ಸಾಂವಿಧಾನಿಕ ಮೌಲ್ಯಗಳ ಮೂಲಕ ಸಾಮಾಜಿಕ ಪಿಡುಗು ಎದುರಿಸಬೇಕು

KannadaprabhaNewsNetwork |  
Published : Sep 17, 2025, 01:08 AM IST
ನಿವೃತ್ತ ಮುಖ್ಯ ನ್ಯಾಯಾಧೀಶ ಗೋವಿಂದ ಮಾಥುರ್ ಮಾತನಾಡುತ್ತಿರುವುದು | Kannada Prabha

ಸಾರಾಂಶ

ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾ ಭವನದಲ್ಲಿ ಭಾನುವಾರ ಬಿ.ವಿ.ಕಕ್ಕಿಲ್ಲಾಯ ಪ್ರೇರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಭಾರತದ ಸನ್ನಿವೇಶದಲ್ಲಿ ಸಾಂವಿಧಾನಿಕ ಮತ್ತು ಸಾಮಾಜಿಕ ನೈತಿಕತೆಗಳ ಸಮತೋಲನ’ ಕುರಿತು ಉಪನ್ಯಾಸ ನೀಡಲಾಯಿತು.

ಮಂಗಳೂರು: ಸಾಂವಿಧಾನಿಕ ಮೌಲ್ಯಗಳು ಸರ್ವೋಚ್ಛವಾಗಿದ್ದು, ನಮ್ಮ ಕಣ್ಣೆದುರು ಕಾಣುವ ಸಾಮಾಜಿಕ ಪಿಡುಗುಗಳನ್ನು ಈ ಸಾಂವಿಧಾನಿಕ ಮೌಲ್ಯಗಳ ಮೂಲಕ ಎದುರಿಸಬೇಕು ಎಂದು ಅಲಹಾಬಾದ್ ಉಚ್ಚ ನ್ಯಾಯಾಲಯದ ವಿಶ್ರಾಂತ ಮುಖ್ಯ ನ್ಯಾಯಾಧೀಶ ಗೋವಿಂದ ಮಾಥುರ್ ಹೇಳಿದರು.ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾ ಭವನದಲ್ಲಿ ಭಾನುವಾರ ಎಂ.ಎಸ್. ಕೃಷ್ಣ ಮೆಮೋರಿಯಲ್ ಟ್ರಸ್ಟ್, ಸಮದರ್ಶಿ ವೇದಿಕೆ ಹಾಗೂ ಹೊಸತು ಪತ್ರಿಕೆಯ ಸಹಭಾಗಿತ್ವದಲ್ಲಿ ಬಿ.ವಿ.ಕಕ್ಕಿಲ್ಲಾಯ ಪ್ರೇರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಭಾರತದ ಸನ್ನಿವೇಶದಲ್ಲಿ ಸಾಂವಿಧಾನಿಕ ಮತ್ತು ಸಾಮಾಜಿಕ ನೈತಿಕತೆಗಳ ಸಮತೋಲನ’ ಎಂಬ ವಿಷಯದ ಕುರಿತು ಅವರು ಮಾತನಾಡಿದರು. ಒಮ್ಮೆ ಚುನಾವಣೆಯ ಬಳಿಕ ಓರ್ವರನ್ನು ನಮ್ಮ ಪ್ರತಿನಿಧಿಯಾಗಿ ಆರಿಸಿ ನಾವು ಅವರನ್ನು ಮರೆತುಬಿಡುತ್ತೇವೆ. ಮತ್ತೆ ಐದು ವರ್ಷಗಳ ನಂತರ ಚುನಾವಣೆ ಎದುರಿಸುತ್ತೇವೆ. ಆದರೆ ಸಾಮಾಜಿಕ ಪಿಡುಗುಗಳಾದ ಅಸ್ಪೃಶ್ಯತೆ, ಕೋಮುವಾದ, ಜಾತಿವಾದ, ಸಾಮಾಜಿ ಅಸಮಾನತೆ, ಹಣಬಲ, ತೋಳ್ಬಲದಂತಹ ಸಾಮಾಜಿಕ ಪಿಡುಗುಗಳು ಮುಂದುವರಿಯುತ್ತವೆ. ಇದನ್ನು ನಾವು ಪ್ರಶ್ನಿಸಬೇಕು. ಈ ಬಗ್ಗೆ ಜಾಗೃತರಾಗಬೇಕು ಎಂದು ಅವರು ಹೇಳಿದರು.

