ಬಸರಿಕಟ್ಟೆಯಲ್ಲಿ ಯಶಸ್ವಿ ಅಮ್ಮ ಯೋಜನೆಯ ೩೪ನೇ ಉಚಿತ ಆರೋಗ್ಯ ಶಿಬಿರ
ತುಮ್ಕಾನೆಯ ಅಮ್ಮ ಫೌಂಡೇಷನ್ ನಿಂದ ಅಮ್ಮ ಯೋಜನೆಯಡಿ ಕೊಪ್ಪ ತಾಲೂಕಿನ ಬಸರಿಕಟ್ಟೆಯ ಸದ್ಗುರು ಸುವರ್ಣ ಸಭಾಭವನದಲ್ಲಿ ಭಾನುವಾರ ನಡೆದ ೩೪ ನೇ ಉಚಿತ ಆರೋಗ್ಯ ಶಿಬಿರ ಮತ್ತು ಪಲಾನುಭವಿಗಳಿಗೆ ಉಚಿತ ಕನ್ನಡಕಗಳ ವಿತರಣಾ ಕಾರ್ಯಕ್ರಮವನ್ನು ಬಸರಿಕಟ್ಟೆ ಪ್ರಗತಿ ಪರಕೃಷಿಕ ಕೆ.ಟಿ ಚನ್ನಕೇಶವ ಗೌಡ ಉದ್ಘಾಟಿಸಿದರು.ನರಸಿಂಹರಾಜಪುರದ ಲಯನ್ಸ್ ಕ್ಲಬ್ ಅಧ್ಯಕ್ಷ ಪಿ.ಜೆ. ಆಂಟೋಣಿ ಮಾತನಾಡಿ ಅಮ್ಮಫೌಂಡೇಷನ್ನ ಸಂಸ್ಥಾಪಕ ಸುಧಾಕರ್ ಶೆಟ್ಟಿ ತನ್ನ ತಾಯಿಯ ಮಾತಿನಂತೆ ಬಡವರ ಸಮಸ್ಯೆ ಅರಿತು ಅವರಿಗೆ ಸಹಾಯ ನೀಡಲು ಸ್ಥಾಪಿಸಿದ ಅಮ್ಮಫೌಂಡೇಷನ್ ಇಂದು ಶೃಂಗೇರಿ ಕ್ಷೇತ್ರದ ವ್ಯಾಪ್ತಿಯಲ್ಲಿ ಎಲ್ಲಾ ಕಡೆಗಳಲ್ಲಿಯು ತಮ್ಮ ಸೇವಾ ಕಾರ್ಯ ನಡೆಸುತ್ತಿದೆ. ಶ್ರೀಮಂತಿಕೆ ಬಂದರೆ ಅದರಲ್ಲಿ ಒಂದಷ್ಟು ಭಾಗವನ್ನು ಸಮಾಜದ ಉದ್ದಾರ, ಸೇವಾಕಾರ್ಯಗಳಿಗೆ ಬಳಸುವ ಮನೋಭಾವ ಸುಧಾಕರ ಶೆಟ್ಟಿಯವರಂತಹ ಕೆಲವೊಂದಷ್ಟು ಜನರಲ್ಲಿ ಮಾತ್ರ ಕಾಣಬಹುದಾಗಿದೆ. ಇಂತಹ ಸೇವಾಗುಣ ಇರುವವರು ರಾಜಕೀಯ ಕ್ಷೇತ್ರಕ್ಕೆ ಬಂದರೆ ಸಾಮಾಜಿಕ ಸೇವೆ ಮತ್ತಷ್ಟು ವಿಸ್ತಾರವಾಗಿ ಬೆಳೆಯಲು ಸಾಧ್ಯ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಸುಧಾಕರ್ ಶೆಟ್ಟಿ ಮಾತನಾಡಿ ಶೃಂಗೇರಿ ವಿಧಾನ ಸಭಾಕ್ಷೇತ್ರ ಕೊಪ್ಪ, ನರಸಿಂಹ ರಾಜಪುರ, ಶೃಂಗೇರಿ ಈ ಮೂರು ತಾಲೂಕುಗಳು ಮತ್ತು ಚಿಕ್ಕಮಗಳೂರಿನ ಖಾಂಡ್ಯ ಹೋಬಳಿ ಸೇರಿ ಶೃಂಗೇರಿ ವಿಧಾನಸಭಾ ಕ್ಷೇತ್ರವಾಗಿ ರೂಪುಗೊಂಡಿರುವ ಈ ಕ್ಷೇತ್ರ ಎಲ್ಲಾ ರೀತಿಯಿಂದ ಎಲ್ಲರಿಂದ ಒಂದು ರೀತಿಯ ತುಳಿತ ಕ್ಕೋಳಗಾದಂತೆ ಕಾಣುತ್ತಿದೆ. ಇಲ್ಲಿ ವಿದ್ಯಾವಂತರನ್ನು ಅವರು ಪಡೆದ ಶಿಕ್ಷಣಕೆ ತಕ್ಕಂತೆ ಉದ್ಯೋಗ ನೀಡಲು ಯಾವುದೇ ಕಂಪನಿಗಳು ಮುಂದೆ ಬರುತ್ತಿಲ್ಲ. ಕ್ಷೇತ್ರದಾಂತ್ಯ ಸರ್ಕಾರಿ ಆಸ್ಪತ್ರೆಗಳಿದ್ದರು ಸೌಲಭ್ಯಗಳ ಕೊರತೆಯಿಂದ ಶಿವಮೊಗ್ಗ, ಉಡುಪಿ, ಮಣಿಪಾಲ, ಮಂಗಳೂರಿನ ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾಗಿ ದುಬಾರಿ ಚಿಕಿತ್ಸೆ ಪಡೆಯ ಬೇಕಾದ ಸ್ಥಿತಿ ಎದುರಾಗಿದೆ ಇದನ್ನು ಮನಗಂಡು ಅಮ್ಮ ಫೌಂಡೇಷನ್ ಸ್ವಲ್ಪಮಟ್ಟಿಗಾದರು ಸಮಸ್ಯೆಗೆ ಪರಿಹಾರ ದೊರಕಿಸುವ ನಿಟ್ಟಿನಲ್ಲಿ ಉಚಿತ ಆರೋಗ್ಯ ಶಿಬಿರ, ಉಚಿತ ಕನ್ನಡಕಗಳ ವಿತರಣೆ, ಹಳ್ಳಿಗಾಡಿನ ರೋಗಿಗಳನ್ನು ಹುಡುಕಿ ಅವರಿಗೆ ಅಗತ್ಯವಿರುವ ವಾಟರ್ ಬೆಡ್, ವಾಕರ್ನಂತಹ ವೈದ್ಯಕೀಯ ಸಲಕರಣೆ ನೀಡಲಾಗುತ್ತಿದೆ ಎಂದರು. ಜಿಲ್ಲಾ ದಿಶ ಸಮಿತಿ ಸದಸ್ಯ ಮಣಿಕಂಠನ್ ಕಂದಸ್ವಾಮಿ, ಸದ್ಗುರು ವಿದ್ಯಾಸಂಸ್ಥೆ ಕಾರ್ಯದರ್ಶಿ ಜಿ.ಸಿ. ಗೋಪಾಲಕೃಷ್ಣ, ಅಮ್ಮ ಫೌಂಡೇಷನ್ ಯೋಜನಾಧಿಕಾರಿ ವೆಂಕಪ್ಪ ಆಚಾರ್, ಉದಯ ಸುವರ್ಣ ಹೇರೂರು, ಹರೀಶ್ ಹೊನ್ನಗುಂಡಿ, ರವೀಂದ್ರ ಗೌಡ ಹೆಗ್ಗಾರುಕೊಡಿಗೆ, ಶಾಂತಕುಮಾರ್ ಜೈನ್, ವೆಂಕಟೇಶ್, ಶ್ರೀಕಾಂತ್, ಉಮೇಶ್, ಅಮ್ಮಫೌಂಡೇಷನ್ ನಿರ್ದೇಶಕ ಪ್ರಭಾಕರ್ ಎಸ್. ಶೆಟ್ಟಿ, ಕಾರ್ಯನಿರ್ವಾಹಣಾಧಿಕಾರಿ ಜೆ.ಎಸ್ ಗುರುಪ್ರಸಾದ್, ಪೂರ್ಣವಧಿ ಕಾರ್ಯಕರ್ತರಾದ ಶಾಂತಮ್ಮ, ನಿತ್ಯಾ, ಸೌಮ್ಯ ಮುಂತಾದವರಿದ್ದರು.