ಕನ್ನಡಪ್ರಭ ವಾರ್ತೆ ಸಿರಿಗೆರೆ
ಶ್ರೀ ತರಳಬಾಳು ಜಗದ್ಗುರು ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ 34ನೇ ಶ್ರದ್ಧಾಂಜಲಿ ಸಮಾರಂಭವನ್ನು ಸಡಗರದಿಂದ ಆಚರಿಸಲು ಸಿರಿಗೆರೆ ಸಜ್ಜುಗೊಂಡಿದೆ. ಈ ಬಾರಿ ಮೂರು ದಿನಗಳ ಕಾಲ ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರ ದಿವ್ಯ ಸಾನ್ನಿಧ್ಯದಲ್ಲಿ ಸಮಾರಂಭವನ್ನು ಆಯೋಜಿಸಲಾಗಿದೆ.ಮೂರು ದಿನಗಳ ಕಾಲದ ಶ್ರದ್ಧಾಂಜಲಿಗೆ ನಾಡಿನ ಹಲವು ಭಾಗಗಳಿಂದ ಬರುವ ಭಕ್ತಾದಿಗಳಿಗೆ ದಾಸೋಹದ ವ್ಯವಸ್ಥೆಯನ್ನು ಸಹ ಮಾಡಲಾಗಿದೆ. ಅದಕ್ಕಾಗಿ ಕಾರ್ಯಕರ್ತರ ತಂಡ ಸಿದ್ಧಗೊಂಡಿದೆ.
ಗುರುಶಾಂತೇಶ್ವರ ದಾಸೋಹ ಭವನದ ಪಕ್ಕದಲ್ಲಿ ಬೃಹತ್ ಮಹಾಮಂಟಪವನ್ನು ನಿರ್ಮಾಣ ಮಾಡಲಾಗಿದೆ. ಮಂಟಪದ ಒಳಗೆ 5 ಸಾವಿರ ಜನರು ಕುಳಿತುಕೊಳ್ಳುವ ವ್ಯವಸ್ಥೆ ಮಾಡಲಾಗಿದೆ. ಮಹಾಮಂಟಪಕ್ಕೆ ಹೊಂದಿಕೊಂಡಂತೆ ವಿಶಾಲ ವೇದಿಕೆಯನ್ನು ನಿರ್ಮಾಣ ಮಾಡಲಾಗಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅನುಕೂಲವಾಗುವಂತೆ ವೇದಿಕೆ, ಧ್ವನಿವರ್ಧಕ, ಬೆಳಕಿನ ವ್ಯವಸ್ಥೆ ಹಾಗೂ ಮಂಟಪದ ಹೊರಗಡೆ ಕುಳಿತು ಕಾರ್ಯಕ್ರಮ ವೀಕ್ಷಿಸಲು ಎಲ್ಇಡಿ ಪರದೆಗಳನ್ನು ಅಳವಡಿಸಲಾಗಿದೆ.ಸಭಾ ಮಂಟಪದಿಂದ ಒಂದಿಷ್ಟು ದೂರದಲ್ಲಿಯೇ ದಾಸೋಹ ಮಂಟಪಗಳನ್ನು ನಿರ್ಮಿಸಲಾಗಿದೆ. ಸಮಾರಂಭಕ್ಕೆ ಆಗಮಿಸುವ ಭಕ್ತರಿಗೆ ಇಲ್ಲಿ ದಾಸೋಹ ವ್ಯವಸ್ಥೆ ಕಲ್ಪಿಸಲಾಗಿದೆ. ನಿತ್ಯವೂ ಸುಮಾರು 25 ಸಹಸ್ರ ಜನರಿಗಾಗುವಷ್ಟು ಊಟೋಪಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ. ಅಡಿಗೆ ಸಿದ್ಧಗೊಳಿಸಲು ನುರಿತ ತಂಡಗಳಿಗೆ ಗುತ್ತಿಗೆ ನೀಡಲಾಗಿದೆ. ಮಂಟಪದ ಒಳಗೆ ಬಫೆ ಮತ್ತು ಕುಳಿತು ಊಟ ಮಾಡುವ ವ್ಯವಸ್ಥೆ ಮಾಡಲಾಗಿದೆ. ಬಫೆ ಊಟ ಇಚ್ಚಿಸುವವರು ಸರದಿಯಲ್ಲಿ ಸಾಗಲು ಅನುಕೂಲವಾಗುವಂತೆ ಕೌಂಟರುಗಳ ಬಳಿ ಬ್ಯಾರಿಕೇಡ್ ನಿರ್ಮಿಸಲಾಗಿದೆ.
