ಕನ್ನಡಪ್ರಭ ವಾರ್ತೆ ಹುಣಸೂರು ಚುನಾವಣಾ ಆಯೋಗ ರಾಜ್ಯದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಕಾರ್ಯ ಆರಂಭಗೊಂಡಿದ್ದು, ತಾಲೂಕಿನಲ್ಲಿ ಪಕ್ಷದಿಂದ ನೇಮಕಗೊಂಡಿರುವ ಬಿಎಲ್ಎ 1 ಮತ್ತು ಬಿಎಲ್ಎ 2ಗಳು ತೀವ್ರ ನಿಗಾವಹಿಸಿ ಪಕ್ಷದ ಮತದಾರರನ್ನು ಉಳಿಸಿಕೊಳ್ಳುವತ್ತ ಕಾರ್ಯೋನ್ಮುಖರಾಗಬೇಕೆಂದು ಶಾಸಕ ಜಿ.ಡಿ. ಹರೀಶ್ಗೌಡ ಸೂಚಿಸಿದರು.ಪಟ್ಟಣದ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಬುಧವಾರ ಪಕ್ಷದ ವತಿಯಿಂದ ನೇಮಕಗೊಂಡ ಬಿಎಲ್ಎ 2ಗಳಿಗೆ ಎಸ್ಐಆರ್ ಕುರಿತಾದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.2002ರ ನಂತರ ದೇಶದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ನಡೆದಿಲ್ಲ. ಕೇಂದ್ರ ಚುನಾವಣಾ ಆಯೋಗ ಎಸ್ಐಆರ್ ಪ್ರಕ್ರಿಯೆಯನ್ನು ಬಹಳ ಗಂಭೀರವಾಗಿ ಪರಿಗಣಿಸಿ ಅರ್ಹರಲ್ಲದ ಮತದಾರರನ್ನು ಶಾಶ್ವತವಾಗಿ ಕಿತ್ತುಹಾಕುತ್ತಿದೆ. ಇದೀಗ ತಾಲೂಕಿನಲ್ಲಿ ಮ್ಯಾಪಿಂಗ್ ಕಾಂರ್ ಪ್ರಗತಿಯಲ್ಲಿದೆ. ಪಕ್ಷದಿಂದ ಪಕ್ಷದ ಹಿರಿಯ ಮುಖಂಡ ಸತೀಶ್ ಪಾಪಣ್ಣ ಬಿಎಲ್ಎ 1 ಆಗಿ ನೇಮಕಗೊಂಡಿದ್ದು, ಎಲ್ಲ 274 ಬೂತ್ ಗಳಿಗೂ ಪಕ್ಷದ ವತಿಯಿಂದ ಬಿಎಲ್ಎ 2ಗಳನ್ನು ನೇಮಕ ಮಾಡಲಾಗಿದೆ. ನೀವು ನಿಮ್ಮ ವ್ಯಾಪ್ತಿಯ ಬೂತ್ಗಳಲ್ಲಿ ಮ್ಯಾಪಿಂಗ್ ಮಾಹಿತಿ ಪಡೆದು ಮತದಾರರು ಸೂಕ್ತ ದಾಖಲೆಗಳನ್ನು ನೀಡದಿದ್ದಲ್ಲಿ ಅವುಗಳ ಸಲ್ಲಿಕೆಗೆ ಅಗತ್ಯ ಕ್ರಮಗಳನ್ನು ಅನುಸರಿಸಿ. ಅನುಮಾನಗಳಿದ್ದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳನ್ನು ಸಂಪರ್ಕಿಸಿ ದಾಖಲೆಗಳ ಸಲ್ಲಿಕೆಗೆ ಕ್ರಮವಹಿಸಿರಿ ಎಂದು ಸೂಚಿಸಿದರು.ಉತ್ತಮ ಕಾರ್ಯ: ಎಸ್ಐಆರ್ ಚುನಾವಣಾ ಆಯೋಗ ನಡೆಸುತ್ತಿರುವ ಅತ್ಯುತ್ತಮ ಕಾರ್ಯವಾಗಿದೆ. ನಿಜವಾದ, ಅರ್ಹ ದೇಶವಾಸಿ ಮತದಾರರಿಗೆ ಅನ್ಯಾಯವಾಗಬಾರದೆಂಬ ಸದುದ್ದೇಶದಿಂದ ಆಯೋಗ ಕ್ರಮವಹಿಸಿದೆ. ಆದರೆ ನಮ್ಮ ಮತದಾರರು ತಮ್ಮ ದಾಖಲೆಗಳನ್ನು ಸಲ್ಲಿಸುವಲ್ಲಿ ವಿಫಲವಾದಲ್ಲಿ ನಾವು ಮತ ಕಳೆದುಕೊಳ್ಳಬೇಕಾಗುತ್ತದೆ. ನಿಮ್ಮ ಅನುಮಾನಗಳನ್ನು ಪಕ್ಷದಿಂದ ನೇಮಕಗೊಂಡ ಬಿಎಲ್ಎ 1 ರಲ್ಲಿ ಅರಿಕೆ ಮಾಡಿಕೊಂಡು ಮುಂದುವರೆಯಿರಿ. ಒಮ್ಮೆ ಡಿಲೀಟ್ ಆದ ಹೆಸರು ಮತ್ತೆ ಇನ್ಯಾವ ಕಾರಣಕ್ಕೂ ಸೇರ್ಪಡೆಗ ಸಾಧ್ಯವಿಲ್ಲವೆನ್ನುವುದು ನಿಮ್ಮೆಲ್ಲರ ಗಮನದಲ್ಲಿರಲಿ ಎಂದರು .ಪಕ್ಷದ ವಕ್ತಾರ ಅಶ್ವಿನ್ ಕುಮಾರ್, ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ, ಮ್ಯಾಪಿಂಗ್ ಮುಂತಾದವುಗಳ ಕುರಿತು ಮಾಹಿತಿ ನೀಡಿ ಅನುಮಾನಗಳನ್ನು ಪರಿಹರಿಸಿಕೊಳ್ಳುವ ಕುರಿತು ತರಬೇತಿ ನೀಡಿದರು. ಪಕ್ಷದ ತಾಲೂಕು ಅಧ್ಯಕ್ಷ ಎಂ.ಬಿ. ಸುರೇಂದ್ರ, ಪ್ರಧಾನ ಕಾರ್ಯದರ್ಶಿ ಸತೀಶ್ಕುಮಾರ್, ನಗರಾಧ್ಯಕ್ಷ ಎಸ್. ಶರವಣ, ಮುಖಂಡರಾದ ಗಣೇಶ್ ಗೌಡ, ಸತೀಶ್ ಪಾಪಣ್ಣ, ನಗರಸಭೆ ಮಾಜಿ ಸದಸ್ಯ ಕೃಷ್ಣರಾಜ ಗುಪ್ತ, ಪ್ರಭು, ಲೋಕೇಶ್, ಷಫಿ, ಬಿಎಲ್ಎ 2 ಗಳು ಇದ್ದರು.