ಸಾಮಾಜಿಕ ಬದ್ಧತೆ ಹೊಂದಿದ ಮಲ್ಲಾಡಿ ಕವಿತೆ: ಡಾ. ವಿನಯಾ ವಕ್ಕುಂದ

KannadaprabhaNewsNetwork | Published : Dec 23, 2024 1:03 AM

ಸಮಾಜದಲ್ಲಿ ತಪ್ಪುಗಳಿವೆ, ಅವರಲ್ಲೊ ತಪ್ಪುಗಳಿದ್ದಾವೆ ಎಂದು ಮಾತಾನಾಡುವುದು ಒಂದು ದಾಟಿ. ಆ ತಪ್ಪುಗಳ ಜತೆ ನಾನೂ ಇದ್ದೇನೆ ಎನ್ನುವಂತಹ ಆತ್ಮ ವಿಮರ್ಶೆ, ಯಾವ ಕಾಲದಲ್ಲಿ ನಾವು ಬದುಕುತ್ತಿದ್ದೇವೊ ನಾವು ಆ ಕಾಲದ ಭಾಗವೇ ಆಗಿರುತ್ತೇವೆ.

ಧಾರವಾಡ:

ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಬದ್ಧತೆ ಬಗ್ಗೆ ಮಾತಾಡುವುದು ತಪ್ಪು? ಅಪರಾಧವೇನೋ? ಸಾಮಾಜಿಕ ಬದ್ಧತೆ ಇರುವುದು ಒಳ್ಳೆಯ ಕವಿತೆ ಆಗಲಾರದೇನೋ? ಎನ್ನುವಂತ ತೊಳಲಾಟಕ್ಕೆ ಈಗಿನ ಕವಿಗಳು ಬಿದ್ದಿದ್ದಾರೆ ಎಂದು ಹಿರಿಯ ಲೇಖಕಿ ಡಾ. ವಿನಯಾ ವಕ್ಕುಂದ ಹೇಳಿದರು.

ಸಮುದಾಯ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವಿದ್ಯಾವರ್ಧಕ ಸಂಘದಲ್ಲಿ ಜೋಸೆಫ್ ಮಲ್ಲಾಡಿ ಅವರ ಸುಡುವ ಕನಸುಗಳು ಕವನ ಸಂಕಲನ ಬಿಡುಗಡೆಗೊಳಿಸಿ ಮಾತನಾಡಿದರು.

ಸಾಮಾಜಿಕ ಮತ್ತು ಜೀವನ ಬದ್ಧತೆ ಎರಡೂ ಬೇರೆ ಬೇರೆಯಲ್ಲ. ಎಷ್ಟೋ ಸಲ ದೊಡ್ಡ ಕವಿಗಳು ಕೂಡ ನಾನು ಬದ್ಧ ಕವಿಯಲ್ಲ, ಆದರೆ, ನಾನು ಜೀವನಕ್ಕೆ ಬದ್ಧನಾಗಿದ್ದಿನಿ ಎಂದು ಹೇಳುತ್ತಾರೆ. ಅಂದರೆ ಧಮನಿತರ ಪರವಾಗಿದ್ದೇನೆ ಎಂದರ್ಥವಲ್ಲವೇ? ಮನುಷ್ಯನಾಗುವುದೆಂದರೆ ನಾನೊಬ್ಬ ಬದುಕಬೇಕೆನ್ನುವ ಅವಕಾಶವಾದಿತನವನ್ನು ಕಳೆದುಕೊಳ್ಳದೇ ಮನುಷ್ಯನಾಗುವ ಪ್ರಕ್ರಿಯೆ. ಹಾಗಾಗಿ ಸಾಮಾಜಿಕ ಹಾಗೂ ಜೀವನದ ಬದ್ಧತೆ ಎನ್ನುವುದು ವಿರುದ್ಧಾರ್ಥಕ ಶಬ್ದಗಳಲ್ಲ ಎಂದು ಸ್ಪಷ್ಟಪಡಿಸಿದರು.

