ಸಮಾಜದಲ್ಲಿ ಗೋಡೆಗಳನ್ನು ಕಟ್ಟುವ ಬದಲಿಗೆ, ವಿಭಜನೆಗಳಾಚೆಗೆ ಸೌಹಾರ್ದತೆಯ ಸೇತುವೆ ಕಟ್ಟಬೇಕಿದೆ ಎಂದು ಹೈಕೋರ್ಟ್ ನ್ಯಾಯಮೂರ್ತಿ ವಿ.ಶ್ರೀಶಾನಂದ ಕರೆ ನೀಡಿದರು.
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಸಮಾಜದಲ್ಲಿ ಗೋಡೆಗಳನ್ನು ಕಟ್ಟುವ ಬದಲಿಗೆ, ವಿಭಜನೆಗಳಾಚೆಗೆ ಸೌಹಾರ್ದತೆಯ ಸೇತುವೆ ಕಟ್ಟಬೇಕಿದೆ ಎಂದು ಹೈಕೋರ್ಟ್ ನ್ಯಾಯಮೂರ್ತಿ ವಿ.ಶ್ರೀಶಾನಂದ ಕರೆ ನೀಡಿದರು.
ನಗರದ ಸಿ.ಭೀಮಸೇನರಾವ್ ಕಾನೂನು ಮಹಾವಿದ್ಯಾಲಯ ಹಾಗೂ ಸ್ನಾತಕೋತ್ತರ ಪದವಿ ಅಧ್ಯಯನ ಕೇಂದ್ರದ ಸಹಯೋಗದಲ್ಲಿ ಶನಿವಾರ ಅಂಬೇಡ್ಕರ್ ಭವನದಲ್ಲಿ ಏರ್ಪಡಿಸಿದ್ದ ಪದವಿ ಪ್ರಮಾಣಪತ್ರ ಪ್ರದಾನ ಕಾರ್ಯಕ್ರಮ ‘ನ್ಯಾಯದೀಕ್ಷಾ’ ಉದ್ಘಾಟಿಸಿ ಮಾತನಾಡಿ, ಇಂದು ಭೌತಿಕ ಗೋಡೆಗಳಿಗಿಂತ, ಕಣ್ಣಿಗೆ ಕಾಣದ ಮಾನಸಿಕ ಮತ್ತು ಸಾಮಾಜಿಕ ಗೋಡೆಗಳು ಮನುಷ್ಯರನ್ನು ಹೆಚ್ಚು ದೂರ ಮಾಡುತ್ತಿವೆ. ಧರ್ಮ ಎಂಬ ಪದವನ್ನು ಯಾವುದೇ ಸೀಮಿತ ಅರ್ಥದಲ್ಲಿ ನೋಡಬಾರದು. ಧರ್ಮ ಎಂದರೆ ವಿಭಜನೆ ಅಲ್ಲ, ಎಲ್ಲರನ್ನೂ ಒಳಗೊಂಡ ಸಮಾಜ ನಿರ್ಮಾಣದ ಮೌಲ್ಯವಾಗಿ ಅರ್ಥೈಸಬೇಕು ಎಂದು ಹೇಳಿದರು.
ವಕೀಲರಾಗಿ ಹೊರಹೊಮ್ಮುತ್ತಿರುವ ಯುವ ಸಮೂಹ ನಿಮ್ಮ ತಂದೆ ತಾಯಿಗಳ ಕನಸುಗಳನ್ನು ಸಾಕಾರ ಮಾಡುತ್ತಿದ್ದಿರ ಎನ್ನುವ ಜವಾಬ್ದಾರಿ ಇರಲಿ. ಬಡತನದಿಂದ ಉದರ ಪೋಷಣೆಯೊಂದೆ ಅನಿವಾರ್ಯವಿದ್ದ ಕಾಲದಲ್ಲಿ, ತಮಗೆ ಸಿಗದ ಅವಕಾಶವನ್ನು, ತಮ್ಮ ಮಕ್ಕಳ ಮೂಲಕ ಯಶಸ್ವಿಗೊಳಿಸುವ ಪೋಷಕರ ಆಶಯಕ್ಕೆ ಸದಾ ಬೆಂಬಲವಾಗಿರಿ. ಅವರನ್ನು ಗೌರವಿಸುವಂತಹ ಮೊದಲ ದೀಕ್ಷೆ ಪಡೆಯಿರಿ ಎಂದರು.
