ಕನ್ನಡಪ್ರಭ ವಾರ್ತೆ ಉಡುಪಿ
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಉಡುಪಿ ತಾಲೂಕು ಘಟಕ, ಉಡುಪಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್, ಸಂಸ್ಕೃತಿ ಸಿರಿ ಟ್ರಸ್ಟ್ ಹಿರಿಯಡ್ಕ, ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಉಡುಪಿ ಆಶ್ರಯದಲ್ಲಿ ಸಾಹಿತಿ ದಿ.ಮೇಟಿ ಮುದಿಯಪ್ಪ ನೆನಪಿನ ಯುವ ಕಥಾ ಸ್ಪರ್ಧೆಯ ವಿಜೇತರರಿಗೆ ಬಹುಮಾನ ವಿತರಣೆ ಹಾಗೂ ಅವರ ಬದುಕು ಬರಹದ ಕುರಿತು ಉಪನ್ಯಾಸ ಕಾರ್ಯಕ್ರಮ ಉಡುಪಿಯ ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದಲ್ಲಿ ನಡೆಯಿತು.ಸಾಹಿತಿ ದಿ. ಮೇಟಿ ಮುದಿಯಪ್ಪನವರು ಮಾನವೀಯತೆ ಪ್ರಧಾನವಾದ ಬಹುಮುಖ ವ್ಯಕ್ತಿತ್ವ ಹೊಂದಿದವರು. ಕನಕದಾಸರ ಕುರಿತು ಉಡುಪಿಯಲ್ಲಿ ವಿವಾದ ಎದ್ದಾಗ ಅದನ್ನು ಅತ್ಯಂತ ಸೌಹಾರ್ದವಾಗಿ, ಸುಖಾಂತ್ಯವಾಗಿ ಮಾಡಲು ಅದರ ನೇತೃತ್ವವನ್ನು ವಹಿಸಿದವರು. ಮೇಟಿ ಅವರು ಸ್ನೇಹಜೀವಿಯಾಗಿ ಮತ್ತು ಭಾವ ಜೀವಿಯಾಗಿ ನಮ್ಮೆಲ್ಲರ ನಡುವೆ ಇದ್ದು ಅನೇಕ ನೆನಪುಗಳನ್ನು ಇಟ್ಟು ಮರೆಯಾದವರು ಎಂದು ವಿಮರ್ಶಕ, ಲೇಖಕ ಜಿ.ಪಿ. ಪ್ರಭಾಕರ್ ತುಮರಿ ಅವರು ಮೇಟಿ ಅವರೊಂದಿಗಿನ ನಾಲ್ಕು ದಶಕಗಳ ಒಡನಾಟದ ನೆನಪುಗಳನ್ನು ಮಾಡುತ್ತಾ ಮಾತನಾಡಿದರು.
ಯುವ ಕಥಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ಡಾ. ನಮ್ರತಾ ಬಿ., ದ್ವಿತೀಯ ಬಹುಮಾನ ಡಾ. ಜಿ.ಪಿ. ನಾಗರಾಜ್, ಮೆಚ್ಚುಗೆ ಬಹುಮಾನ ಪಡೆದ ರಾಮಾಂಜಿ ನಮ್ಮಭೂಮಿ, ಮಂಜುನಾಥ್ ಕಾರ್ತಟ್ಟು, ಮಂಜುನಾಥ್ ಹಿಲಿಯಾಣ ಅವರಿಗೆ ಬಹುಮಾನ ವಿತರಿಸಲಾಯಿತು.ತೀರ್ಪುಗಾರರಾಗಿ ಸಹಕರಿಸಿದ್ದ ಹಿರಿಯ ಸಾಹಿತಿ ಡಾ. ಜನಾರ್ದನ್ ಭಟ್ ಹಾಗೂ ತುಳು ಸಾಹಿತ್ಯ ಅಕಾಡೆಮಿಗೆ ಸದಸ್ಯರಾಗಿ ಆಯ್ಕೆಯಾದ ಉದ್ಯಾವರ ನಾಗೇಶ್ ಕುಮಾರ್ ಅವರನ್ನು ಗೌರವಿಸಲಾಯಿತು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಸಂಸ್ಕೃತಿ ಸಿರಿ ಟ್ರಸ್ಟ್ ಇದರ ವಿಶ್ವಸ್ಥ ಹಿರಿಯಡ್ಕ ಮುರಳೀಧರ ಉಪಾಧ್ಯ, ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ನಿರಂಜನ ಚೋಳಯ್ಯ, ಮೇಟಿ ಮುದಿಯಪ್ಪ ಅವರ ಪುತ್ರಿ ಶಾಂತಾ ಮೇಟಿ ಉಪಸ್ಥಿತರಿದ್ದರು.ಕಸಾಪ ಉಡುಪಿ ತಾಲೂಕು ಅಧ್ಯಕ್ಷ ರವಿರಾಜ್ ಎಚ್.ಪಿ. ಆಶಯ ಮಾತುಗಳೊಂದಿಗೆ ಸ್ವಾಗತಿಸಿದರು. ಗೌರವ ಕಾರ್ಯದರ್ಶಿ ರಂಜಿನಿ ವಸಂತ್ ವಂದಿಸಿದರು. ಗೌರವ ಕಾರ್ಯದರ್ಶಿ ಜನಾರ್ದನ ಕೊಡವೂರು ನಿರೂಪಿಸಿದರು.
ಸಭಾ ಕಾರ್ಯಕ್ರಮದ ನಂತರ ಡಾ. ಶ್ರೀಪಾದ್ ಭಟ್ ನಿರ್ದೇಶನದ ಮಂಟೇಸ್ವಾಮಿ ಕಾವ್ಯ ಪ್ರಯೋಗ ಪ್ರದರ್ಶನಗೊಂಡಿತು.