಕ್ಷೇತ್ರ ಸಿಂಗಟಾಲೂರಿನ ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವ ಏ. 3ರಿಂದ 5ರ ವರೆಗೆ ಮೂರು ದಿನಗಳ ಕಾಲ ಅದ್ಧೂರಿಯಾಗಿ ಜರುಗಲಿದೆ.

ಶರಣು ಸೊಲಗಿ

ಮುಂಡರಗಿ: ಗದಗ ಜಿಲ್ಲೆಯ ಕಪ್ಪತ್ತಗುಡ್ಡದ ಉತ್ತರ ಭಾಗದಲ್ಲಿನ, ತುಂಗಭದ್ರಾ ನದಿಯ ತೀರದ ನಂದಿಬೆಟ್ಟದ ಮೇಲೆ ಪ್ರಾಚೀನ ಕಾಲದಲ್ಲಿ ಸ್ಥಾಪಿತವಾಗಿರುವ ಮುಂಡರಗಿ ತಾಲೂಕಿನ ಸುಕ್ಷೇತ್ರ ಸಿಂಗಟಾಲೂರಿನ ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವ ಏ. 3ರಿಂದ 5ರ ವರೆಗೆ ಮೂರು ದಿನಗಳ ಕಾಲ ಅದ್ಧೂರಿಯಾಗಿ ಜರುಗಲಿದೆ.

ಜಾತ್ರಾ ಮಹೋತ್ಸವದ ಅಂಗವಾಗಿ ಏ. 3ರಂದು ಸಂಜೆ 5 ಗಂಟೆಗೆ ಮಹಾ ರಥೋತ್ಸವ, ಆನಂತರ 7 ಗಂಟೆಗೆ ನಾಡಿನ ವಿವಿಧ ಹರಗುರುಚರಮೂರ್ತಿಗಳ ಸಾನ್ನಿಧ್ಯದಲ್ಲಿ, ಟ್ರಸ್ಟ್‌ ಕಮಿಟಿ ಅಧ್ಯಕ್ಷ ಕರಬಸಪ್ಪ ಹಂಚಿನಾಳ ಅವರ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭೆ ಹಾಗೂ ದಾನಿಗಳಿಗೆ ಸನ್ಮಾನ ಕಾರ್ಯಕ್ರಮ ಜರುಗಲಿದೆ. ಏ. 4ರಂದು ಬೆಳಗ್ಗೆ 9 ಗಂಟೆಗೆ ಅಗ್ನಿಮಹೋತ್ಸವ. ಏ. 5ರಂದು ಸಂಜೆ 6 ಗಂಟೆಗೆ ಓಕಳಿ ಕಾರ್ಯಕ್ರಮ ಜರುಗಲಿದೆ.

ತುಂಗೆಯ ತಟದಲ್ಲಿ: ಈ ದೇವಸ್ಥಾನದ ಮುಂದೆ ತುಂಗಭದ್ರೆ ಹರಿಯುತ್ತಿದ್ದರೆ, ಹಿಂದೆ ಹಸುರಿನಿಂದ ಕಂಗೊಳಿಸುವ ಕಪ್ಪತ್ತಗುಡ್ಡದ ಬೆಟ್ಟಗಳ ಸಾಲು ನೋಡುಗರನ್ನು ಮಂತ್ರಗೊಳಿಸುತ್ತವೆ. ಉತ್ತರ ಕರ್ನಾಟಕದಲ್ಲಿಯೇ ಇದೊಂದು ಸುಂದರ ಪ್ರೇಕ್ಷಣೀಯ ಧಾರ್ಮಿಕ ಕ್ಷೇತ್ರವಾಗಿದ್ದು, ವರ್ಷದ 12 ತಿಂಗಳೂ ನಿರಂತರವಾಗಿ ಸಾವಿರಾರು ಭಕ್ತರು ಇಲ್ಲಿಗೆ ಬಂದು ಶ್ರೀ ವೀರಭದ್ರೇಶ್ವರನ ದರ್ಶನಾಶೀರ್ವಾದ ಪಡೆಯುತ್ತಾರೆ.

ಈ ಜಾಗಕ್ಕೆ ಪ್ರತಿದಿನ ಒಂದು ಆಕಳು ಬಂದು ಅಲ್ಲಿದ್ದ ಹುತ್ತದ ಮೇಲೆ ಹಾಲು ಸುರಿಸುತ್ತಿತ್ತು. ಅದರ ಪಕ್ಕದ ಗವಿಯಲ್ಲಿ ತಪಸ್ಸುಗೈಯುತ್ತಿದ್ದ ಸಂತರೊಬ್ಬರು ಈ ಸ್ಥಳದ ಮಹತ್ವ ಅರಿತು, ಇಲ್ಲಿಯೇ ವೀರಭದ್ರೇಶ್ವರ ಮೂರ್ತಿ ಸ್ಥಾಪಿಸಿದರೆಂದು ಇತಿಹಾಸದ ಮೂಲಕ ತಿಳಿಯುತ್ತಿದೆ. ಎಡಭಾಗದಲ್ಲಿ ಭದ್ರಕಾಳಮ್ಮನ ದೇವಾಲಯ, ಮಧ್ಯದಲ್ಲಿರುವ ಗವಿಯಲ್ಲಿ ಈಶ್ವರ ಲಿಂಗಗಳಿವೆ.

2018ರಲ್ಲಿ ನಾಡಿನ ಭಕ್ತರ ಸಹಕಾರದಿಂದ ಸುಮಾರು ₹3 ಕೋಟಿಗೂ ಅಧಿಕ ವೆಚ್ಚದಲ್ಲಿ ನೂತನ ದೇವಸ್ಥಾನ ನಿರ್ಮಾಣ ಮಾಡಲಾಗಿದೆ. ವರ್ಷವಿಡಿ ದೇವಸ್ಥಾನಕ್ಕೆ ಬರುವ ಭಕ್ತರಿಗೆ ದೇವಸ್ಥಾನದ ಟ್ರಸ್ಟ್‌ ಕಮಿಟಿ ವತಿಯಿಂದ ನಿತ್ಯವೂ ಉಚಿತ ಪ್ರಸಾದದ ವ್ಯವಸ್ಥೆ ಇರುತ್ತದೆ. ಮಕರ ಸಂಕ್ರಾಂತಿಗೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಜನಸಾಗರ ಆಗಮಿಸಿ ಇಲ್ಲಿನ ತುಂಗಭದ್ರಾ ನದಿಯಲ್ಲಿ ಪುಣ್ಯಸ್ನಾನ ಮಾಡಿ ದೇವರ ದರ್ಶನ ಪಡೆದು ಹೋಗುತ್ತಾರೆ.

ಪ್ರತಿ ವರ್ಷವೂ ಜಾತ್ರೆಗೆ ಬರುವ ಭಕ್ತರಿಗೆ ವಾಸ್ತವ್ಯ ಮಾಡುವುದಕ್ಕಾಗಿ ಯಾತ್ರಾ ನಿವಾಸ ಹಾಗೂ ದೇವಸ್ಥಾನದ ವಸತಿ ಕೊಠಡಿಗಳಿವೆ. ದೇವಸ್ಥಾನಕ್ಕೆ ಬರುವ ಶ್ರೀಗಳಿಗೆ ಪ್ರತ್ಯೇಕ ವಾಸ್ತವ್ಯ ಹಾಗೂ ಪೂಜಾ ಕೊಠಡಿಗಳ ವ್ಯವಸ್ಥೆ ಮಾಡಲಾಗಿದೆ. ಅಲ್ಲದೇ ನೀರು ಹಾಗೂ ಮತ್ತಿತರ ಮೂಲ ಸೌಲಭ್ಯಗಳನ್ನು ದೇವಸ್ಥಾನ ಟ್ರಸ್ಟ್‌ ಕಮಿಟಿಯಿಂದ ಒದಗಿಸಲಾಗುತ್ತಿದೆ. ಜತೆಗೆ ಲೋಕೋಪಯೋಗಿ ಇಲಾಖೆಯ ಸುಸಜ್ಜಿತ ಪ್ರವಾಸಿ ಮಂದಿರವೂ ಇದೆ.

2020ರಲ್ಲಿ ದೇವಸ್ಥಾನದ ಪಕ್ಕದಲ್ಲಿರುವ ಭದ್ರಕಾಳಮ್ಮನ ದೇವಸ್ಥಾನವನ್ನು ಪುನರ್ ನಿರ್ಮಾಣ ಮಾಡಿ ಲೋಕಾರ್ಪಣೆ ಮಾಡಲಾಗಿದೆ. ಆನಂತರದಲ್ಲಿ ಈಶ್ವರ ದೇವಸ್ಥಾನ, ಕಳೆದ ವರ್ಷ ನಾಗದೇವಸ್ಥಾನವನ್ನೂ ಸಹ ನಿರ್ಮಾಣ ಮಾಡಲಾಗಿದೆ. ಕಳೆದ ವರ್ಷ ಜನವರಿಯಲ್ಲಿ ಗೋಟಗೋಡಿಯ ರಾಕ್ ಗಾರ್ಡನ್ ಮಾದರಿಯಲ್ಲಿ ಸುಮಾರು ₹2 ಕೋಟಿಗೂ ಅಧಿಕ ವೆಚ್ಚದಲ್ಲಿ ಉದ್ಯಾನ ನಿರ್ಮಿಸಿದ್ದು, ನೋಡುಗರನ್ನು ತನ್ನತ್ತ ಆಕರ್ಷಿಸುತ್ತಿದೆ.