ಶಬ್ಧ ಹಾಗೂ ವಾಯು ಮಾಲಿನ್ಯಕ್ಕೆ ಸಂಬಂಧಿಸಿ ಸಲ್ಲಿಕೆಯಾದ ಸಾರ್ವಜನಿಕ ಹಿತಾಸಕ್ತಿ ಮನವಿ ಮೇರೆಗೆ ಸುಪ್ರೀಂ ಕೋರ್ಟ್ ೧೦ ಗಂಟೆಗೆ ಸೀಮಿತಗೊಳಿಸಿ ಆದೇಶ ನೀಡಿತ್ತು. ಆದರೆ ಸಾಮಾಜಿಕ ನೈತಿಕತೆ ನೆಲೆಯಲ್ಲಿ ಮೇಲ್ಮನವಿಗೆ ಸುಪ್ರೀಂ ಕೋರ್ಟ್ ಕೂಡಾ ೧೨ ಗಂಟೆಯವರೆಗೆ ಆದೇಶ ವಿಸ್ತರಿಸಿ, ಸ್ಥಳೀಯ ಆಡಳಿತಕ್ಕೆ ಅದರ ಜವಾಬ್ಧಾರಿಯನ್ನು ವಹಿಸಿದ ಪರಿಣಾಮ ನಾವು ಎದುರಿಸುತ್ತಿದ್ದೇವೆ. ನ್ಯಾಯಾಲಯ ಹಾಗೂ ನ್ಯಾಯಾಧೀಶರೂ ಕೂಡಾ ವ್ಯವಸ್ಥೆಯ ಭಾಗ ಆಗಿರುವ ಕಾರಣ ಅವರಿಗೂ ಕೆಲವೊಂದು ಮಿತಿಗಳಿವೆ. ಆದರೆ ಸಾರ್ವಜನಿಕ ಜೀವನದಲ್ಲಿ ಇರುವವರು ಇದರ ಬಗ್ಗೆ ಧ್ವನಿ ಎತ್ತುವ, ಸಾಂವಿಧಾನಿಕ ಮೌಲ್ಯಗಳ ಪರ ವಹಿಸುವ ಕಾರ್ಯ ಮಾಡಬೇಕೆಂದು ಅವರು ಕರೆ ನೀಡಿದರು.

ಹೊಸತು ಪತ್ರಿಕೆಯ ಸಂಪಾದಕ ಸಿದ್ಧನಗೌಡ ಪಾಟೀಲ್ ಇದ್ದರು.ಪ್ರಾಸ್ತಾವಿಕವಾಗಿ ಮಾತನಾಡಿದ ಖ್ಯಾತ ವೈದ್ಯ ಡಾ.ಶ್ರೀನಿವಾಸ ಕಕ್ಕಿಲ್ಲಾಯ, ೨೦೧೩ರಿಂದ ಬಿ.ವಿ. ಕಕ್ಕಿಲ್ಲಾಯ ಪ್ರೇರಿತ ಉಪನ್ಯಾಸ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ಯಾರು ಹೇಗೆ ಜೀವಿಸಬೇಕು, ಏನು ತಿನ್ನಬೇಕು, ಯಾವ ರೀತಿ ಹಬ್ಬ ಆಚರಿಸಬೇಕು ಎಂಬ ವೈಯಕ್ತಿಕ ಅಭಿಪ್ರಾಯಗಳನ್ನು ಸಮಾಜದ ಮೇಲೆ ಹೇರುವ ವ್ಯವಸ್ಥೆಯಡಿ ಸಂವಿಧಾನವೇ ಶ್ರೇಷ್ಟ ಎಂಬ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ನಡೆಸಿಕೊಂಡು ಬರಲಾಗುತ್ತಿದೆ. ರವೀಂದ್ರ ಕಲಾಭವನದಲ್ಲಿ ಈ ಕಾರ್ಯಕ್ರಮ ನಡೆಸುವ ನಿಟ್ಟಿನಲ್ಲಿ ಕಳೆದ ಕೆಲವು ವರ್ಷಗಳಿಂದೀಚೆಗೆ ಇದಕ್ಕೆ ಅನುಮತಿ ನೀಡುವಲ್ಲಿಯೂ ಮಂಗಳೂರು ವಿಶ್ವವಿದ್ಯಾನಿಲಯ ಹಿಂದೆ ಮುಂದೆ ನೋಡುವ ಪರಿಸ್ಥಿತಿ ಇದೆ. ಈ ಬಾರಿ ಇಲ್ಲಿ ಅನುಮತಿಗಾಗಿ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರ ನೆರವು ಪಡೆದು ಕುಲಪತಿಗೆ ಪತ್ರ ಬರೆದ ಬಳಿಕ ಅವಕಾಶ ದೊರಕಿದೆ ಎಂದು ಹೇಳಿದರು.ಪ್ರಕಾಶಕ ಕಲ್ಲೂರು ನಾಗೇಶ್ ನಿರೂಪಿಸಿದರು.

PREV

Recommended Stories

ಗ್ರಾಮೀಣ ಭಜನಾ ಮಂಡಳಿಗಳಲ್ಲಿ ತತ್ವಪದಗಳು ಜೀವಂತ
ರಾಮದುರ್ಗ ಧನಲಕ್ಷ್ಮೀ ಶುಗರ್ ಚುನಾವಣೆ: ಸತತ 4ನೇ ಬಾರಿಗೆ ಯಾದವಾಡರ ನೇತೃತ್ವಕ್ಕೆ ಜಯ