ಸಮಾಜದಲ್ಲಿ ತಪ್ಪುಗಳಿವೆ, ಅವರಲ್ಲೊ ತಪ್ಪುಗಳಿದ್ದಾವೆ ಎಂದು ಮಾತಾನಾಡುವುದು ಒಂದು ದಾಟಿ. ಆ ತಪ್ಪುಗಳ ಜತೆ ನಾನೂ ಇದ್ದೇನೆ ಎನ್ನುವಂತಹ ಆತ್ಮ ವಿಮರ್ಶೆ, ಯಾವ ಕಾಲದಲ್ಲಿ ನಾವು ಬದುಕುತ್ತಿದ್ದೇವೊ ನಾವು ಆ ಕಾಲದ ಭಾಗವೇ ಆಗಿರುತ್ತೇವೆ. ಆ ಕಾಲದಲ್ಲಿ ನಡೆಯುವಂತಹ ಎಲ್ಲ ವಿದ್ಯಮಾನಗಳು ನಮ್ಮ ಸಾಕ್ಷಿ ಪ್ರಜ್ಞೆಯಲ್ಲಿಯೇ ನಡೆಯುತ್ತಿರುತ್ತವೆ. ನಮ್ಮ ಮೌನ ಕೂಡ ಆ ಕೆಡಕನ್ನು ಬೆಳೆಸುತ್ತಲೇ ಇರುತ್ತದೆ. ಹಾಗಾಗಿ ಅಂತಹದ್ದೊಂದು ಅಪರಾಧಿ ಪ್ರಜ್ಞೆ ಈ ಕವಿತೆಗಳನ್ನು ಹೆಚ್ಚು ಮೃಧುವಾಗಿಸಿದೆ. ನಾನು ಕೂಡ ತಪ್ಪಿತಸ್ಥನೆ ಎನ್ನುವ ಪ್ರಶ್ನೆ ತುಂಬಾ ತೀವ್ರವಾಗಿ ಇಲ್ಲಿ ಹಲವಾರು ಕವನಗಳಲ್ಲಿ ವ್ಯಕ್ತವಾಗಿದೆ. ವರ್ತಮಾನ ಎದುರಿಟ್ಟುಕೊಂಡು ಕಾವ್ಯವನ್ನು ರಚನೆ ಮಾಡುವುದು ಬಹಳ ಸವಾಲಿನ ಕೆಲಸ, ಆ ಸವಾಲನ್ನು ಕವಿ ಜೋಸೆಫ್ ತುಂಬಾ ಮುಖ್ಯವಾದ ಧಾತುವಿನಲ್ಲಿ ಎದುರಿಸಿದ್ದಾರೆ. ಸಮಾಜದ ಪರವಾಗಿ ನಿಂತು ಕೆಲಸಮಾಡುವಂತಹ ವ್ಯಕ್ತಿ, ರಾಜ್ಯಮಟ್ಟದ ಪ್ರಶಸ್ತಿಗಳು ಬಂದರೂ ಕೂಡ ಅವರಲ್ಲಿರುವ ವಿನಮ್ರತೆ, ಧನ್ಯತೆ ಕಡಿಮೆ ಆಗಿಲ್ಲ ಎಂದು ಹೇಳಿದರು.

ನಿವೃತ್ತ ಪ್ರಾಚಾರ್ಯ ಡಾ. ಬಿ.ಜಿ. ಬಿರಾದಾರ ಮಾತನಾಡಿ, ಮಲ್ಲಾಡಿ ಅವರಿಗಿರುವ ಸಾಮಾಜಿಕ ಕಳಕಳಿಯೇ ಅವರನ್ನು ಉತ್ತಮ ಕವಿಯಾಗಿಸಿದೆ ಎಂದರು.

ವಕೀಲ ಅಮೋಘಸಿದ್ಧ ಮಾ. ಖೋಬ್ರಿ ಮಾತನಾಡಿದರು. ಸಮುದಾಯದ ಅಧ್ಯಕ್ಷ ಬಿ.ಐ. ಈಳಿಗೇರ ಅಧ್ಯಕ್ಷತೆ ವಹಿಸಿದ್ದರು. ಗೀಗೀ ಪದ ಕಲಾವಿದರಾದ ಯಲ್ಲಪ್ಪ ತಿರ್ಲುಕೊಪ್ಪ ಮತ್ತು ಸಂಗಡಿಗರಿಂದ ಗೀತಗಾಯನ ನಡೆಯಿತು. ಜೋಸೆಫ್ ಮಲ್ಲಾಡಿಯವರ ಎರಡು ಕವನಗಳನ್ನು ಹೇಮಂತ ಲಮಾಣಿ ಹಾಗೂ ಸಂಗಡಿಗರು ಶಾಸ್ತ್ರೀಯ ಸಂಗೀತದಲ್ಲಿ ಪ್ರಸ್ತುತ ಪಡಿಸಿದರು.

ಈರಣ್ಣ ಐನಾಪೂರ ಸ್ವಾಗತಿಸಿದರು. ಬಿ.ಎಚ್. ಕುರಿಯವರು ನಿರೂಪಿಸಿದರು. ಭೂಮಿ ಪತ್ತಾರ ವಂದಿಸಿದರು.