ಇದೀಗ ಸಿಂಗಟಾಲೂರು ಕ್ಷೇತ್ರದಲ್ಲಿ ಸುಮಾರು ₹5 ಕೋಟಿಗಳ ಅಂದಾಜು ವೆಚ್ಚದಲ್ಲಿ ಶ್ರೀ ವೀರಭದ್ರೇಶ್ವರ ಕಲ್ಯಾಣ ಮಂಟಪ ನಿರ್ಮಾಣ ಕಾರ್ಯ ಕೈಗೆತ್ತಿಕೊಂಡಿದ್ದು, ಭಕ್ತರ ಸಹಾಯ, ಸಹಕಾರದಿಂದ ಕಾಮಗಾರಿ ಭರದಿಂದ ಸಾಗುತ್ತಿದೆ. ಇದಾದ ನಂತರ ಕೊರ್ಲಹಳ್ಳಿ ಸೇತುವೆ ಬಳಿ ಸಿಂಗಟಾಲೂರು ಶ್ರೀ ವೀರಭದ್ರೇಶ್ವರ ದ್ವಾರ ಬಾಗಿಲನ್ನು ನಿರ್ಮಿಸಲು ದೇವಸ್ಥಾನ ಟ್ರಸ್ಟ್‌ ಕಮಿಟಿ ಯೋಚಿಸುತ್ತಿದೆ. ಭಕ್ತರಿಗೆ ಸಕಲ ಅನುಕೂಲ: ಸಿಂಗಟಾಲೂರಿನ ಶ್ರೀ ವೀರಭದ್ರೇಶ್ವರ ಜಾತ್ರೆ ವರ್ಷದಿಂದ ವರ್ಷಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುತ್ತಿದ್ದು, ರಾಜ್ಯದ ವಿವಿಧ ಜಿಲ್ಲೆಗಳಿಂದ ಭಕ್ತ ಸಾಗರವೇ ಹರಿದು ಬರುತ್ತಿದೆ. ದೇವಸ್ಥಾನಕ್ಕೆ ತೆರಳಲು ಉತ್ತಮವಾದ ರಸ್ತೆ ಇದ್ದು, ಮುಂಡರಗಿ ಹಾಗೂ ಹೂವಿನಹಡಗಲಿಯಿಂದ ಬಸ್ಸಿನ ವ್ಯವಸ್ಥೆ ಇರುತ್ತದೆ. ಬರುವ ಭಕ್ತರಿಗೆ ಎಲ್ಲ ರೀತಿಯ ಅನುಕೂಲ ಕಲ್ಪಿಸಲಾಗಿದೆ. ನಾಡಿನ ಭಕ್ತರ ಹಾಗೂ ಟ್ರಸ್ಟ್‌ ಕಮಿಟಿ ಎಲ್ಲ ಪದಾಧಿಕಾರಿಗಳ ಸಹಾಯ, ಸಹಕಾರದಿಂದ ದೇವಸ್ಥಾನದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದ್ದು, ಇದೀಗ ಕಲ್ಯಾಣ ಮಂಟಪದ ಕಾರ್ಯವನ್ನು ಕೈಗೆತ್ತಿಕೊಂಡಿದ್ದು, ಎಂದಿನಂತೆ ಭಕ್ತರು ಸಹಕರಿಸುವ ನಂಬಿಕೆ ಇದೆ, ಭಕ್ತರ ಸಹಕಾರವೇ ಈ ದೇವಸ್ಥಾನಕ್ಕೆ ಆನೆ ಬಲವಿದ್ದಂತೆ ಎಂದು ಸುಕ್ಷೇತ್ರ ಸಿಂಗಟಾಲೂರು ಶ್ರೀ ವೀರಭದ್ರೇಶ್ವರ ದೇವಸ್ಥಾನ ಟ್ರಸ್ಟ್‌ ಕಮಿಟಿ ಅಧ್ಯಕ್ಷ ಕರಬಸಪ್ಪ ವಿ. ಹಂಚಿನಾಳ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಾನೂನಿನ ಜ್ಞಾನ ಪಡೆಯುವುದು ಅರಣ್ಯವಾಸಿಯ ಮೂಲಭೂತ ಕರ್ತವ್ಯ: ರಂಜಿತಾ
ನೋಂದಾಯಿಸಿದ ಎಲ್ಲ ರೈತರ ಮೆಕ್ಕೆಜೋಳ ಖರೀದಿ: ಸೋಮಣ್ಣ ಉಪನಾಳ