ಕಾನೂನಿನ ಪದವಿಯ ಜತೆಗೆ, ಸಮಾಜಮುಖಿಯಾಗಿ ಕಲಿತ ಜ್ಞಾನವನ್ನು ತಲುಪಿಸುವುದು ಕೂಡ ಒಂದು ದೊಡ್ಡ ಹೊಣೆಗಾರಿಕೆ. ಏನಾದರಾಗು, ಮೊದಲು ಮಾನವನಾಗು ಎಂಬುದು ಕಾನೂನು ದೀಕ್ಷೆಯ ಮೊದಲ ಪಾಠವಾಗಬೇಕು. ಮಣ್ಣಿನಲ್ಲಿರುವ ಚಿನ್ನದ ನಿಕ್ಷೇಪ ಆಭರಣದ ರೂಪ ಪಡೆಯಲು ಸಾಕಷ್ಟು ಸಂಸ್ಕರಣಾ ಪಕ್ರಿಯೆಬೇಕು. ವಿದ್ಯಾರ್ಥಿಗಳು ಕೂಡ ಮಣ್ಣಿನಲ್ಲಿರುವ ಚಿನ್ನವಿದ್ದಂತೆ. ಅವರನ್ನು ಸಂಸ್ಕರಿಸಿ, ಪುಟವಿಟ್ಟ ಚಿನ್ನದಂತೆ ಪದವಿಧರರಾಗಿ ರೂಪಿಸಿದ ಶ್ರೇಯಸ್ಸು ವಿದ್ಯಾಸಂಸ್ಥೆಯದಾಗಿದೆ ಎಂದರು.
ವಿವಿಧ ಪವಿತ್ರ ಗ್ರಂಥಗಳು ನಮ್ಮ ಮನೆಯ ದೇವರ ಮನೆಯಲ್ಲಿರಲಿ, ಅದರೇ ಮನೆಯ ಹೊಸಲು ದಾಟಿದ ಕೂಡಲೆ ಎಲ್ಲರನ್ನೂ ಒಟ್ಟುಗೂಡಿಸುವ ಪವಿತ್ರ ಗ್ರಂಥವಾಗುವುದು ಭಾರತದ ಸಂವಿಧಾನ ಮಾತ್ರ. ಸಮಾಜದ ಪ್ರತಿಯೊಬ್ಬ ಪ್ರಜೆಯು ಭಾರತದ ಸಂವಿಧಾನವನ್ನು ಒಪ್ಪಿಕೊಂಡಿದ್ದೇವೆ. ಅದು ನಮ್ಮೆಲ್ಲರನ್ನು ಭದ್ರಪಡಿಸಿದೆ. ಎಲ್ಲರೂ ಸಂವಿಧಾನವನ್ನು ಎತ್ತಿ ಹಿಡಿಯುವ, ಅದರ ಅಡಿಯಲ್ಲಿ ರೂಪಿತವಾದ ಕಾನೂನಿನ ಮೂಲಕ ಜವಾಬ್ದಾರಿಯುತವಾಗಿ ಸಾಗುವ ಪ್ರಜ್ಞೆ ಬೇಕು ಎಂದು ತಿಳಿಸಿದರು.