ಒಳಗೆ ವಿಶಾಲ ವೇದಿಕೆಯನ್ನು ನಿರ್ಮಿಸಿದ್ದು ಸಭಾ ಕಾರ್ಯಕ್ರಮಗಳನ್ನು ಇಲ್ಲಿ ಆಯೋಜಿಸಲಾಗಿದೆ. ಮಹಾಮಂಟಪದ ಒಳಗೆ ಶರಣರ ನುಡಿಮುತ್ತುಗಳು, ಶಿವಕುಮಾರ ಶ್ರೀಗಳ ಅಮೃತವಾಣಿಗಳ ಫ್ಲೆಕ್ಸ್ಗಳನ್ನು ಅಳವಡಿಸಲಾಗಿದೆ. ಮಠದ ಆಶ್ರಯದಲ್ಲಿ ನಡೆಯುವ ಶಾಲಾ ಕಾಲೇಜುಗಳು, ಹಾಸ್ಟೆಲುಗಳು, ಮಠದ ಆವರಣ, ಐಕ್ಯಮಂಟಪ, ಆಡಳಿತ ಕಚೇರಿಗಳಿಗೆ ವಿದ್ಯುತ್ ಅಲಂಕಾರ ಮಾಡಲಾಗಿದೆ. ಸಿರಿಗೆರೆ ಪ್ರಮುಖ ಬೀದಿಗಳಲ್ಲಿ ಬಣ್ಣಬಣ್ಣದ ಸೀರಿಯಲ್ ಲೈಟ್ ಅಳವಡಿಸಲಾಗಿದೆ. ಸಭಾ ಮಂಟಪದಿಂದ ಆನತಿ ದೂರದವರೆಗೂ ಕೇಳುವಂತೆ ಊರಿನ ಪ್ರಮುಖ ರಸ್ತೆಗಳಲ್ಲಿ ಧ್ವನಿವರ್ಧಕ ಅಳವಡಿಸಲಾಗಿದೆ.22ರ ಬೆಳಗ್ಗೆ 11 ಗಂಟೆಗೆ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ಆಶ್ರಯದ ಶಾಲಾ ಕಾಲೇಜುಗಳಲ್ಲಿ ಎಸ್ಎಸ್ಎಲ್ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಗಳಲ್ಲಿ ಅತಿ ಹೆಚ್ಚು ಅಂಕಗಳನ್ನು ಗಳಿಸಿ ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಗುವುದು.
ಜಿಲ್ಲಾ ಪಂಚಾಯಿತಿ ಸಿಇಒ ಡಾ.ಎಸ್.ಆಕಾಶ್, ಪದವಿ ಪೂರ್ವ ಶಿಕ್ಷಣ ಉಪನಿರ್ದೇಶಕ ಕೆ. ತಿಮ್ಮಯ್ಯ, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.ಸಂಜೆ 6 ಗಂಟೆಗೆ ನಡೆಯಲಿರುವ ವೇದಿಕೆ ಕಾರ್ಯಕ್ರಮದಲ್ಲಿ ಬೆಂಗಳೂರಿನ ಬೇಲಿಮಠದ ಶಿವರುದ್ರ ಸ್ವಾಮೀಜಿ ಆಶೀರ್ವಚನ ನೀಡುವರು. ಸಂಸದ ಗೋವಿಂದ ಕಾರಜೋಳ, ಶಾಸಕ ಕೆ.ಎಸ್. ಬಸವಂತಪ್ಪ, ಬಿ. ದೇವೇಂದ್ರಪ್ಪ, ಶಿವಮೊಗ್ಗ ಕೃಷಿ ವಿವಿ ಕುಲಪತಿ ಆರ್.ಸಿ. ಜಗದೀಶ್, ಮಾಜಿ ಶಾಸಕ ಬೆಳ್ಳಿ ಪ್ರಕಾಶ್, ಬೆಸ್ಕಾಂ ಅಧೀಕ್ಷಕ ಅಭಿಯಂತರ ಕೆ.ಸಿ. ಕೋಮಲ, ಚಿತ್ರನಟ ಶ್ರೀಧರ್ ಮುಂತಾದವರು ಭಾಗಿಯಾಗುವರು.
23ರಂದು ಬೆಳಗ್ಗೆ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ಹಿರಿಯ ವಿದ್ಯಾರ್ಥಿಗಳು ಮತ್ತು ನಿವೃತ್ತ ನೌಕರರ ಸಮಾವೇಶ ನಡೆಯುವುದು. ಸಂಜೆ 6 ಗಂಟೆಗೆ ನಡೆಯುವ ಸಭಾ ಕಾರ್ಯಕ್ರದಲ್ಲಿ ಗದಗಿನ ಅಭಿನವ ಶಿವಾನಂದ ಸ್ವಾಮೀಜಿ ಆಶೀರ್ವಚನ ನೀಡುವರು. ದಾವಣಗೆರೆ ಸಂಸದೆ ಪ್ರಭಾ ಮಲ್ಲಿಕಾರ್ಜುನ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಶಾಸಕ ಬಿ.ಪಿ. ಹರೀಶ್, ಕೆ.ಎಸ್. ನವೀನ್ಕುಮಾರ್, ಧನಂಜಯ ಸರ್ಜಿ, ಕುವೆಂಪು ವಿವಿ ಕುಲಪತಿ ಶರತ್ ಅನಂತಮೂರ್ತಿ, ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌದರಿ, ತುಂಕೋಸ್ ಅಧ್ಯಕ್ಷ ಎಚ್.ಎಸ್. ಶಿವಕುಮಾರ್ ಭಾಗಿಯಾಗುವರು.24 ರಂದು ಬೆಳಗ್ಗೆ 11 ಗಂಟೆಗೆ ನಡೆಯುವ ಶ್ರದ್ಧಾಂಜಲಿ ಸಮಾರಂಭದಲ್ಲಿ ಮೇಘಾಲಯ ರಾಜ್ಯಪಾಲ ಸಿ.ಎಚ್. ವಿಜಯಶಂಕರ್ ಗುರುವಂದನೆ ಮಾಡುವರು. ಎಚ್.ಆರ್. ಬಸವರಾಜಪ್ಪ ಅಧ್ಯಕ್ಷತೆ ವಜಹಿಸುವರು. ಮುಖ್ಯ ಅತಿಥಿಗಳಾಗಿ ಬಸವರಾಜ ಬೊಮ್ಮಾಯಿ, ಬಸವರಾಜ ಹೊರಟ್ಟಿ, ಕೃಷ್ಣ ಭೈರೇಗೌಡ, ಎಸ್. ಎಸ್. ಮಲ್ಲಿಕಾರ್ಜುನ್, ಜಿ.ಎಂ. ಸಿದ್ದೇಶ್ವರ್, ಡಿ.ಸುಧಾಕರ್ ಹಾಗೂ ಹಲವು ಶಾಸಕರು ಭಾಗವಹಿಸುವರು.