ಪಂಚೆ ಉಡುವ ನ್ಯಾಕ್ ಕಲಿಯಿರಿ:
ಪುರುಷರು ಪಂಚೆ ಉಡುವ ನ್ಯಾಕ್ ಕಲಿತುಕೊಳ್ಳಿ. ನಾನು ಎಷ್ಟು ಹೊತ್ತಾದರು ಪಂಚೆಯಲ್ಲಿ ಇರಬಲ್ಲೆ, ಫುಟ್ ಬಾಲ್ ಕೂಡ ಆಡಬಲ್ಲೆ ಎಂದು ನ್ಯಾಯಮೂರ್ತಿಗಳು ನಗೆ ಚಟಾಕಿ ಹಾರಿಸಿದರು.
ರಾಜ ವಿಕ್ರಮಾದಿತ್ಯನ ಆಳ್ವಿಕೆಯಲ್ಲಿ ಪ್ರಜೆಗಳಿಗೆ ತ್ವರಿತ ಮತ್ತು ನಿಷ್ಪಕ್ಷಪಾತ ನ್ಯಾಯವನ್ನು ಒದಗಿಸಲು ನ್ಯಾಯದ ಗಂಟೆಯ ವ್ಯವಸ್ಥೆ ಇತ್ತು. ಕಾಲ ಬದಲಾದಂತೆ ಹಣಕಾಸು, ಆಧುನಿಕತೆ ಹಾಗೂ ವಿವಿಧ ಸಾಮಾಜಿಕ ಬದಲಾವಣೆಗಳ ಪರಿಣಾಮವಾಗಿ, ಮೌಲ್ಯಾಧಾರಿತ ನ್ಯಾಯ ವ್ಯವಸ್ಥೆಯ ಬಗ್ಗೆ ಜನರ ದೃಷ್ಟಿಕೋನ ಬದಲಾಗುತ್ತಿರುವುದು ಕಳವಳಕಾರಿಯಾಗಿದೆ ಎಂದರು.
ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷರಾದ ಜಿ.ಎಸ್.ನಾರಾಯಣ ರಾವ್, ಎನ್ಇಎಸ್ ಕಾರ್ಯದರ್ಶಿ ಎಸ್.ಎನ್.ನಾಗರಾಜ ಮಾತನಾಡಿದರು. ಸಹ ಕಾರ್ಯದರ್ಶಿ ಡಾ.ಪಿ.ನಾರಾಯಣ್ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಕಾಲೇಜಿನ ಪ್ರಾಂಶುಪಾಲ ಡಾ.ಎ.ಅನಲಾ ಅಧ್ಯಕ್ಷತೆ ವಹಿಸಿದ್ದರು.
ಗೌನ್ ಬದಲು ಶಲ್ಯ: ಸಂಸ್ಕೃತಿಯ ನ್ಯಾಯಧೀಕ್ಷೆ
ಸಾಮಾನ್ಯವಾಗಿ ಪದವಿ ಪ್ರಮಾಣಪತ್ರ ಪ್ರದಾನ ಸಮಾರಂಭದಲ್ಲಿದ್ದ ಗೌನ್ ಸಂಸ್ಕೃತಿಗೆ ತೆರೆ ಎಳೆದ ವಿದ್ಯಾರ್ಥಿಗಳು, ಶಲ್ಯದೊಂದಿಗೆ ನ್ಯಾಯದೀಕ್ಷೆ ಪಡೆದು ಸಂಭ್ರಮಿಸಿದರು. ಅತಿಥಿಗಳಾಗಿ ಭಾಗವಹಿಸಿದ್ದ ನ್ಯಾಯಮೂರ್ತಿಗಳು ಸೇರಿದಂತೆ ಎನ್ಇಎಸ್ ಆಡಳಿತ ಮಂಡಳಿ ಸದಸ್ಯರು ಶರ್ಟು, ಪಂಚೆ, ಮೈಸೂರು ಪೇಟ ಹಾಗೂ ವಿಶೇಷ ಶಲ್ಯದಲ್ಲಿ ಮಿಂಚಿದರು. ಜೊತೆಯಲ್ಲಿ ಶಾಸ್ತ್ರೀಯ ಸಂಗೀತದ ಹಿನ್ನೆಲೆ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗು ನೀಡಿತ್ತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.